
ವಿರಾಜಪೇಟೆ: ಪಟ್ಟಣದ ತಾಲ್ಲೂಕು ಮೈದಾನದಲ್ಲಿ ಕಂಪೇನಿಯನ್ಸ್ ವಿದ್ಯಾರ್ಥಿ ಬಳಗದ ವತಿಯಿಂದ ಡ್ರಗ್ಸ್ ಮುಕ್ತ ಭಾರತ ಅಭಿಯಾನ ಅಡಿಯಲ್ಲಿ ಭಾನುವಾರ ನಡೆದ ಫುಟ್ಬಾಲ್ ಟೂರ್ನಿಯಲ್ಲಿ ಆತಿಥೇಯ ಕಂಪೇನಿಯನ್ಸ್ ತಂಡವು ಪ್ರಶಸ್ತಿಯನ್ನು ಪಡೆದುಕೊಂಡಿತು.
ಫೈನಲ್ ಪಂದ್ಯದಲ್ಲಿ ಕಂಪೇನಿಯನ್ಸ್ ತಂಡವು 1-0 ಗೋಲಿನಿಂದ ಸಿ.ಸಿ.ಬಿ ತಂಡವನ್ನು ಮಣಿಸಿ ಗೆಲುವು ಸಾಧಿಸಿತು. ಇದಕ್ಕು ಮೊದಲು ನಡೆದ ಪ್ರಥಮ ಸೆಮಿಫೈನಲ್ನಲ್ಲಿ ಪಾಲಿಬೆಟ್ಟದ ಯಂಗ್ ಇಂಡಿಯಾ ತಂಡವನ್ನು ಕಂಪೇನಿಯನ್ಸ್ ತಂಡ ಏಕೈಕ ಗೋಲಿನಿಂದ ಮಣಿಸಿತು. ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಸಿ.ಸಿ.ಬಿ ತಂಡವು ಗೋಣಿಕೊಪ್ಪಲಿನ ಕ್ಲಾಸಿಕ್ ಇಂಡಿಯಾವನ್ನು ಪೆನಾಲ್ಟಿಯಲ್ಲಿ ಗಳಿಸಿದ ಗೋಲಿನ ಮೂಲಕ ಮಣಿಸಿತು.
ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಯಿತು. ಟೂರ್ನಿಯಲ್ಲಿ ಫಾರಿಸ್ ಅತ್ಯಧಿಕ ಗೋಲು ದಾಖಲಿಸಿದರೆ, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಕೆವಿನ್, ಫೈನಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ದರ್ಶನ್, ಉತ್ತಮ ಮುನ್ನಡೆ ಆಟಗಾರ ಪ್ರಶಸ್ತಿಯನ್ನು ಸುಹೈಲ್ ಅವರು ಪಡೆದುಕೊಂಡರು.
ಸಮರೋಪ ಸಮಾರಂಭ: ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಕೇರಳದ ಮಲಪುರಂನ ಉಮ್ಮರ್ ಎಂ.ಎನ್. ಅವರು, ಯುವಕರಲ್ಲಿ ಇಂದು ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಅವರ ಕುಟುಂಬಗಳು ಬೀದಿ ಪಾಲಾಗುತಿರುವುದರ ಜೊತೆಗೆ ಸಮಾಜದಲ್ಲಿಯು ಅಹಿತಕರ ಘಟನೆಗಳು ಹೆಚ್ಚಾಗುತ್ತಿವೆ. ಸಮಾಜ ಮತ್ತು ಕುಟುಂಬದ ಹಿತದೃಷ್ಟಿಯಿಂದ ಮಾದಕ ವಸ್ತುಗಳ ವಿರುದ್ಧ ಇಂದು ಪ್ರತಿಯೊಬ್ಬರೂ ಹೋರಾಡುವ ಅನಿವಾರ್ಯತೆಯಿದೆ ಎಂದರು.
ಸ್ಟೂಡೆಂಟ್ ಕೌನ್ಸಿಲ್ ಆಫ್ ಇಂಡಿಯಾ ಜಿಲ್ಲಾ ನಿರ್ದೇಶಕ ಸುಹಾನ್ ಕಬೀರ್ ಅವರು ಮಾತನಾಡಿದರು. ಕಂಪೇನಿಯನ್ಸ್ ವಿದ್ಯಾರ್ಥಿ ಬಳಗದ ಸದಸ್ಯರು, ವಿವಿಧ ತಂಡಗಳ ಮಾಲೀಕರು ಮತ್ತು ಆಟಗಾರರು, ಸಾರ್ವಜನಿಕರು ಹಾಜರಿದ್ದರು. ಮೂರು ದಿನಗಳ ಕಾಲ ಟೂರ್ನಿಯಲ್ಲಿ ಕೇರಳ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯದ ವಿವಿಧೆಡೆಯ ಒಟ್ಟು 32 ತಂಡಗಳು ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.