
ಸುಂಟಿಕೊಪ್ಪ: ಭಗವದ್ಗೀತೆ ಅಧ್ಯಯನದಿಂದ ಅಧ್ಯಾತ್ಮಿಕ ಮಾತ್ರವಲ್ಲದೆ ಲೌಕಿಕ ಜೀವನದಲ್ಲೂ ಯಶಸ್ಸು ಪಡೆಯಬಹುದು ಎಂದು ಪಂಡಿತ ಲೋಕಾನಂದ ಆರ್ಯ ಹೇಳಿದರು.
ಸಮೀಪದ ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ನಲ್ಲೂರು ಗ್ರಾಮದ ಬ್ರಹ್ಮಜ್ಞಾನ ಧ್ಯಾನ ಮಂದಿರ ಸಭಾಂಗಣದಲ್ಲಿ ಅಯೋಜಿಸಿದ್ದ ಗೀತಾ ಜ್ಞಾನಯಜ್ಞ ಕಾರ್ಯಕ್ರಮದಲ್ಲಿ ಭಗವದ್ಗೀತಾ ಪುಸ್ತಕವನ್ನು ಉಚಿತವಾಗಿ ನೀಡುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಬ್ರಿಟಿಷರ ಮೆಕಾಲೆ ಶಿಕ್ಷಣದಿಂದ ಭಾರತದಲ್ಲಿ ಗುರುಕುಲ ಪದ್ಧತಿ ಶಿಕ್ಷಣ ಮಾಧ್ಯಮವಾಗಿದ್ದ ಸಂಸ್ಕೃತ ಮತ್ತು ಧರ್ಮ ಶಿಕ್ಷಣ ಹಾಳಾಯಿತು. ಇಂಗ್ಲಿಷ್ ಶಿಕ್ಷಣ ಪಾಶ್ಚಿಮಾತ್ಯ ಬದುಕಿನ ಶೈಲಿಯನ್ನು ನಮ್ಮ ಮೇಲೆ ಹೇರಿದ್ದು, ನಮ್ಮತನ ಕಳೆದು ಹೋಗಿ ಯಾವುದೇ ರೀತಿಯ ಪದ್ಧತಿ ಪರಂಪರೆ, ಆಚಾರ ವಿಚಾರಗಳು ನಮ್ಮಗೆ ಗೊತ್ತಿಲ್ಲದಂತಹ ಪರಿಸ್ಥಿತಿಗೆ ತಲುಪಿದ್ದೇವೆ’ ಎಂದರು.
‘ಭಗವದ್ಗೀತೆಯು ನಾಲ್ಕು ವೇದಗಳ ಸಾರವಾಗಿದ್ದು, ಇದರ ಆಧ್ಯಯನದಿಂದ ನಮ್ಮ ಆಚಾರ– ವಿಚಾರಗಳಲ್ಲಿ ಲೌಕಿಕ ಮತ್ತು ಪಾರಮಾರ್ಥಿಕ ವಿಚಾರಗಳಲ್ಲಿ ಅದ್ಭುತ ಸಾಧನೆ ಮಾಡುವ ಮೂಲಕ ಮೋಕ್ಷ ಸಾಧನೆಗೆ ಮುಂದಾಗಬೇಕು’ ಎಂದು ಹೇಳಿದರು.
‘ಸಂಸ್ಕೃತ ಭಾಷೆಯ ಪುನರುತ್ಥಾನ ಮನೆ ಮನೆಗಳಲ್ಲಿ ಭಗವದ್ಗೀತೆಯೊಂದಿಗೆ ನಮ್ಮ ಧರ್ಮದ ಆಚರಣೆಯನ್ನು ಮಕ್ಕಳು ಮತ್ತು ಯುವಕರಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ನೆಮ್ಮದಿಗಾಗಿ ಮಾತ್ರವಲ್ಲದೆ ಲೋಕ ಕಲ್ಯಾಣಕ್ಕಾಗಿ ಕೂಡ ನಾವು ಶ್ರಮಿಸಿದಂತಾಗುತ್ತದೆ’ ಎಂದು ಅವರು ಹೇಳೀದರು.
ಮಂದಿರದ ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಎಂ.ವಿ.ರಘುನಾಥ ಮಾತನಾಡಿ, ‘ಭಗವದ್ಗೀತೆ ಅಧ್ಯಯನ ವೇದೋಕ್ತ ಧರ್ಮ ಆಚರಣೆಗೆ ಪೂರಕವಾಗಿದ್ದು, ಅಧ್ಯಾತ್ಮಿಕ ಮಾರ್ಗದಲ್ಲಿ ಮೋಕ್ಷ ಸಾಧನೆಗೆ ತೊಡಗಲು ಭಗವದ್ಗೀತೆ ಮೊದಲ ಮೆಟ್ಟಿಲಾಗಿದೆ. ರಾಮಾಯಣ, ಮಹಾಭಾರತ, ಉಪನಿಷತ್ತು, 18 ಪುರಾಣ ಮತ್ತು ಉಪಪುರಾಣಗಳ ಅಧ್ಯಯನ ಅರ್ಥ ಮಾಡಿಕೊಳ್ಳಲು ಭಗವದ್ಗೀತೆ ಶಿಖರಪ್ರಾಯವಾಗಿದೆ’ ಎಂದು ಬಣ್ಣಿಸಿದರು.
ಕಾರ್ಯಕಾರಿ ಸಮಿತಿಯ ತುಂಗಾಮ್ಮ, ವೆಂಕಪ್ಪ, ವಾರಿಜ ರಘುನಾಥ್, ಕೃಷ್ಣಪ್ಪ, ಸಿದ್ದಪ್ಪ, ಬಿ.ಸಿ.ದಿನೇಶ್ ಉಪಸ್ಥಿತರಿದ್ದರು.