ADVERTISEMENT

ಕುಶಾಲನಗರ: ಸ್ವಚ್ಛ ಕಾವೇರಿ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 4:08 IST
Last Updated 17 ಫೆಬ್ರುವರಿ 2026, 4:08 IST
ಕುಶಾಲನಗರ ಕೊಪ್ಪ ಗೇಟ್ ಬಳಿಯ ನದಿಯಲ್ಲಿ ಸ್ವಚ್ಛತೆ ಮಾಡುವ ಮೂಲಕ ಕಾವೇರಿ ಪೂಜಿಸಿ, ಆರಾಧಿಸಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು
ಕುಶಾಲನಗರ ಕೊಪ್ಪ ಗೇಟ್ ಬಳಿಯ ನದಿಯಲ್ಲಿ ಸ್ವಚ್ಛತೆ ಮಾಡುವ ಮೂಲಕ ಕಾವೇರಿ ಪೂಜಿಸಿ, ಆರಾಧಿಸಿ ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಯಿತು   

ಕುಶಾಲನಗರ: ಇಲ್ಲಿನ ಕೊಪ್ಪ ಗೇಟ್ ಬಳಿಯಲ್ಲಿ ಕಾವೇರಿ ಪೂಜಿಸಿ, ಆರಾಧಿಸಿ ಎಂಬ ಘೋಷವಾಕ್ಯದೊಂದಿಗೆ ಸ್ವಚ್ಛತೆ ಕಾರ್ಯ ನಡೆಸಲಾಯಿತು.

ಸ್ಥಳೀಯ ರೋಟರಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ, ಕೊಪ್ಪ ಭಾರತ ಮಾತಾ ಪದವಿ ಕಾಲೇಜು, ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಮೂರನೇ ವರ್ಷದ ಕಾವೇರಿ ನದಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಅಭಿಯಾನಕ್ಕೆ ಚಾಲನೆ ನೀಡಿದ ಉದ್ಯಮಿ ಎಸ್.ಎಲ್.ಎಲ್.ವಿಶ್ವನಾಥನ್ ಮಾತನಾಡಿ, ಸ್ವಚ್ಛ ಕಾವೇರಿ ಸಂಬಂಧ ಪ್ರತಿಯೊಬ್ಬರು ಕಾಳಜಿ ವಹಿಸಬೇಕಾಗಿದೆ. ನೀರಿನ ಮಹತ್ವದ ಬಗ್ಗೆ ಅರಿವು ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದರು.

ADVERTISEMENT

ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ ಮಾತನಾಡಿ, ರೋಟರಿ ಸಂಸ್ಥೆಯ ಸುವರ್ಣ ಮಹೋತ್ಸವ ಅಂಗವಾಗಿ ಒಂದು ತಿಂಗಳ ಕಾಲ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಟ್ಟಣದ ಸ್ವಚ್ಛತೆ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಕೊಪ್ಪ ಗಡಿಭಾಗದಲ್ಲಿರುವ ಪುರಾತನ ಕಾವೇರಿ ಸೇತುವೆಯ ಪುನಶ್ಚೇತನ ಕಾರ್ಯಕ್ರಮಕ್ಕೆ ಚಿಂತನೆ ಮಾಡಲಾಗಿದೆ ಎಂದು ಎಂದು ತಿಳಿಸಿದರು.

ಆಯೋಜಕರಾದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್ ಮಾತನಾಡಿ, ಹಲವು ಕಾರಣಗಳಿಂದ ಜೀವನದಿ ಕಾವೇರಿ ನೇರವಾಗಿ ಕಲುಷಿತಗೊಳ್ಳುತ್ತಿದ್ದು, ಜನರಿಗೆ ನೀರಿನ ಬಳಕೆ ಮಾಡಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಕಾವೇರಿಗಾಗಿ ಪ್ರತಿಯೊಬ್ಬರು ಪಣತೊಡಬೇಕು ಎಂದರು.

ಉದ್ಯಮಿ ಎಸ್.ಎಲ್.ಎನ್.ಸಾತಪ್ಪನ್, ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರದೀಪ್ ಕುಮಾರ್, ಕುಶಾಲನಗರ ಗಡಿಭಾಗದ 180 ವರ್ಷಗಳ ಇತಿಹಾಸದ ಹಳೆಯ ಸೇತುವೆ ಪುನಶ್ಚೇತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಭಾರತ ಮಾತಾ ಕಾಲೇಜಿನ ವಿದ್ಯಾರ್ಥಿಗಳು, ಬೋಧಕರು, ರೋಟರಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ಪ್ರಮುಖರು ಕಾವೇರಿ ಸೇತುವೆಯ ಕೆಳಭಾಗದಲ್ಲಿ ತುಂಬಿದ್ದ ತ್ಯಾಜ್ಯ ತೆರವು ಮಾಡಿದರು.

ರೋಟರಿ ಕಾರ್ಯದರ್ಶಿ ಮಂಜುನಾಥ್, ಸಹಾಯಕ ರಾಜ್ಯಪಾಲರಾದ ಉಲ್ಲಾಸ್ ಕೃಷ್ಣ, ಎಸ್.ಕೆ.ಸತೀಶ್, ಹರಿ ಎ.ಶೆಟ್ಟಿ, ಭಾರತ ಮಾತಾ ಕಾಲೇಜಿನ ಪ್ರಾಂಶುಪಾಲರಾದ ಫಾ ಅಭಿನ್, ಫಾ ಟಿಟ್ಟೋ ಥಾಮಸ್, ಎನ್ಎಸ್ಎಸ್ ಶಿಬಿರ ಅಧಿಕಾರಿ ದಿನೇಶ್ ಕುಮಾರ್, ಅಭಿಷೇಕ್, ಮಕ್ಕಳ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷೆ ಚೈತನ್ಯ, ಕಾವ್ಯ ಗೌಡ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ವನಿತಾ ಚಂದ್ರಮೋಹನ್, ಧರಣಿ ಸೋಮಯ್ಯ, ಕೆ.ಪಿ.ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.