ಕುಶಾಲನಗರ: ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯಕ್ಕೆ ಸೋಮವಾರ ಇಲ್ಲಿನ ಪುರಸಭೆ ಕಚೇರಿಯಲ್ಲಿ ಗೊಂದಲದ ನಡುವೆಯೇ ಚಾಲನೆ ನೀಡಲಾಯಿತು.
ತಾಲ್ಲೂಕಿನ 450ಕ್ಕೂ ಹೆಚ್ಚಿನ ಶಿಕ್ಷಕರನ್ನು ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದ್ದು, ಬೆಳಿಗ್ಗೆ ಪುರಸಭೆಗೆ ಆಗಮಿಸಿದ ಗಣತಿದಾರರು ಕಿಟ್ ವಿತರಣೆ ಮಾಡಲಾಯಿತು. ಬಹುತೇಕ ಗಣತಿದಾರರಿಗೆ ಕಿಟ್ ಸಿಗಲಿಲ್ಲ. ಕಿಟ್ಗಾಗಿ ಶಿಕ್ಷಕರು
ಪರದಾಡಿದರು.
ಗಣತಿಗೆ ನಿಯೋಜನೆಗೊಂಡ ಶಿಕ್ಷಕರು ಮಾತನಾಡಿ, ‘ಗಣತಿದಾರರಿಗೆ ಯಾರೂ ಮೇಲ್ವಿಚಾರಕರು ಇಲ್ಲ. ಸರಿಯಾದ ತರಬೇತಿ ಕೂಡ ನೀಡಿಲ್ಲ. ಜೊತೆಗೆ ಕುಶಾಲನಗರ ತಾಲ್ಲೂಕಿನ ಮಹಿಳಾ ಶಿಕ್ಷಕರನ್ನು ದೂರದ ವಿರಾಜಪೇಟೆ ತಾಲ್ಲೂಕಿಗೆ ಗಣತಿ ಕಾರ್ಯಕ್ಕೆ ನಿಯೋಜನೆ ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡುಮಂಗಳೂರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಮೀಕ್ಷಾ ಕಾರ್ಯದ ಪೂರ್ವ ಸಿದ್ದತಾ ಸಮಾಲೋಚನಾ ಸಭೆ ನಡೆಯಿತು. ಸಮೀಕ್ಷೆ ನಡೆಸಲು ನಿಯೋಜನೆಗೊಂಡಿರುವ 30ಕ್ಕೂ ಹೆಚ್ಚು ಶಿಕ್ಷಕರಿಗೆ ಸಮೀಕ್ಷೆ ನಡೆಸಲು ಬೇಕಾದ ಕೈಪಿಡಿ ಸೇರಿದಂತೆ ಪೂರಕ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ಗಳನ್ನು ಅಭಿವೃದ್ಧಿ ಅಧಿಕಾರಿ ಎಂ.ಆರ್.ಸಂತೋಷ್ ಗಣತಿದಾರ ಶಿಕ್ಷಕರಿಗೆ ವಿತರಿಸಿದರು.
ಕೊಡಗು ಜಿಲ್ಲಾ ಪ್ರೌಢಶಾಲೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಂದ್ರ, ತಾಲ್ಲೂಕು ಘಟಕದ ಅಧ್ಯಕ್ಷ ರತ್ನಕುಮಾರ್, ಕೂಡಿಗೆ ಕ್ಲಸ್ಟರ್ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕೆ.ಶಾಂತಕುಮಾರ್, ಕೂಡಿಗೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮಂಜುಳ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್.ಎ.ಯೋಗೇಶ್, ಮುಖ್ಯ ಶಿಕ್ಷಕಿಯವರಾದ ಶಶಿಕಲಾ, ಎಚ್.ಎಸ್.ಸುಜಾತ, ಬಿ.ಟಿ.ಕುಸುಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.