ADVERTISEMENT

ನಾಟಿ, ಕೊಯ್ಲಿನಿಂದ ರೈತರ ಸಮಸ್ಯೆ ಪರಿಹಾರ ಸಾಧ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 17:04 IST
Last Updated 8 ಡಿಸೆಂಬರ್ 2018, 17:04 IST
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಭೇಟಿ ನೀಡಿ ಕಾರ್ತಿಕ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಭೇಟಿ ನೀಡಿ ಕಾರ್ತಿಕ ಅಮಾವಾಸ್ಯೆ ನಿಮಿತ್ತ ವಿಶೇಷ ಪೂಜೆ ಸಲ್ಲಿಸಿದರು   

ಕೆ.ಆರ್. ಪೇಟೆ: ಭತ್ತ ನಾಟಿ ಹಾಗೂ ಕೊಯ್ಲು ಮಾಡುವ ಮೂಲಕ ರೈತರನ್ನು ಮರುಳು ಮಾಡಬಹುದೇ ವಿನಾ ರೈತರನ್ನು ಸಮಸ್ಯೆಗಳಿಂದ ಹೊರತರಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.

ತಮ್ಮ ಹುಟ್ಟೂರಾದ ಬೂಕನಕೆರೆ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿದ ಅವರು ಕಾರ್ತಿಕ ಅಮಾವಾಸ್ಯೆ ನಿಮಿತ್ತ ಗ್ರಾಮದಲ್ಲಿನ ಗ್ರಾಮದೇವತೆ ಗೋಗಲಮ್ಮ , ಕುಲದೇವತೆ ಅಕ್ಕಯ್ಯಮ್ಮ ಹಾಗೂ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮನೆ ದೇವರು ಗವೀಮಠ ಸ್ವತಂತ್ರ ಸಿದ್ಧಲಿಂಗೇಶ್ವರ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ಸಲ್ಲಿಸಿದರು.

‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾವು ಅಧಿಕಾರಕ್ಕೆ ಬಂದ 24 ಗಂಟೆಗಳೊಳಗೆ ರೈತರ ಎಲ್ಲ ಬಗೆಯ ಸಾಲವನ್ನು ಮನ್ನಾ ಮಾಡುವುದಾಗಿ ಕಳೆದ ಚುನಾವಣೆಯಲ್ಲಿ ಹೋದ –ಬಂದ ಕಡೆಯಲ್ಲೆಲ್ಲ ಹೇಳಿಕೊಂಡು ಬಂದಿದ್ದರು. ಸುಳ್ಳು ಭರವಸೆ ನೀಡಿ ಹೆಚ್ಚು ಸ್ಥಾನವನ್ನು ಹಳೇ ಮೈಸೂರು ಭಾಗದಲ್ಲಿ ಪಡೆದು ಜನರನ್ನು ಮೋಸ ಮಾಡಿದರು. ಈಗ ಅಧಿಕಾರಕ್ಕೆ ಬಂದು 6 ತಿಂಗಳು ಕಳೆದರೂ ಯಾವುದೇ ಒಂದು ರೀತಿಯ ಸಾಲವನ್ನೂ ಮನ್ನಾ ಮಾಡಲು ಆಗಿಲ್ಲ. ಆದ್ದರಿಂದ ನಾವು ಸರ್ಕಾರವನ್ನು ಟೀಕಿಸುತ್ತಿದ್ದೇವೆ. ವಾಸ್ತವ ಪರಿಸ್ಥಿತಿಯ ಅರಿವು ಈಗ ಕುಮಾರಸ್ವಾಮಿಗೆ ಬಂದಂತಿದೆ. ಅದಕ್ಕಾಗಿ ಇಂತಹ ನಾಟಕಗಳನ್ನು ಆಡುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

ಬಿ.ಎಸ್.ವೈ ಪುತ್ರ ವಿಜಯೇಂದ್ರ ಮಾತನಾಡಿ, ‘ನನ್ನ ತಂದೆಯವರು ಮತ್ತೆ ಮುಖ್ಯಮಂತ್ರಿ ಆಗಬೇಕೆಂಬುದು ನನ್ನೊಬ್ಬನ ಕನಸಲ್ಲ. ಅದು ಇಡೀ ರಾಜ್ಯದ ಕನಸು. 104 ಸ್ಥಾನ ಪಡೆದ ಬಿಜೆಪಿ ನಾಯಕರು ಆ ಬಗ್ಗೆ ಪ್ರಸ್ತಾವ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ. ಮುಂದೆ ಏನಾಗಬೇಕೆಂಬುದು ದೇವರ ಇಚ್ಛೆ. ಕಾದು ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.