
ಮಡಿಕೇರಿ: ಮತ್ತದೇ ಚರ್ಚೆ, ವಿವಿಧ ಕಾಮಗಾರಿಗಳ ಪೂರ್ಣಗೊಳಿಸಲು ಗಡುವು ನಿಗದಿ, ಹಲವು ಸಮಸ್ಯೆಗಳ ಪ್ರಸ್ತಾವ, ಈ ದೃಶ್ಯಗಳಿಗೆ ಇಲ್ಲಿ ಶನಿವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ)ಸಭೆಯಲ್ಲಿ ಕಂಡು ಬಂತು.
ಈ ಬಾರಿ ಸಮಿತಿಯ ಎಲ್ಲ ನಾಮನಿರ್ದೇಶಿತ ಸದಸ್ಯರು ಸಾಲು ಸಾಲಾಗಿ ಸಮಸ್ಯೆಗಳನ್ನು ಮುಂದಿಟ್ಟರು. ಸ್ಥಳೀಯ ಸಮಸ್ಯೆಗಳನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ವಿಶೇಷ ಎನಿಸಿತು.
ಪ್ರತಿ ಬಾರಿಯಂತೆ ಈ ಬಾರಿಯೂ ಜಲಜೀವನ ಮಿಷನ್ ಯೋಜನೆ, ಬಿಎಸ್ಎನ್ಎಲ್ ಅಧಿಕಾರಿಗಳ ಕಾರ್ಯವೈಖರಿಗಳೇ ಈ ಬಾರಿಯೂ ತೀವ್ರ ಟೀಕೆಗೆ ಗುರಿಯಾಯಿತು. ಅಮೃತ್–2 ಯೋಜನೆ ಹಾಗೂ ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿರುವ ಹಳೆಯ ತ್ಯಾಜ್ಯ ವಿಲೇವಾರಿ ಯೋಜನೆಗಳ ನಿರಾಶದಾಯಕ ಪ್ರಗತಿ ಕುರಿತು ಈ ಸಭೆಯಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅತೃಪ್ತಿ ವ್ಯಕ್ತಪಡಿಸಿದರು. ಯೋಜನೆಗಳ ಪೂರ್ಣಕ್ಕೆ ಮತ್ತಷ್ಟು ಗಡುವು ನೀಡಿದರು.
ಮೊದಲಿಗೆ, ಇಲ್ಲಿನ ಸ್ಟೀವರ್ಟ್ಹಿಲ್ನಲ್ಲಿರುವ ಹಳೆಯ ಕಸ ವಿಲೇವಾರಿ ಸಂಬಂಧಿಸಿದಂತೆ ಮಾತನಾಡಿದ ಯದುವೀರ್, ಏಳು ತಿಂಗಳಾದರೂ ಸಹ ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪ್ರಗತಿ ಆಗಿಲ್ಲ. ಕಳೆದ ದಿಶಾ ಸಭೆಯಲ್ಲಿ ಸ್ಪಷ್ಟ ನಿರ್ದೇಶನ ನೀಡಿದರೂ ಸಹ, ಪ್ರಗತಿ ಸಾಧಿಸಿಲ್ಲ. ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಿ’ ಎಂದು ಸೂಚಿಸಿದರು.
ನಗರಸಭೆ ಅಧ್ಯಕ್ಷೆ ಕಲಾವತಿ ಸಹ ಬೇಸರ ವ್ಯಕ್ತಪಡಿಸಿದರು. ಯೋಜನೆ ವಿಳಂಬಕ್ಕೆ ಯಥಾಪ್ರಕಾರ ಅಧಿಕಾರಿಗಳು ಮಳೆಯ ಕಾರಣವೊಡ್ಡಿದರು.
ಮತ್ತೆ ಪ್ರತಿಧ್ವನಿಸಿದ ಜಲಜೀವನ ಮಿಷನ್!
ಕಳೆದ ಸಭೆಯಲ್ಲಿ ಪ್ರಸ್ತಾಪವಾದ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿ ಕುರಿತ ಆಕ್ಷೇಪಗಳೇ ಈ ಬಾರಿಯ ಸಭೆಯಲ್ಲೂ ಪ್ರತಿಧ್ವನಿಸಿತು.
ಸಮಿತಿ ಸದಸ್ಯ ನಾಗೇಶ ಕುಂದಲ್ಪಾಡಿ ಅವರು, ‘ಜೆಜೆಎಂ ಕೆಲಸ ಕೆಲವೆಡೆ ಆಗಿಲ್ಲ. ಮೂರ್ನಾಡು ಬಿಟ್ಟರೆ ಬೇರೆ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರವೇ ಆಗಿಲ್ಲ. ಗುಣಮಟ್ಟವೂ ಸರಿ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿ ಯೋಜನೆ ಕುರಿತ ದೂರುಗಳ ಸುರಿಮಳೆಗರೆದರು.
ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಈಗಾಗಲೇ ಯೋಜನೆ ವಿಳಂಬಕ್ಕೆ ಗುತ್ತಿಗೆದಾರರಿಗೆ ₹ 1 ಕೋಟಿ ವಿಧಿಸಲಾಗಿದೆ. ಯೋಜನೆ ಪ್ರಗತಿಗೆ ಶಕ್ತಿಮೀರಿ ಪ್ರಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.
ಪ್ರತಿಕ್ರಿಯಿಸಿದ ಯದುವೀರ್, ‘ಗ್ರಾಮ ಪಂಚಾಯಿತಿಗಳ ಸಲಹೆಗಳನ್ನು ಸ್ವೀಕರಿಸಿ ಕಾಮಗಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ’ ಎಂದು ಸೂಚಿಸಿದರು.
ಅಧಿಕಾರಿಗಳ ವಿರುದ್ಧ ಮತ್ತೆ ಸಂಸದ ಗರಂ
‘ಅಧಿಕಾರಿಗಳು ಮಾತು ಕೇಳುತ್ತಿಲ್ಲ’ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ‘ಇಲ್ಲಿ ಒಂದು ರೀತಿ ಮಾತನಾಡಿ, ಫೀಲ್ಡ್ನಲ್ಲಿ ಉಡಾಫೆಯಿಂದ ಮಾತನಾಡುತ್ತಾರೆ ಎಂಬ ಮಾಹಿತಿ ಬಂದಿದೆ. ಇದು ಸರಿಯಲ್ಲ’ ಎಂದು ಖಂಡಿಸಿದರು.
ಸದಸ್ಯರಾದ ನಾಗೇಶ್ ಕುಂದಲ್ಪಾಡಿ, ಕಾಂತಿ ಸತೀಶ್, ಅರುಣ ಕುಮಾರಿ, ಡಾ.ನವೀನ್ ಕುಮಾರ್, ರಾಜೇಶ್ ಮುದ್ದಪ್ಪ, ಆರ್.ಕೆ.ಚಂದ್ರು, ಚೆಪ್ಪುಡಿರ ರಾಕೇಶ್ ಸೇರಿದಂತೆ ಹಲವು ಮಂದಿ ತಮ್ಮ ತಮ್ಮ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸಿ ಸಭೆಯ ಗಮನ ಸೆಳೆದರು.
ಹಾಸ್ಟೆಲ್ ಅಕ್ಕಿಯಲ್ಲಿ ಹುಳು; ಸುಜಾ ಕುಶಾಲಪ್ಪ ‘ಕೊಡ್ಲಿಪೇಟೆಯಲ್ಲಿರುವ ಅಲ್ಪಸಂಖ್ಯಾರ ವಿದ್ಯಾರ್ಥಿನಿಲಯದಲ್ಲಿ ಹುಳು ಹಿಡಿದ ಅಕ್ಕಿ ಇದೆ ಸ್ನಾನಕ್ಕೆ ಬಿಸಿ ನೀರೂ ಇಲ್ಲ ಬೇಯದ ಅನ್ನವನ್ನು ನೀಡುತ್ತಾರೆ. ನಿಮ್ಮ ಮಕ್ಕಳನ್ನೂ ಹೀಗೆಯೇ ನೋಡಿಕೊಳ್ಳುತ್ತಿದ್ದಿರಾ’ ಎಂದು ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ ಕಳೆದರಡು ತಿಂಗಳುಗಳಿಂದ ಅಧಿಕಾರಿಗಳು ಹಾಸ್ಟೆಲ್ಗೆ ತೆರಳಿ ಪರಿಶೀಲನೆಯನ್ನೆ ನಡೆಸಿಲ್ಲ. ಕೂಡಲೇ ಅಧಿಕಾರಿಯನ್ನು ಅಮಾನತುಗೊಳಿಸಿ ಎಂದೂ ಒತ್ತಾಯಿಸಿದರು.
ಕನ್ನಡ ಕಲಿಯದ ಅಧಿಕಾರಿಗೆ ತರಾಟೆ ಬಿಎಸ್ಎನ್ಎಲ್ ಅಧಿಕಾರಿಯೊಬ್ಬರು 2 ವರ್ಷವಾದರೂ ಕನ್ನಡ ಕಲಿಯದ ಕುರಿತು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲ ಇಲಾಖೆ ಅಧಿಕಾರಿಗಳ ಕಾರ್ಯನಿರ್ವಹಣೆಗೂ ಆಕ್ಷೇಪ ವ್ಯಕ್ತಪಡಿಸಿದರು. ಸಮಿತಿಯ ಸರ್ವ ಸದಸ್ಯರೂ ದೂರುಗಳ ಸುರಿಮಳೆಗರೆದರು. ‘ಇನ್ನು 3 ತಿಂಗಳ ನಂತರ ಕಾರ್ಯನಿರ್ವಹಿಸಲಿದೆ. ಅಲ್ಲಿಯವರೆಗೂ ಈ ಕುರಿತು ಸಂರ್ಪಕಿಸಬೇಡಿ ಎಂದು ಟವರ್ ಮುಂದೆ ಫಲಕ ಹಾಕಿ’ ಎಂದು ನಾಗೇಶ್ ಕುಂದಲ್ಪಾಡಿ ಹೇಳಿದಾಗ ಸಭೆಯಲ್ಲಿ ನಗೆಯ ಬುಗ್ಗೆ ಎದ್ದಿತು.
ಅಮೃತ್–2 ಯೋಜನೆ; ಎಸ್.ಪಿಗೆ ಮನೆಗೆ ಹೋಗಲು ಕಷ್ಟ! ಅಮೃತ್–2 ಯೋಜನೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ‘ಸ್ವತಃ ನನ್ನ ಮನೆಗೆ ಹೋಗಲೂ ಸಾಧ್ಯವಾಗುತ್ತಿಲ್ಲ. ವಾಹನ ನಿಲುಗಡೆಗೂ ಸಮಸ್ಯೆಯಾಗಿದ್ದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು. ‘ವಿರಾಜಪೇಟೆಯಲ್ಲೂ ಇದೇ ಸಮಸ್ಯೆ ಎದುರಾಗಿದೆ’ ಎಂದು ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಯದುವೀರ್: ನೀಡಿದ ಸೂಚನೆಗಳು ಕಾಡಾನೆ ಹುಲಿಗಳ ಸಂಖ್ಯೆ ಎಷ್ಟಿದೆ ಅರಣ್ಯ ಪ್ರದೇಶ ಎಷ್ಟಿದೆ ಎಂಬುದನ್ನು ಕುರಿತು ಅಧ್ಯಯನ ಮಾಡಿ ಕ್ರಿಟಿಕಲ್ ಕೇರ್ ಯೂನಿಟ್ ಕಾಮಗಾರಿ ಬೇಗ ಪೂರ್ಣಗೊಳಿಸಿ ಪ್ರಧಾನಮಂತ್ರಿ ಆವಾಸ್ ಯೋಜನೆ ಪ್ರಗತಿ ಇನ್ನಷ್ಟು ಚುರುಕುಗೊಳಿಸಿ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಹೆದ್ದಾರಿ ಸೇರಿ ರಸ್ತೆ ಬದಿಯಲ್ಲಿ ಗಿಡ ಗಂಟೆಗಳನ್ನು ಕಡಿಯಬೇಕು. ಗುಂಡಿ ಮುಚ್ಚಬೇಕು ಕೃಷಿ ಇಲಾಖೆಯಲ್ಲಿನ ಯೋಜನೆಗಳ ಕುರಿತು ಗ್ರಾಮ ಪಂಚಾಯಿತಿಗೆ ಮಾಹಿತಿ ಕರಪತ್ರ ನೀಡಿ