ADVERTISEMENT

ಮಂಟಪೋತ್ಸವಕ್ಕೆ ಡಿಜಿಟಲ್ ಸ್ಪರ್ಶ; ಅತ್ಯಾಧುನಿಕ ತಂತ್ರಜ್ಞಾನ ಬಳಕೆ

ಕರವಲೆ ಭಗವತಿ ಮಹಿಷಮರ್ಧಿನಿ ದೇಗುಲ ಸಮಿತಿಯಿಂದ 27ನೇ ವರ್ಷದ ಮಂಟಪೋತ್ಸವ

ಕೆ.ಎಸ್.ಗಿರೀಶ್
Published 1 ಅಕ್ಟೋಬರ್ 2022, 12:22 IST
Last Updated 1 ಅಕ್ಟೋಬರ್ 2022, 12:22 IST
ಕರವಲೆ ಭಗವತಿ ಮಹಿಷಮರ್ಧಿನಿ ದೇಗುಲ
ಕರವಲೆ ಭಗವತಿ ಮಹಿಷಮರ್ಧಿನಿ ದೇಗುಲ   

ಮಡಿಕೇರಿ: ಕರವಲೆ ಭಗವತಿ ಮಹಿಷಮರ್ಧಿನಿ ದೇವಾಲಯ ಸಮಿತಿಯು ಈ ಬಾರಿ 27ನೇ ವರ್ಷದ ಮಂಟಪೋತ್ಸವಕ್ಕೆ ಭರದಿಂದ ತಯಾರಿ ನಡೆಸುತ್ತಿದೆ. ಸಾಂಪ್ರದಾಯಿಕ ಮಂಟಪಗಳು, ಕಲಾಕೃತಿಗಳು, ಅವುಗಳ ಚಲನವಲನಗಳು, ಪಟಾಕಿಗಳ ಜತೆಗೆ ಡಿಜಿಟಲ್ ತಂತ್ರಜ್ಞಾನವನ್ನೂ ಅಳವಡಿಸಿಕೊಳ್ಳಲು ಮುಂದಾಗಿದೆ.

‘ಶೋಮ್ಯಾನ್ ಕ್ರಿಯೇಷನ್ಸ್‌’ನವರು ಮಂಟಪಕ್ಕೆ ವಿದ್ಯುತ್ ದೀಪಾಲಂಕಾರದ ಜತೆಗೆ ಡಿಜಿಟಲ್ ಸ್ಪರ್ಶ ನೀಡಲಿದ್ದಾರೆ. ಡಿಜಿಟಲ್ ತಂತ್ರಜ್ಞಾನದಿಂದ ಮಂಟಪದಲ್ಲಿನ ಕಥಾ ಪ್ರಸ್ತುತಿಗೆ ವಿಶೇಷ ಮೆರುಗು ಸಿಗಲಿದೆ. ಈ ಮೆರುಗು ಹೇಗಿರಲಿದೆ ಎಂಬುದನ್ನು ಕಣ್ಣಾರೆ ನೋಡಿಯೇ ತಿಳಿಯಬೇಕು ಎಂದು ಹೇಳುತ್ತಾರೆ ಸಮಿತಿ ಅಧ್ಯಕ್ಷ ನೀರಜ್ ಬೋಪಣ್ಣ.

ಈ ಬಾರಿ ಅತ್ಯಂತ ವಿಶೇಷ ಎನಿಸಿದ ಕಥಾವಸ್ತುವನ್ನು ಪ್ರಸ್ತುತಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಗಣಪತಿಯು ಗಜಾಸುರ ಎಂಬ ರಾಕ್ಷಸನನ್ನು ಸಂಹರಿಸಿದ ಪ್ರಸಂಗವನ್ನು ಒಟ್ಟು 21 ಕಲಾಕೃತಿಗಳು ಮನೋಜ್ಞವಾಗಿ ಪ್ರಸ್ತುತಪಡಿಸಲಿವೆ. ಇದಕ್ಕಾಗಿ 2 ಟ್ರಾಕ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ತಮಿಳುನಾಡಿನ ಜೇಮ್ಸ್ ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಪ್ಲಾಟ್ ಫಾರಂನ್ನು ಸಮಿತಿ ಸದಸ್ಯರೆ ನಿರ್ಮಿಸಲಿದ್ದು, ಟ್ರಾಕ್ಟರ್ ಸೆಟ್ಟಿಂಗ್‌ನ್ನು ಮಡಿಕೇರಿಯ ಶೋಮ್ಯಾನ್- ಕ್ರಿಯೇಷನ್ಸ್ ತಂಡ ಮಾಡಲಿದೆ. ಧ್ವನಿವರ್ಧಕವನ್ನು ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ ಒದಗಿಸಲಿದ್ದು, ಸ್ಟುಡಿಯೊ ಲೈಟ್‌ಗಳನ್ನು ಮಡಿಕೇರಿಯ ಸ್ಕಂದ ಲೈಟ್ಸ್ ತಂಡ ಅಳವಡಿಸಲಿದೆ. ‌

ADVERTISEMENT

21 ಕಲಾಕೃತಿಗಳನ್ನು ಬಳಸಲಾಗುತ್ತಿದ್ದು, ಮಂಗಳೂರಿನ ಕಲಾವಿದರಾದ ಸ್ಪರ್ಶ ಆರ್ಟ್ಸ್ ಮತ್ತು ಸತ್ಯಶ್ರೀ ದಯಾ ಕಲಾಕೃತಿಗಳನ್ನು ನಿರ್ಮಿಸಲಿದ್ದಾರೆ. ಕಲಾಕೃತಿಗಳಿಗೆ ಚಲನವಲನವನ್ನು ಸಮಿತಿ ಸದಸ್ಯರೇ ನೀಡುವುದು ವಿಶೇಷ.

ಡಿಜಿಟಲ್ ಸ್ಪರ್ಶ ಇರುವ ಪ್ರದರ್ಶನವನ್ನು ಚೌಕಿಯನ್ನು ನಸುಕಿನ 2.30ಕ್ಕೆ ನೀಡಲು ನಿರ್ಧರಿಸಲಾಗಿದೆ. ಕರವಲೆ ಭಗವತಿ ದೇಗುಲದ ಮುಂದೆ ಪ್ರದರ್ಶನ ನೀಡಿದ ನಂತರ ಮುತ್ತಪ್ಪ ದೇಗುಲದ ಮೂಲಕ ಮಹದೇವಪೇಟೆಯ ಮುಖ್ಯರಸ್ತೆಗೆ ಬಂದುಚೌಕಿಯಲ್ಲಿ ಮುಖ್ಯ ಪ್ರದರ್ಶನ ನೀಡಲಾಗುತ್ತದೆ. ಮಂಟಪಕ್ಕಾಗಿ ₹ 18 ಲಕ್ಷ ವೆಚ್ಚದ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.