ADVERTISEMENT

ಮಡಿಕೇರಿ: ದಸರೆಗೂ ಸರ್ಕಾರಿ ಇಲಾಖೆಗಳಿಗೂ ಭಾರಿ ಅಂತರ

ಬದಲಾಗದ ದಸರೆ, ಕಳೆದ ವರ್ಷದಂತೆ ಸಾಗಿದೆ ದಸರೆ

ಕೆ.ಎಸ್.ಗಿರೀಶ್
Published 23 ಸೆಪ್ಟೆಂಬರ್ 2025, 5:33 IST
Last Updated 23 ಸೆಪ್ಟೆಂಬರ್ 2025, 5:33 IST

ಮಡಿಕೇರಿ: ಮಡಿಕೇರಿ ಹಾಗೂ ಗೋಣಿಕೊಪ್ಪಲು ದಸರೆಗೂ ವಿವಿಧ ಸಂಘ, ಸಂಸ್ಥೆಗಳು ಮಾತ್ರವಲ್ಲ ಸರ್ಕಾರಿ ಇಲಾಖೆಗಳಿಗೂ ಬಹುದೊಡ್ಡ ಅಂತರ ಮೊದಲಿನಿಂದಲೂ ಇದೆ. ಈ ಅಂತರ ಈ ವರ್ಷವೂ ಮುಂದುವರಿದಿದ್ದು, ಈ ನಿಟ್ಟಿನಲ್ಲಿ ಯಾವುದೇ ಸುಧಾರಣೆಯೂ ಸಾಧ್ಯವಾಗಿಲ್ಲ.

ಮಡಿಕೇರಿ ಹಾಗೂ ಗೋಣಿಕೊಪ್ಪಲಿನಲ್ಲಿ ನಡೆಯುವುದು ಜನೋತ್ಸವ. ಮೈಸೂರಿನಲ್ಲಾದರೆ ಸರ್ಕಾರಿ ದಸರೆ. ಹಾಗಾಗಿ, ಮೈಸೂರಿನಿಂತೆ ವಿವಿಧ ಇಲಾಖೆಗಳು ಇಲ್ಲಿನ ದಸರೆಗೆ ಕೈಜೋಡಿಸುತ್ತಿಲ್ಲ. ಜನೋತ್ಸವ ಆಗಿದ್ದರಿಂದ ಜನರಿಗೆ ಬಿಟ್ಟಂತೆ ಕಾಣುತ್ತಿದೆ.

ದಸರಾ ಸಮಿತಿಯವರೂ ಸಹ ಸರ್ಕಾರಿ ಇಲಾಖೆಗಳನ್ನಾಗಲಿ, ವಿವಿಧ ಸಂಘ, ಸಂಸ್ಥೆಗಳನ್ನಾಗಲಿ ಸಹಕಾರ ನೀಡುವಂತೆ ಕೇಳಿರುವುದು ಕಡಿಮೆ. ಮಕ್ಕಳ ದಸರೆಗೆ ರೋಟರಿ ಮಿಸ್ಟಿಹಿಲ್ಸ್ ಹಾಗೂ ಜನಪದ ದಸರೆಗೆ ಕರ್ನಾಟಕ ಜಾನಪದ ಪರಿಷತ್‌ಗಳು ಸಹಕಾರ ನೀಡಿರುವಂತಹ ಬೆರಳೆಣಿಕೆಯಷ್ಟು ಉದಾಹರಣೆಗಳನ್ನು ಬಿಟ್ಟರೆ ಉಳಿದಂತೆ ಬೇರೆ ಹೆಚ್ಚಿನ ಉದಾಹರಣೆಗಳು ಸಿಗುವುದಿಲ್ಲ.

ADVERTISEMENT

ಇಲ್ಲಿರವ ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ರೋಟರಿ, ಲಯನ್ಸ್‌ನಂತಹ ಸ್ವಯಂಸೇವಾ ಸಂಸ್ಥೆಗಳು ಸೇರಿದಂತೆ ಅನೇಕ ಸಂಘ, ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ವಿವಿಧ ಸರ್ಕಾರಿ ಇಲಾಖೆಗಳನ್ನಾದರೂ ವಿಶ್ವಾಸಕ್ಕೆ ತೆಗೆದುಕೊಳ್ಳಬಹುದಿತ್ತು. ಈ ಬಗೆಯ ಕೆಲಸಗಳು ಆಗಿಲ್ಲ.

ಆಯುಷ್ ಸೇರಿದಂತೆ ವಿವಿಧ ಯೋಗ ತರಬೇತಿ ಸಂಸ್ಥೆಗಳ ಸಹಯೋಗ ಪಡೆದರೆ ಯೋಗ ದಸರೆಯನ್ನೂ ಇಲ್ಲಿ ಆಯೋಜಿಸಬಹುದು. ಕಾಫಿ ಮಂಡಳಿಯ ಸಹಯೋಗ ಪಡೆದರೆ ಕಾಫಿ ಮಂಡಳಿ ಅಧಿಕಾರಿಗಳು ಕಾಫಿ ಕುರಿತ ಪ್ರಚಲಿತ ಬೆಳವಣಿಗೆಳನ್ನು ಬೆಳಗಾರರಿಗೆ ನೀಡಬಹುದಿತ್ತು. ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗ ಪಡೆದರೆ ಕೃಷಿ ದಸರೆಯನ್ನು ಆಯೋಜಿಸಬಹುದಿತ್ತು. ಈ ಮೂಲಕ ಈ ಕ್ಷೇತ್ರದ ಅಮೂಲ್ಯ ಸಲಹೆಗಳಾದರೂ ಜನರಿಗೆ ಸಿಗುತ್ತಿತ್ತು. ಆರೋಗ್ಯ ಇಲಾಖೆಯ ಸಹಕಾರದಿಂದ ಆರೋಗ್ಯ ದಸರೆ ಏರ್ಪಡಿಸಿ ಉಚಿತ ಆರೋಗ್ಯ ತಪಾಸಣೆಯನ್ನಾದರೂ ಏರ್ಪಡಿಸಬಹುದಿತ್ತು ಎಂದು ಸಾರ್ವಜನಿಕರು ಹೇಳುತ್ತಾರೆ.

ಪ್ರವಾಸೋದ್ಯಮಿಗಳ ಸಹಕಾರ ಪಡೆದರೆ ನಗರದಲ್ಲೂ ಮೈಸೂರಿನ ಹಾಗೆ ವರ್ಣರಂಜಿತ ವಿದ್ಯುತ್ ದೀಪಗಳ ಅಲಂಕಾರ ಮಾಡುವ ಅವಕಾಶ ಇದೆ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ನಡೆಸಬಹದಾಗಿದೆ.

ಇನ್ನು ಮುಂದಿನ ವರ್ಷಗಳಲ್ಲಾದರೂ ಜಿಲ್ಲಾಡಳಿತ, ದಸರಾ ಸಮಿತಿಗಳು ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗಗಳನ್ನು ಪಡೆಯಬೇಕಿದೆ. ಇದು ನಮ್ಮ ದಸರೆ ಎಂಬ ಭಾವನೆ ಎಲ್ಲ ಇಲಾಖೆಗಳ ಅಧಿಕಾರಿಗಳು, ವಿವಿಧ ಸಂಘ, ಸಂಸ್ಥೆಗಳಿಗೂ ಬರಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.