ADVERTISEMENT

ಕೊಡಗು: ‘8ನೇ ಶೆಡ್ಯೂಲ್‌ಗೆ ಕೊಡವ ಭಾಷೆ ಸೇರಿಸಿ’

ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹ, ಪ್ರತಿಭಟನೆ, ಮನವಿ ಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 1:46 IST
Last Updated 22 ಫೆಬ್ರುವರಿ 2026, 1:46 IST
ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಮುಖಂಡರು ಶನಿವಾರ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಮುಂಭಾಗ ಸಾಂ‍ಪ್ರದಾಯಿಕ ಪರಿಕರಗಳನ್ನಿರಿಸಿಕೊಂಡು ಪ್ರತಿಭಟನೆ ನಡೆಸಿದರು
ಕೊಡವ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಮುಖಂಡರು ಶನಿವಾರ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಮುಂಭಾಗ ಸಾಂ‍ಪ್ರದಾಯಿಕ ಪರಿಕರಗಳನ್ನಿರಿಸಿಕೊಂಡು ಪ್ರತಿಭಟನೆ ನಡೆಸಿದರು   

ಮಡಿಕೇರಿ: ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ಮುಖಂಡರು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಅಂಗವಾಗಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಭಾಷಾ ತಜ್ಞ ಪಂಡಿತ್ ಡಾ.ಸೀತಕಾಂತ್ ಮಹಾಪಾತ್ರ ಆಯೋಗದ ವರದಿಯ ಶಿಫಾರಸ್ಸಿನಂತೆ ಕೊಡವ ತಕ್ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್‌ಗೆ ಸೇರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಮಂಡಿಸಿದರು.

‘ಕೊಂಕಣಿ ಭಾಷೆಯ ಮಾದರಿಯಲ್ಲಿ ಮತ್ತು ತುಳು ಭಾಷೆಯ ಪ್ರಸ್ತಾವನೆಯಂತೆ, ಸಂವಿಧಾನದ ವಿಧಿ 345 ಮತ್ತು 347ರ ಅಡಿಯಲ್ಲಿ ಕೊಡವ ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಹಾಗೂ ವಿಧಿ 350ರ ಅಡಿಯಲ್ಲಿ ಆಡಳಿತ ಮತ್ತು ಶಿಕ್ಷಣದಲ್ಲಿ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೊಡವ ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಕೊಡವ ಸಮುದಾಯಕ್ಕೆ ಕಾನೂನುಬದ್ಧ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಯೋಜನಗಳು ದೊರೆಯುತ್ತವೆ. ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಗುರುತಿಸಲಾಗುವ ಮೂಲಕ ಭಾಷೆಯ ಪ್ರತಿಷ್ಠೆ ಹೆಚ್ಚುತ್ತದೆ ಮತ್ತು ಇದನ್ನು ಕೇವಲ ಒಂದು ಉಪಭಾಷೆ ಎಂದು ಪರಿಗಣಿಸುವುದನ್ನು ತಡೆಯುತ್ತದೆ. ಶಾಲಾ ಪಠ್ಯಕ್ರಮದಲ್ಲಿ ಬೋಧನಾ ಮಾಧ್ಯಮವಾಗಿ ಕೊಡವ ಭಾಷೆಯನ್ನು ಪರಿಚಯಿಸಲು ಸುಲಭವಾಗುತ್ತದೆ’ ಎಂದು ಅವರು ಪ್ರತಿಪಾದಿಸಿದರು.

‘ಅಧಿಕೃತ ಆಡಳಿತದಲ್ಲಿ, ಕಾನೂನು ಸಂದರ್ಭಗಳಲ್ಲಿ ಕೊಡವ ಭಾಷೆ ಬಳಸಲು ಸಾಧ್ಯವಾಗುತ್ತದೆ. ಭಾಷೆಯ ಪ್ರಚಾರ, ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ದೊರೆಯುತ್ತದೆ. ವಿಶಿಷ್ಟ ಪ್ರಾದೇಶಿಕ ಸಂಸ್ಕೃತಿಕ ಮತ್ತು ಉಪಭಾಷೆಗಳನ್ನು ರಕ್ಷಿಸಲು ಅಭಿವೃದ್ಧಿ ನಿಧಿಯನ್ನು ಒದಗಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಸಿಗುತ್ತದೆ. ಸಂಸದರು, ಶಾಸಕರು ಸಂಸತ್ತು ಮತ್ತು ವಿಧಾನಸಭೆಯಲ್ಲಿ ತಮ್ಮ ಮಾತೃಭಾಷೆಯಲ್ಲಿಯೇ ಮಾತನಾಡಬಹುದು. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಮಾನ್ಯತೆ ದೊರೆತು ಕೊಡವ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗುತ್ತದೆ. ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಭಾರತೀಯ ಭಾಷಾ ಪತ್ರಿಕೆಯಾಗಿ ಕೊಡವ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗಬಹುದು’ ಎಂದು ಹೇಳಿದರು.

‘ಸ್ಥಳೀಯ ಕೊಡವ ಜಾನಪದ ಗ್ರಾಮಗಳ ಮತ್ತು ಹಳ್ಳಿಗಳ ಹೆಸರುಗಳನ್ನು ಮಾತ್ರವಲ್ಲ ಹಬ್ಬಗಳ ಹೆಸರ‌ನ್ನೂ ಕನ್ನಡಕ್ಕೆ ಬದಲಾಯಿಸಿ ವಿರೂಪಗೊಳಿಸಲಾಗಿದೆ. ಇದು ಕೊಡವರ ಪರಂಪರೆ ಮತ್ತು ಅನನ್ಯತೆಯ ಬಗ್ಗೆ ಇರುವ ಅಸಡ್ಡೆಯನ್ನು ತೋರಿಸುತ್ತದೆ. ಮಾತ್ರವಲ್ಲ, ಮಾನವ ಹಕ್ಕುಗಳ ಉಲ್ಲಂಘನೆಯ ಪ್ರತಿಬಿಂಬವೂ ಆಗಿದೆ’ ಎಂದು ದೂರಿದರು.

ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಪಟ್ಟಮಾಡ ಲಲಿತಾ ಗಣಪತಿ, ಚೋಳಪಂಡ ಜ್ಯೋತಿ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ ನಿವೃತ್ತ ಬಿ.ಎಂ.ಪಾರ್ವತಿ, ಮುದ್ದಿಯಡ ಲೀಲಾವತಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ಕಲಿಯಂಡ ಪ್ರಕಾಶ್, ಕುಕ್ಕೇರ ಜಯ ಚಿಣ್ಣಪ್ಪ, ಚಂಬಂಡ ಜನತ್, ಅರೆಯಡ ಗಿರೀಶ್, ಮಂದಪಂಡ ಮನೋಜ್ ಮಂದಣ್ಣ, ಕಿರಿಯಮಾಡ ಶೆರಿನ್, ನಂದಿನೆರವಂಡ ಅಪ್ಪಯ್ಯ, ಪುಟ್ಟಿಚಂಡ ಡಾನ್ ದೇವಯ್ಯ, ಬಡುವಂಡ ವಿಜಯ, ನಂದಿನೇರವಂಡ ವಿಜು, ಮಣವಟ್ಟಿರ ಚಿಣ್ಣಪ್ಪ, ಕೂಪದಿರ ಸಾಬು, ಚೋಳಪಂಡ ನಾಣಯ್ಯ ಹಾಗೂ ಅಜ್ಜಿಕಂಡ ಸನ್ನಿ ಮಾಚಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.