ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಸಮೀಪದ ಮತ್ತಿಗೋಡು ಸಾಕಾನೆ ಶಿಬಿರ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಸಾಕಾನೆ ಫೋಟೊ ತೆಗೆಯಲು ಹೋಗಿದ್ದ ಇಬ್ಬರ ಮೇಲೆ ಆನೆ ದಾಳಿ ನಡೆಸಿದ್ದು ಸವಾರರಿಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಬೈಕ್ನಲ್ಲಿ ಇಬ್ಬರು ತಿತಿಮತಿ ಕಡೆಯಿಂದ ಆನೆಚೌಕೂರಿನತ್ತ ತೆರಳುತ್ತಿದ್ದಾಗ ‘ಭೀಮ’ ಎಂಬ ಸಾಕಾನೆ, ಮತ್ತಿಗೋಡು ಶಿಬಿರದ ರಸ್ತೆ ಬದಿಯಲ್ಲಿ ನಿಂತಿತ್ತು. ಆಗ, ಬೈಕ್ ಸವಾರರು ಆನೆಯ ಫೋಟೊ ತೆಗೆಯಲು ಮುಂದಾಗಿದ್ದಾರೆ. ಕೂಡಲೇ ಆನೆ ಕೆರಳಿ ಫೋಟೊ ತೆಗೆಯುವವರತ್ತ ತಿರುಗಿದೆ. ಬೈಕ್ ಅನ್ನು ರಸ್ತೆಯಲ್ಲಿಯೇ ಬಿಟ್ಟು ಓಡಿದ ಸವಾರರು ಜೀವ ಉಳಿಸಿಕೊಂಡಿದ್ದಾರೆ.
ಈ ವೇಳೆಯಲ್ಲಿ ಬೈಕ್ ಮಧ್ಯ ರಸ್ತೆಯಲ್ಲಿ ಬಿದ್ದಿದ್ದು ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಆಗಿತ್ತು. ಆನೆ ಮಾವುತರು ಸ್ಥಳಕ್ಕೆ ಬಂದು ಬೈಕ್ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸವಾರರು ಯಾರೆಂದು ತಿಳಿದುಬಂದಿಲ್ಲ ಎಂದು ಶಿಬಿರದ ಆರ್ಎಫ್ಒ ಕಿರಣ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.