ADVERTISEMENT

ಸಂಭ್ರಮದಲ್ಲಿ ಮಿಂದೆದ್ದ ಚಿಣ್ಣರು

ವಿವಿಧ ಶಾಲೆಗಳಲ್ಲಿ ಮಕ್ಕಳ ದಿನಾಚರಣೆ; ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 4:57 IST
Last Updated 15 ನವೆಂಬರ್ 2022, 4:57 IST
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸೋಮವಾರ ನಡೆದ ಮಕ್ಕಳ ದಿನಾಚರಣೆಯನ್ನು ಎ.ವಿ.ಶಾಲೆಯ ವಿದ್ಯಾರ್ಥಿನಿ ಶರಣ್ಯಾ ಉದ್ಘಾಟಿಸಿದಳು. ವಿದ್ಯಾರ್ಥಿಗಳಾದ ಅಫ್ರೋಜ್‌, ಸಿಂಚನಾ ಇದ್ದಾರೆ
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಸೋಮವಾರ ನಡೆದ ಮಕ್ಕಳ ದಿನಾಚರಣೆಯನ್ನು ಎ.ವಿ.ಶಾಲೆಯ ವಿದ್ಯಾರ್ಥಿನಿ ಶರಣ್ಯಾ ಉದ್ಘಾಟಿಸಿದಳು. ವಿದ್ಯಾರ್ಥಿಗಳಾದ ಅಫ್ರೋಜ್‌, ಸಿಂಚನಾ ಇದ್ದಾರೆ   

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಸೋಮವಾರ ಸಂಭ್ರಮ ಮೇಳೈಸಿತ್ತು. ಬಣ್ಣ ಬಣ್ಣದ ಉಡುಗೆ ತೊಟ್ಟ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇಡೀ ದಿನ ಮಕ್ಕಳು ಒತ್ತಡ ರಹಿತವಾಗಿ ಶಾಲೆಯಲ್ಲಿ ಕಾಲ ಕಳೆದಿದ್ದು ವಿಶೇಷ ಎನಿಸಿತ್ತು.

ವೇದಿಕೆಯ ಮೇಲೆ ಮಕ್ಕಳು ಕುಳಿತರೆ ಗಣ್ಯರು ಪ್ರೇಕ್ಷಕರಾದ ಅಪರೂಪದ ಕ್ಷಣಗಳಿಗೆ ಇಲ್ಲಿನ ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ ಸಾಕ್ಷಿಯಾಯಿತು. ಕಾರ್ಯಕ್ರಮ ಉದ್ಘಾಟನೆ, ಅಧ್ಯಕ್ಷತೆ ಮತ್ತು ಅತಿಥಿಗಳಾಗಿ ಮಕ್ಕಳೇ ಭಾಗವಹಿ ಸಿದ್ದು ಎಲ್ಲರ ಗಮನ ಸೆಳೆಯಿತು.

ನಗರಸಭೆಯ ಹಿಂದೂಸ್ತಾನಿ ಶಾಲೆ, ಜಿ.ಟಿ. ರಸ್ತೆಯ ಸರ್ಕಾರಿ ಶಾಲೆ ಹಾಗೂ ಎ.ವಿ. ಶಾಲೆಯ ಮಕ್ಕಳು ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯ ಮಕ್ಕಳೊಂದಿಗೆ ಸೇರಿ ಆಯೋಜಿಸಿದ್ದ ಈ ವಿನೂತನ ಕಾರ್ಯಕ್ರಮವನ್ನು ಎ.ವಿ.ಶಾಲೆಯ ವಿದ್ಯಾರ್ಥಿನಿ ಶರಣ್ಯಾ ಉದ್ಘಾಟಿಸಿದರು. ಜಿ.ಟಿ.ರಸ್ತೆಯ ನಗರಸಭೆ ಶಾಲೆಯ ಅಫ್ರೋಜ್‌ ಮುಖ್ಯ ಅತಿಥಿಯಾಗಿದ್ದಳು. ಶಿಶು ಕಲ್ಯಾಣ ಸಂಸ್ಥೆಯ ಸಿಂಚನಾ ಅಧ್ಯಕ್ಷತೆ ವಹಿಸಿದ್ದಳು.

ADVERTISEMENT

ಅಫ್ರೋಜ್‌ ಜವಾಹರಲಾಲ್‌ ನೆಹರೂ ಕುರಿತು ಮಾತನಾಡಿದರೆ, ಸಿಂಚನಾ ಮಕ್ಕಳ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದಳು. ಮಕ್ಕಳು ಸಮೂಹ ಗಾಯನ, ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಪ್ರಸ್ತುತಪಡಿಸಿದರು. 70ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು.

ರಾಷ್ಟ್ರೀಯ ವರ್ಣಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಇದೇ ವೇಳೆ ಬಹುಮಾನವನ್ನೂ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್, ಕಾರ್ಯಾಧ್ಯಕ್ಷ ಬಿ.ಕೆ.ರವೀಂದ್ರ ರೈ, ನಿರ್ದೇಶಕರಾದ ಶಶಿ ಮೊಣ್ಣಪ್ಪ, ಕವಿತಾ ಇದ್ದರು.

ನಗರದ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲೂ ಛದ್ಮವೇಷ ಸ್ಪರ್ಧೆ, ಹೂ ಅಲಂಕಾರ ಸ್ಪರ್ಧೆ, ಬೆಂಕಿರಹಿತ ಅಡುಗೆ ಮಾಡುವ ಸ್ಪರ್ಧೆಗಳನ್ನು ಮಕ್ಕಳಿಗಾಗಿ ಆಯೋಜಿಸಲಾಗಿತ್ತು. ಶಿಕ್ಷಕರು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಕುಣಿದ ಶಿಕ್ಷಕರು

ಸುಂಟಿಕೊಪ್ಪ: ಮಕ್ಕಳ ದಿನಾಚರಣೆಯ ಅಂಗವಾಗಿ ಇಲ್ಲಿನ ಸಂತ ಮೇರಿ‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಶಿಕ್ಷಕರು ಕುಣಿದು ಕುಪ್ಪಳಿಸಿ ಸಂತೋಷಪಟ್ಟರು.

ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಂತರ ಮುಖ್ಯ ಶಿಕ್ಷಕ ಸೆಲ್ವರಾಜು, ಶಿಕ್ಷಕರು ನೃತ್ಯ ಮಾಡಿ ಮಕ್ಕಳನ್ನು ರಂಜಿಸಿದರು. ಶಾಲಾ- ಕಾಲೇಜಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಂಸ್ಥೆಯ ಮುಖ್ಯಸ್ಥರಾದ ರೆ.ಫಾ.ಅರುಳ್ ಸೆಲ್ವಕುಮಾರ್ ಅವರು ಮಕ್ಕಳ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.
ದಿನದ ಅಂಗವಾಗಿ ಪುಟಾಣಿ ಮಕ್ಕಳು ಸೀರೆ, ಶರ್ಟ್, ಲುಂಗಿ ತೊಟ್ಟು ಸಂಭ್ರಮಿಸಿದರು.

ಚೆಂಬು; ಬಾಲಮೇಳ

ಬಾಲ ವಿಕಾಸ ಸಮಿತಿ, ಆನೆಹಳ್ಳ ಅಂಗನವಾಡಿ ಕೇಂದ್ರವು ಚೆಂಬು
ಗ್ರಾಮ ಆನೆಹಳ್ಳದಲ್ಲಿ ಕ್ರೀಡೋತ್ಸವ ನಡೆಸಿತು.

ಚೆಂಬು ಗ್ರಾಮ ಪಂಚಾಯಿತಿ ಸದಸ್ಯ ಗಿರೀಶ್ ಹೊಸೂರು ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಗೀತಾ ಶಿವರಾಮ ಕಾಚೇಲು, ದಿನೇಶ್ ಎಸ್.ಎನ್ ಸಣ್ಣಮನೆ, ಕೆ.ಎಸ್.ಚಂದ್ರಶೇಖರ ಕಾಚೇಲು, ಕೆ.ಆರ್.ಸೋಮಣ್ಣ ಇದರು. ಅಧ್ಯಕ್ಷತೆಯನ್ನು ಬಾಲವಿಕಾಸ ಸಮಿತಿ ಆನೆಹಳ್ಳ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ವನಿತಾ ವಿಜಯ ವಹಿಸಿದ್ದರು.

ಅಂಗನವಾಡಿ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ಆಟೋಟ ಸ್ಪರ್ಧೆಗಳು ನಡೆದವು. ಜತೆಗೆ, ಸಾರ್ವಜನಿಕರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ರಸ್ತೆ ಓಟ, ಹಗ್ಗಜಗ್ಗಾಟ, ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗಳೂ ನಡೆದವು.

ಸಮಾರೋಪ ಸಮಾರಂಭದಲ್ಲಿ ಅಂಗನವಾಡಿ ಕೇಂದ್ರದಲ್ಲಿ 32 ವರ್ಷ ಸೇವೆ ಸಲ್ಲಿಸಿದ ಆನೆಹಳ್ಳ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕೆ.ಸರೋಜಿನಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಶಿಶು
ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಶೀಲಾ ಅಶೋಕ, ರೇಣುಕಾ ಜಯರಾಮ, ಶೇಷಪ್ಪ, ಮಕ್ಕಳ ದಿನಾಚರಣೆಯ ಗೌರವಾರ್ಥ ಪುಟಾಣಿ ನಿಧಿಶ್ರೀ ವೇದಿಕೆಯಲ್ಲಿದ್ದರು. ಕ್ರೀಡೋತ್ಸವ ಸಮಿತಿಯ ಅಧ್ಯಕ್ಷ
ಅಶ್ವಿನ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.