ವಿರಾಜಪೇಟೆ: ಎರಡು ಶತಮಾನಕ್ಕು ಹೆಚ್ಚಿನ ಇತಿಹಾಸವಿರುವ ಪಟ್ಟಣದ ಸಂತ ಅನ್ನಮ್ಮ ಚರ್ಚ್ನ ವಾರ್ಷಿಕ ಮಹೋತ್ಸವವು ಭಾನುವಾರ ನಡೆಯಲಿದೆ.
ಉತ್ಸವದ ಅಂಗವಾಗಿ ಇಂದು ಸಂಜೆ 4ಕ್ಕೆ ಚರ್ಚ್ ಪ್ರಧಾನ ಧರ್ಮ ಗುರು ದಯಾನಂದ ಪ್ರಭು ಅವರ ನೇತೃತ್ವದಲ್ಲಿ ಧರ್ಮ ಗುರುಗಳಿಂದ ಆಡಂಬರ ಗಾಯನ ಬಲಿಪೂಜೆ ನಡೆಯಲಿದೆ. ಧರ್ಮಗುರು ಅಲ್ವಿನ್ ಡಿಸೋಜ ಪ್ರಬೋಧನೆಯನ್ನು ನಡೆಸಿಕೊಡಲಿದ್ದಾರೆ. ಸಂಜೆ 6ಕ್ಕೆ ವಿದ್ಯುತ್ ದೀಪಾಲಂಕೃತ ಮಂಟಪದೊಂದಿಗೆ ಸಮುದಾಯದವರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಪ್ರಸಾದ ಅಶಿರ್ವಾದ ನಡೆಯಲಿದೆ.
ಪುಸ್ತಕ ಬಿಡುಗಡೆ : ಉತ್ಸವದ ಸಂದರ್ಭ ಚರ್ಚ್ ಪ್ರಧಾನ ಧರ್ಮಗುರು ದಯಾನಂದ ಪ್ರಭು ಅವರ 20 ಕೃತಿ 'ಅಮರ ಬಲಿದಾನ' ಎಂಬ ಪುಸ್ತಕವನ್ನು ಧರ್ಮಗುರು ಆಲ್ವಿನ್ ಬಿಡುಗಡೆಗೊಳಿಸಲಿದ್ದಾರೆ. ಇ
ಚರ್ಚ್ ಇತಿಹಾಸ: ಸಂತ ಅನ್ನಮ್ಮ ಚರ್ಚ್ 1792ರಲ್ಲಿ ಕೊಡಗಿನ ರಾಜ ದೊಡ್ಡ ವೀರರಾಜೇಂದ್ರನಿಂದ ಸ್ಥಾಪನೆಗೊಂಡಿದೆ. 1792ರಲ್ಲಿ ನಡೆದ 3ನೇ ಮೈಸೂರು ಯುದ್ಧದ ಸಂದರ್ಭ ಟಿಪ್ಪು ಸುಲ್ತಾನನಿಂದ ತಪ್ಪಿಸಿಕೊಂಡು ಕರಾವಳಿ ಭಾಗದ ಕ್ರೈಸ್ತರು ಕೊಡಗಿಗೆ ಬರುತ್ತಾರೆ.ಧರ್ಮಗುರು ಜುವಾಂನ್ ಡಿಕೋಸ್ಟ ನೇತೃತ್ವದಲ್ಲಿ ರಾಜ ದೊಡ್ಡ ವೀರರಾಜೇಂದ್ರನ ಬಳಿ ಆಶ್ರಯ ಕೇಳುತ್ತಾರೆ. ವೀರರಾಜೇಂದ್ರಪೇಟೆಯಲ್ಲಿ ನೆಲೆಸುವಂತೆ ಹಾಗೂ ಅಲ್ಲಿ ಸಂತ ಅನ್ನಮ್ಮ ಚರ್ಚ್ ನಿರ್ಮಿಸಲು ಸಂಪೂರ್ಣ ಸಹಕಾರ ನೀಡುತ್ತಾನೆ. ಅದು ಕೊಡಗಿನ ಪ್ರಥಮ ಚರ್ಚ್ ಆಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ರಾಜ ದೊಡ್ಡ ವೀರರಾಜೇಂದ್ರ ನೀಡಿದ ಎರಡು ಎಣ್ಣೆ ದೀಪಗಳನ್ನು ದೇವಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
ಧರ್ಮಗುರು ಜುವಾಂನ್ ಡಿಕೋಸ್ಟ ಅವರು ಚರ್ಚ್ನ ಪ್ರಥಮ ಧರ್ಮಗುರುವಾಗಿ ನೇಮಕಗೊಂಡರು. ಸುಮಾರು 1869ರಲ್ಲಿ ಈಗಿರುವ ಗೋಥಿಕ್ ಶೈಲಿಯ ಚರ್ಚ್ ನಿರ್ಮಾಣಗೊಂಡಿತು. ಚರ್ಚ್ಗೋಪುರವು 152 ಅಡಿ ಎತ್ತರವಿದ್ದು, ತುದಿಯಲ್ಲಿ 6 ಅಡಿ ಎತ್ತರದ ಪಂಚಲೋಹದ ಶಿಲುಬೆಯನ್ನು ಅಳವಡಿಸಲಾಗಿದೆ. 1891ರಲ್ಲಿ ಫ್ರಾನ್ಸ್ನಿಂದ ಎರಡು ಬೃಹತ್ ಗಂಟೆಗಳನ್ನು ತಂದು ಗೋಪುರದಲ್ಲಿ ಅಳವಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.