ADVERTISEMENT

ಎ.ಐ ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆಯಬೇಕು: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:36 IST
Last Updated 21 ಫೆಬ್ರುವರಿ 2026, 6:36 IST
ಅರಮೇರಿ ಎಸ್.ಎಂ.ಎಸ್ ಅಕಾಡೆಮಿ ಹಾಗೂ ಯತಿ ಕ್ರಾಪ್ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಿದ್ದ 3 ದಿನಗಳ ಎ.ಐ ಸಾಕ್ಷರತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಅರಮೇರಿ ಎಸ್.ಎಂ.ಎಸ್ ಅಕಾಡೆಮಿ ಹಾಗೂ ಯತಿ ಕ್ರಾಪ್ ಸಂಸ್ಥೆ ಸಹಯೋಗದೊಂದಿಗೆ ಏರ್ಪಡಿಸಿದ್ದ 3 ದಿನಗಳ ಎ.ಐ ಸಾಕ್ಷರತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು   

ಮಡಿಕೇರಿ: ಎ.ಐ (ಕೃತಕ ಬುದ್ಧಿಮತ್ತೆ) ಕಲಿಕೆ ಉತ್ತಮ ಚೌಕಟ್ಟಿನಲ್ಲಿ ಎ.ಐ (ಕೃತಕ ಬುದ್ಧಿಮತ್ತೆ) ಕಲಿಕೆ ಉತ್ತಮ ಚೌಕಟ್ಟಿನಲ್ಲಿ ನಡೆದಾಗ ಅಭಿವೃದ್ಧಿ ಸಾಧ್ಯ ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ‍ಪಟ್ಟರು.

ಅರಮೇರಿ ಎಸ್.ಎಂ.ಎಸ್ ಅಕಾಡೆಮಿ ಹಾಗೂ ಯತಿ ಕ್ರಾಪ್ ಸಂಸ್ಥೆ ಸಹಯೋಗದೊಂದಿಗೆ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ 3 ದಿನಗಳ ಎ.ಐ ಸಾಕ್ಷರತಾ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಯುವ ಸಮಾಜ ಉತ್ತಮ ರೀತಿಯಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿ ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡಿ ಬಡತನ, ಅನಾಭಿವೃದ್ಧಿ ಮುಂತಾದವುಗಳಲ್ಲಿ ಬಳಲುತ್ತಿರುವವರ ಏಳಿಗೆಗೆ ಇದು ಕಾರಣವಾಗಬೇಕು ಎಂದರು.

ADVERTISEMENT

ಕೃಷಿ ಚಟುವಟಿಕೆಗಳಲ್ಲಿ ಎಐ ಹೇಗೆ ಬಳಸಬಹುದು ಹಾಗೂ ಎಐನ ಸುಧಾರಿತ ತಂತ್ರಜ್ಞಾನ ರೈತರಿಗೆ ಹೇಗೆ ನೆರವು ನೀಡುತ್ತದೆ ಎಂಬುದನ್ನು ತಿಳಿಯಪಡಿಸುವ ಪ್ರಯತ್ನ ಮಾಡಬೇಕು ಎಂದರು.

ಯತಿ ಕ್ರಾಪ್ ಸಂಸ್ಥೆಯ ಸಂಸ್ಥಾಪಕ ಕೆ.ಎಸ್.ಯತೀಶ್ ಮಾತನಾಡಿ, ‘ಬಡವರು ಹಾಗೂ ಮಧ್ಯಮ ವರ್ಗದವರಿಗೆ ಎ.ಐ ಶಿಕ್ಷಣ ಪಡೆಯುವುದು ಬಹಳ ದೊಡ್ಡ ಹೊರೆಯಂತಾಗುತ್ತಿದೆ. ಇದನ್ನು ನಿವಾರಿಸಲು ಸಂಸ್ಥೆಯು ಎ.ಐ ಕಾರ್ಡನ್ನು ಪರಿಚಯಿಸಿದ್ದು ಕಾರ್ಡ್ ಮೂಲಕ ಎಐ ಸಂಬಂಧಿತ ಯಾವುದೇ ಶಿಕ್ಷಣವನ್ನು ಅವರು ಪಡೆಯಬಹುದು’ ಎಂದರು.

ಒಂದು ಕಾರ್ಡ್ ಶಿಕ್ಷಣ, ವ್ಯಾಪಾರ, ಕೃಷಿ, ತಂತ್ರಜ್ಞಾನ. ವಿದ್ಯಾರ್ಥಿವೇತನ. ವಿದೇಶಿ ಶಿಕ್ಷಣ, ಮುಂತಾದವುಗಳ ಕುರಿತ ಮಾಹಿತಿಯನ್ನು ನೀಡುತ್ತದೆ ಎಂದರು.

ಪ್ರಾಂಶುಪಾಲರಾದ ಕುಸುಮ್ ಟಿಟೋ ಮಾತನಾಡಿ, ‘ವಿದ್ಯಾರ್ಥಿಗಳು ಮೂರು ದಿನಗಳಲ್ಲಿ ಎಐ ತಂತ್ರಜ್ಞಾನವನ್ನು ಬಳಸಿ  ಹಾಡುಗಳು, ವೆಬ್‌ಸೈಟ್, ಅಪ್ಲಿಕೇಶನ್ ಮುಂತಾದವುಗಳನ್ನು ಪ್ರಸ್ತುತಪಡಿಸಿದ್ದಾರೆ’ ಎಂದರು.

ವಿದ್ಯಾರ್ಥಿಗಳು ವಿವಿಧ ಗುಂಪುಗಳಾಗಿ ತಾವು ಎಐ ಮೂಲಕ ಸಿದ್ಧಪಡಿಸಿದ ವೆಬ್‌ಸೈಟ್, ಅಪ್ಲಿಕೇಶನ್, ಚಲನಚಿತ್ರ, ದೃಶ್ಯ ರೂಪಗಳನ್ನು ಒಳಗೊಂಡ ಕಥೆಯನ್ನು ಪ್ರಸ್ತುತಪಡಿಸಿ ಎಐ ಬಳಕೆಯ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.