ಮಡಿಕೇರಿ: ಕೊಡಗಿನಲ್ಲಿ ಕ್ರೈಸ್ತರು ಸೋಮವಾರ ಮಾತೆ ಮರಿಯಮ್ಮನವರ ಜನ್ಮದಿನಾಚರಣೆಯನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.
ಹೊರ ಜಿಲ್ಲೆಗಳಲ್ಲಿದ್ದ ಕುಟುಂಬದ ಬಂಧು ಬಾಂಧವರು ತಮ್ಮ ತಮ್ಮ ಮನೆಗಳಿಗೆ ಆಗಮಿಸಿ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸೇರಿ ಭೋಜನ ಸವಿದರು. ಇದಕ್ಕೂ ಮುನ್ನ ಚರ್ಚ್ಗಳಲ್ಲಿ ನಡೆದ ವಿಶೇಷ ಪ್ರಾರ್ಥನೆ, ಮೆರವಣಿಗೆಗಳಲ್ಲಿ ಭಾಗಿಯಾದರು. ಧರ್ಮಗುರುಗಳು ನೀಡಿದ ತೆನೆಯನ್ನು ತಮ್ಮ ಜೊತೆಗೆ ಕೊಂಡೊಯ್ದರು.
ಮಡಿಕೇರಿಯಲ್ಲಿರುವ ಸಂತ ಮೈಕಲರ ಚರ್ಚ್ನಲ್ಲಿ ಮಾತೆ ಮರಿಯಮ್ಮನವರ ಜನ್ಮ ದಿನದ ಪ್ರಯುಕ್ತ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಚರ್ಚ್ನ ಗಂಟೆಯ ನಿನಾದದೊಂದಿಗೆ ಮಾತೆ ಮರಿಯಮ್ಮನವರ ವಿಗ್ರಹವನ್ನು ವಿವಿಧ ಬಗೆಯ ಪುಷ್ಪಗಳಿಂದ ಅರ್ಚಿಸಲಾಯಿತು. ನಂತರ, ವಿಶೇಷ ಪ್ರಾರ್ಥನೆಗಳು ನಡೆದವು.
ಮಾತೆ ಮರಿಯಮ್ಮನವರ ಪ್ರತಿಮೆಯನ್ನು ಹೊತ್ತುಕೊಂಡು ಸಾವಿರಾರು ಮಂದಿ ನಗರದಲ್ಲಿ ಮೆರವಣಿಗೆ ನಡೆಸಿದರು. ಚರ್ಚ್ನ ಧರ್ಮಗುರುಗಳು ಬಂದಿದ್ದ ಭಕ್ತರಿಗೆ ಭತ್ತದ ತೆನೆಯನ್ನು ವಿತರಿಸಿದರು. ಸಿಹಿಯನ್ನೂ ನೀಡಿದರು.
ಕಳೆದ 9 ದಿನಗಳಿಂದ ಮಾತೆ ಮರಿಯಮ್ಮ ಅವರ ಪ್ರತಿಮೆಗೆ ನಿತ್ಯವೂ ವಿವಿಧ ಪುಷ್ಪಗಳಿಂದ ಅರ್ಚನೆ ಮಾಡಿ ನವೇನಾ ಪ್ರಾರ್ಥನೆ ನಡೆಸಲಾಗುತ್ತಿತ್ತು. 10ನೇ ದಿನವಾದ ಸೋಮವಾರ ವಿಶೇಷ ಪ್ರಾರ್ಥನೆ, ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಯಿತು. ಹಬ್ಬದ ಅಂಗವಾಗಿ ಕ್ರೈಸ್ತರ ಆಡಳಿತ ಮಂಡಳಿ ಇರುವ ಶಾಲೆಗಳಿಗೆ ರಜೆ ನೀಡಲಾಗಿತ್ತು.
ಧರ್ಮಗುರುಗಳಾದ ಜಾರ್ಜ್ ದೀಪಕ್, ಶಿಬಿ, ವಿನೋದ್ ಸಲ್ದಾನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.