ವಿರಾಜಪೇಟೆ (ಕೊಡಗು): ಅಪ್ರಾಪ್ತೆಯ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಇಬ್ಬರು ಅಪರಾಧಿಗಳಿಗೆ, ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ಹಾಗೂ ತಲಾ ₹ 95 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಜಿಲ್ಲೆಯ ಸಿದ್ದಾಪುರ ಸಮೀಪದ ಕರಡಿಗೋಡು ತೋಟವೊಂದರ ಲೈನ್ಮನೆಯಲ್ಲಿ ನೆಲೆಸಿದ್ದ ರಂಜಿತ್ ಹಾಗೂ ಸಂಜಿತ್ ಓರಿಯನ್ ಶಿಕ್ಷೆಗೆ ಗುರಿಗೆ ಒಳಪಟ್ಟವರು. ಇಬ್ಬರೂ ಅಪರಾಧಿಗಳು ಪಶ್ಚಿಮ ಬಂಗಾಳ ರಾಜ್ಯದವರು. ಕೊಡಗಿನ ಕಾಫಿ ತೋಟದಲ್ಲಿ ಕೂಲಿ ಕೆಲಸಕ್ಕೆಂದು ಬಂದಿದ್ದ ಅವರು ಈ ಕೃತ್ಯ ಎಸಗಿದ್ದರು.
2019ರ ಫೆ.4ರಂದು ಶಾಲೆಗೆ ತೆರಳುತ್ತಿದ್ದ ಕರಡಿಗೋಡು ಗ್ರಾಮದ ವಿದ್ಯಾರ್ಥಿಯೊಬ್ಬಳು, ಕಾಣೆಯಾದ ಕುರಿತು ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕೆ ತನಿಖೆ ನಡೆಸಿದಾಗ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ, ಕೊಲೆ ಮಾಡಿ ತೋಟವೊಂದರ ಕಲ್ಲಿನ ಪೊಟರೆಯಲ್ಲಿ ಮೃತದೇಹವನ್ನು ಹೂತಿಟ್ಟಿರುವುದು ಪತ್ತೆಯಾಗಿತ್ತು.
ಮಡಿಕೇರಿ ವಿಭಾಗದ ಡಿವೈಎಸ್ಪಿಯಾಗಿದ್ದ ಸುಂದರ್ ರಾಜ್ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಎಸ್.ಆರ್.ದಿಂಡಿಲ್ ಕೊಪ್ಪ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಸರ್ಕಾರದ ಪರವಾಗಿ ವಕೀಲ ಯಾಸೀನ್ ಅಹಮದ್ ವಾದಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.