ADVERTISEMENT

ಕುಶಾಲನಗರ: ಧಿಕ್ಕಾರ ಕೂಗಿದ ಕಾರ್ಯಕರ್ತಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 14:21 IST
Last Updated 5 ನವೆಂಬರ್ 2020, 14:21 IST
ಕುಶಾಲನಗರ ಪ.ಪಂ. ಉಪಾಧ್ಯಕ್ಷೆ ಮನೆ ಎದುರು ಪ್ರತಿಭಟನೆ ನಡೆಸಿದ ಝಬಿಯುಲ್ಲಾ ಅವರನ್ನು ಜೆಡಿಎಸ್ ಅಲ್ಪಸಂಖ್ಯಾತ ಘಟಕ ಸನ್ಮಾನಿಸಿತು
ಕುಶಾಲನಗರ ಪ.ಪಂ. ಉಪಾಧ್ಯಕ್ಷೆ ಮನೆ ಎದುರು ಪ್ರತಿಭಟನೆ ನಡೆಸಿದ ಝಬಿಯುಲ್ಲಾ ಅವರನ್ನು ಜೆಡಿಎಸ್ ಅಲ್ಪಸಂಖ್ಯಾತ ಘಟಕ ಸನ್ಮಾನಿಸಿತು   

ಕುಶಾಲನಗರ: ಸ್ಥಳೀಯ ಪಟ್ಟಣ ಚುನಾವಣೆಯಲ್ಲಿ ಜೆಡಿಎಸ್‌ ವಿಪ್ ಉಲ್ಲಂಘಿಸಿ ಬಿಜೆಪಿಗೆ ಬೆಂಬಲ ನೀಡಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಸುರಯ್ಯಬಾನು ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತ ಝಬಿಯುಲ್ಲಾ ಅವರನ್ನು ಪಕ್ಷದ ಅಲ್ಪಸಂಖ್ಯಾತರ ಘಟಕ ಸನ್ಮಾನಿಸಿತು.

ಅಲ್ಲದೆ, ಜೆಡಿಎಸ್ ಜಿಲ್ಲಾ ಯುವ ಘಟಕ ಕುಶಾಲನಗರ ಯುವ ಘಟಕಕ್ಕೆ ಅಧ್ಯಕ್ಷರಾಗಿ ನೇಮಿಸಿತು.

ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್‍ಖಾನ್ ಅವರು ಝಬಿಯುಲ್ಲಾ ಮಾತನಾಡಿ, ಪಟ್ಟಣ ಪಂಚಾಯಿತಿ ಸದಸ್ಯೆ ಸುರಯ್ಯಬಾನು ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣಕ್ಕೆ ಅಸಮಾಧಾನಗೊಂಡ ಕಾರ್ಯಕರ್ತ ಝಬಿಯುಲ್ಲಾ ಸಹಜವಾಗಿ ಪ್ರತಿಭಟನೆ ನಡೆಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಆದರೆ, ಪೊಲೀಸರು ಝಬಿಯುಲ್ಲಾ ಅವರನ್ನು ವಶಕ್ಕೆ ಪಡೆದಿರುವುದು ಮಾತ್ರ ಖಂಡನೀಯ ಎಂದು ಹೇಳಿದರು.

ADVERTISEMENT

ಕಾರ್ಯಕರ್ತರನ್ನು ನಾಯಕರನ್ನಾಗಿ ಬೆಳೆಸುವ ಪಕ್ಷ ಜೆಡಿಎಸ್ ಆಗಿದ್ದು, ಇದೇ ಕಾರಣಕ್ಕೆ ಝಬಿಯುಲ್ಲಾ ಅವರ ಪಕ್ಷ ನಿಷ್ಠೆಯನ್ನು ಗಮನಿಸಿ ಕುಶಾಲನಗರ ನಗರ ಯುವ ಘಟಕದ ಅಧ್ಯಕ್ಷ ಸ್ಥಾನವನ್ನು ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ ಅವರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಝಬಿಯುಲ್ಲಾ ಮಾತನಾಡಿ, ಪಂಚಾಯಿತಿ ಸದಸ್ಯರ ಸ್ಥಾನಕ್ಕೆ ನಡೆದ ಚುನಾವಣೆಯ ಸಂದರ್ಭ ಕಾರ್ಯಕರ್ತರೆಲ್ಲರು ಸೇರಿ ಸುರಯ್ಯಬಾನು ಅವರ ಗೆಲುವಿಗೆ ಅವಿರತ ಶ್ರಮ ವಹಿಸಿದ್ದೇವೆ. ಆದರೆ, ಅಧಿಕಾರ ಮತ್ತು ಹಣದ ಆಸೆಯಿಂದ ಇದೀಗ ಸುರಯ್ಯ ಅವರು ಬಿಜೆಪಿ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ. ಅಲ್ಪಸಂಖ್ಯಾತರ ಮತಗಳು ಬಿಜೆಪಿಗೆ ಬೆಂಬಲವಾಗಿ ರೂಪಾಂತರಗೊಂಡಿದ್ದರಿಂದ ಮತದಾರರು ತೀವ್ರ ಬೇಸರಗೊಂಡಿದ್ದಾರೆ ಎಂದು ಹೇಳಿದರು.

ಪ.ಪಂ ಸದಸ್ಯ ಶೇಕ್ ಖಲೀಮುಲ್ಲಾ, ಡಾ.ಅಂಬೇಡ್ಕರ್ ಜನಪದ ವೇದಿಕೆಯ ಜಿಲ್ಲಾಧ್ಯಕ್ಷ ಜಯಪ್ರಕಾಶ್ ಹಾಗೂ ಜೆಡಿಎಸ್ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.