ಮಡಿಕೇರಿ: ಕೊಡಗಿನಲ್ಲೂ ಐಎಸ್ (ಇಸ್ಲಾಮಿಕ್ ಸ್ಟೇಟ್) ಉಗ್ರರು ತರಬೇತಿ ನಡೆಸಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿ ಹರಿದಾಡುತ್ತಿದ್ದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
‘2015ರಲ್ಲಿ ಗೋಣಿಕೊಪ್ಪಲು ಭಾಗದಲ್ಲಿ ಉಗ್ರರು ತಮ್ಮ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದರು ಎನ್ನುವ ಮಾಹಿತಿಯಿತ್ತು. ಆದರೆ, ಇತ್ತೀಚೆಗೆ ಆ ರೀತಿಯ ಚಟುವಟಿಕೆಗಳೂ ಜಿಲ್ಲೆಯಲ್ಲಿ ನಡೆದಿರುವ ಸಾಧ್ಯತೆ ಇಲ್ಲ. ಸಿಸಿಬಿ ತನಿಖಾಧಿಕಾರಿಗಳನ್ನು ಸಂಪರ್ಕಿಸಿದ್ದು, ಅವರೂ ಈ ಮಾಹಿತಿ ನಿರಾಕರಿಸಿದ್ದಾರೆ. ಸದ್ಯಕ್ಕೆ ಅಂಥಹದ್ದು ಯಾವ ಘಟನೆಯೂ ಜಿಲ್ಲೆಯಲ್ಲಿ ನಡೆದಿಲ್ಲ. ಆದರೂ, ನಾವು ಕಟ್ಟೆಚ್ಚರ ವಹಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ. ಪನ್ನೇರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗೋಣಿಕೊಪ್ಪಲು ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ತರಬೇತಿಗೆ ಸ್ಥಳೀಯ ವ್ಯಕ್ತಿಯಿಂದ ಆರ್ಥಿಕ ನೆರವು ಕೋರಿದ್ದೆವು. ಈ ಪ್ರದೇಶವು ಕೇರಳಕ್ಕೂ ಸಮೀಪವಿರುವ ಕಾರಣಕ್ಕೆ ಯುವಕರಿಗೆ ಉಗ್ರ ತರಬೇತಿ, ಸಂಘಟನೆಗೆ ಯೋಜನೆ ರೂಪಿಸಿದ್ದೆವು’ ಎಂದು ಬಂಧಿತ ಶಂಕಿತ ಉಗ್ರರು ಸಿಸಿಬಿ ಪೊಲೀಸರ ಎದುರು ಬಾಯ್ಬಿಟ್ಟಿದ್ದಾರೆ ಎನ್ನುವ ಮಾಹಿತಿ ಜಿಲ್ಲೆಯಲ್ಲಿ ಹರಿದಾಡುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.