
ಸೋಮವಾರಪೇಟೆ: ಪ್ರತಿ ಗ್ರಾಮಗಳಲ್ಲಿ ಚಿಕ್ಕ ಚಿಕ್ಕ ಸಮುದಾಯ ಭವನಗಳನ್ನು ನಿರ್ಮಿಸುವುದರಿಂದ, ನಗರ ಪ್ರದೇಶವನ್ನು ಅವಲಂಬಿಸುವುದು ಕಡಿಮೆಯಾಗಲಿದ್ದು, ಈ ನಿಟ್ಟಿನಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಸಮೀಪದ ಮಸಗೋಡು ಗ್ರಾಮದಲ್ಲಿ ನೂತನ ಸ್ತ್ರೀ ಶಕ್ತಿ ಭವನ ನಿರ್ಮಿಸಲು ಬುಧವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿನ ಸಮುದಾಯ ಭವನಗಳಿಂದ ಕೆಲವು ಕಾರ್ಯಕ್ರಮಗಳನ್ನು ಸ್ಥಳೀಯವಾಗಿಯೇ ಮಾಡಬಹುದು. ಯಾವುದೇ ಕಾಮಗಾರಿ ನಡೆಯುವ ಸಂದರ್ಭ ಎಲ್ಲ ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ನಡೆಸುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳನ್ನು ಸದ್ವಿನಿಯೋಗವಾಗಲು ಸಾಧ್ಯ ಎಂದರು.
ಕಾಮಗಾರಿ ಸಂದರ್ಭ ಯಾವುದೇ ರಾಜಕೀಯ ಬೇಡ. ಈಗಿನ ಹಣದಲ್ಲಿ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲು ಗಟ್ಟಿಮುಟ್ಟಾದ ತಳಪಾಯ ಹಾಕಿಸಿದಲ್ಲಿ, ಮುಂದಿನ ದಿನಗಳಲ್ಲಿ ಉಳಿಕೆ ಹಣವನ್ನು ನೀಡಲಾಗುವುದು ಎಂದು ತಿಳಿಸಿದರು.
ಮಸಗೋಡು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಂಗೀರ ಮನೆ ಸತೀಶ್ ಮಾತನಾಡಿ, ಗ್ರಾಮದಲ್ಲಿ ಸ್ತ್ರೀ ಶಕ್ತಿ ಭವನ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಅನುದಾನ ನೀಡಬೇಕು. ಗ್ರಾಮದಲ್ಲಿನ ದೇವಾಲಯ ಅಭಿವೃದ್ಧಿಗೆ ಹಾಗೂ ಸ್ಮಶಾನಕ್ಕೆ ತರಳುವ ರಸ್ತೆ ನಿರ್ಮಿಸಿಸಿಕೊಡಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಲಾ ದಿನೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ಡಿಸಿಲ್ವ ಹಾಗೂ ಗ್ರಾಮದ ಪ್ರಮುಖರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.