
ಕೊಡಗು ಜಿಲ್ಲಾಡಳಿತ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ವತಿಯಿಂದ ಶನಿವಾರ ಮಡಿಕೇರಿಯಲ್ಲಿ ನಡೆದ ‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’ ಹಾಗೂ ‘ಅಂಗಾಂಗ ದಾನ ಅಭಿಯಾನ(ಜೀವ ಸಾರ್ಥಕತೆ ಅಭಿಯಾನ)’ದ ಪ್ರಯುಕ್ತ ನಡೆದ ಜಾಥಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಮಡಿಕೇರಿ: ‘ಮಾದಕವಸ್ತು ಮುಕ್ತ ಕ್ಯಾಂಪಸ್’ ಎಂದು ಘೋಷಿಸಿಕೊಂಡ ಕಾಲೇಜುಗಳಿಗೆ ಮಾತ್ರವೇ ಮಾನ್ಯತೆ ನೀಡಲು ನಿರ್ಧರಿಸಲಾಗಿದೆ’ ಎಂದು ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್ ಅವರು ಶನಿವಾರ ಇಲ್ಲಿ ತಿಳಿಸಿದರು.
ಇಲ್ಲಿ ನಡೆದ ‘ನಶಾ ಮುಕ್ತ ಭಾರತ-ಸ್ವಾಸ್ಥ್ಯ ಭಾರತ’, ಅಂಗಾಂಗ ದಾನ ಅಭಿಯಾನದಲ್ಲಿ ಮಾತನಾಡಿ, ‘ದೇಶದಲ್ಲಿ ಶೇ 30ರಿಂದ 40ರಷ್ಟು ವಿದ್ಯಾರ್ಥಿಗಳು ಮಾದಕವಸ್ತುಗಳ ವ್ಯಸನಕ್ಕೆ ಒಳಗಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಕಾಲೇಜುಗಳನ್ನೂ ಮಾದಕವಸ್ತು ಮುಕ್ತವಾಗಿಸಲು ನಿರ್ಧರಿಸಲಾಗಿದೆ’ ಎಂದರು.
‘ಮಾದಕವಸ್ತುಗಳ ವಿರುದ್ಧ ಕಾರ್ಯಾಚರಣೆಗಾಗಿ ಪ್ರತಿ ಕಾಲೇಜಿನಲ್ಲೂ ಕಾರ್ಯಪಡೆ ರಚಿಸಬೇಕು. ಬಿಗಿಯಾದ ತಪಾಸಣೆ, ಪರೀಕ್ಷೆ ನಡೆಸಬೇಕು. ಶೀಘ್ರ ನಶಾಮುಕ್ತ ಕ್ಯಾಂಪಸ್ ಎಂದು ಘೋಷಿಸಬೇಕು’ ಎಂದು ಸೂಚಿಸಿದರು.
‘ಮುಂದಿನ ದಿನಗಳಲ್ಲಿ ಪ್ರತಿ ವಿದ್ಯಾರ್ಥಿಯನ್ನೂ ತಪಾಸಣೆಗೆ ಮತ್ತು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ಎಲ್ಲರೂ ಎಚ್ಚರದಿಂದಿರಬೇಕು. ಮದ್ಯ, ಮಾದಕವಸ್ತು ಚಟದಿಂದ ಮುಕ್ತರಾಗಬೇಕು’ ಎಂದು ಹೇಳಿದರು.