ಪೊನ್ನಂಪೇಟೆ: ಮಾಯಮುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಅಮ್ಮಕೊಡವ ಸಮುದಾಯದ ಕೌಟುಂಬಿಕ ಬಲ್ಯಂಡ ಕ್ರಿಕೆಟ್ ಟೂರ್ನಿಯಲ್ಲಿ ಅಮ್ಮತ್ತೀರ ತಂಡ ಚಾಂಪಿಯನ್ ಆಯಿತು.
ಫೈನಲ್ ಪಂದ್ಯದಲ್ಲಿ ಆಂಡಮಾಡ ತಂಡ ಸೋತು ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಂಡಮಾಡ ತಂಡವು 8 ಒವರ್ಗೆ 2 ವಿಕೆಟ್ ನಷ್ಟಕ್ಕೆ 63 ರನ್ ದಾಖಲಿಸಿತು. ಅಮ್ಮತ್ತೀರ ತಂಡವು 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ಕ್ವಾರ್ಟರ್ ಫೈನಲ್ನಲ್ಲಿ ಬಲ್ಯಂಡ ತಂಡವು ಮಂಜುವಂಡ ತಂಡದ ವಿರುದ್ದ 6 ವಿಕೆಟ್ಗಳ ಗೆಲುವು ಪಡೆಯಿತು. ಅಮ್ಮತ್ತೀರ ತಂಡವು ಪುತ್ತಾಮನೆ ತಂಡವನ್ನು 10 ವಿಕೆಟ್ಗಳಿಂದ ಸೋಲಿಸಿ ಸೆಮಿಫೈನಲ್ಗೆ ತಲುಪಿತು.
ಆಂಡಮಾಡ ತಂಡವು ಚೊಟ್ಟೋಳಿಯಮ್ಮಂಡ ವಿರುದ್ದ 9 ವಿಕೆಟ್ ಜಯ ಪಡೆಯಿತು. ಸೆಮಿ ಫೈನಲ್ನಲ್ಲಿ ಅಮ್ಮತ್ತೀರ ತಂಡವು ಆತಿಥೇಯ ಬಲ್ಯಂಡ ತಂಡದ ವಿರುದ್ದ 6 ವಿಕೆಟ್ ಜಯ ಸಾಧಿಸಿತು. 2ನೇ ಸೆಮಿ ಫೈನಲ್ನಲ್ಲಿ ಆಂಡಮಾಡ ತಂಡವು ಕೊಂಡಿಜಮ್ಮಂಡ ವಿರುದ್ದ 8 ವಿಕೆಟ್ ಅಂತರದಲ್ಲಿ ಗೆಲುವು
ಪಡೆಯಿತು.
ಆಂಡಮಾಡ ಪವನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಸರಣಿ ಶ್ರೇಷ್ಠ ಮತ್ತು ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಅಮ್ಮತ್ತೀರ ತಂಡದ ಗಣೇಶ್ ಪಡೆದುಕೊಂಡರು.
ಕಮಟೆ ಮಹಾದೇವರ ದೇವಸ್ಥಾನ ಸಮಿತಿ ಅಧ್ಯಕ್ಷ ಸಣ್ಣುವಂಡ ಬಿ ರಮೇಶ್, ಕೊಡವ ಅಕಾಡೆಮಿ ಮಾಜಿ ಸದಸ್ಯ ಉಮೇಶ್ ಕೇಚಮಯ್ಯ, ಹಿರಿಯರಾದ ಅಮ್ಮತ್ತೀರ ರೇವತಿ ಪರಮೇಶ್ವರ್, ಮಾಯಮುಡಿ ಗ್ರಾಮ ಪಂಚಾಯಿತಿ ಸದಸ್ಯ ಚೆಪ್ಪುಡೀರ ಪ್ರದೀಪ್ ಪೂವಯ್ಯ ಬಹುಮಾನ ವಿತರಿಸಿದರು.
ಬಲ್ಯಂಡ ಕುಟುಂಬ ಅಧ್ಯಕ್ಷ ಬಲ್ಯಂಡ ಎಸ್ ಪ್ರತಾಪ್ ಅಧ್ಯಕ್ಷತೆಯಲ್ಲಿ ಸಮಾರೋಪ ಕಾರ್ಯಕ್ರಮ ನಡೆಯಿತು.
ಅಮ್ಮಕೊಡವ ಜನಾಂಗದ ಕೌಟುಂಬಿಕ ಕ್ರಿಕೆಟ್ ಕಪ್ ಮುಂದಿನ ವರ್ಷ ಹೆಮ್ಮಚ್ಚಿಮನೆ ಕುಟುಂಬ ನಡೆಸುವುದಾಗಿ ಘೋಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.