ADVERTISEMENT

ಕುಶಾಲನಗರದ ಐತಿಹಾಸಿಕ ದೇವಾಲಯದ ಗಣಪತಿ ಬ್ರಹ್ಮರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 14:03 IST
Last Updated 4 ಡಿಸೆಂಬರ್ 2020, 14:03 IST
ಕುಶಾಲನಗರದಲ್ಲಿ ಶುಕ್ರವಾರ ಗಣಪತಿ ರಥೋತ್ಸವ ಸರಳವಾಗಿ ನಡೆಯಿತು
ಕುಶಾಲನಗರದಲ್ಲಿ ಶುಕ್ರವಾರ ಗಣಪತಿ ರಥೋತ್ಸವ ಸರಳವಾಗಿ ನಡೆಯಿತು   

ಕುಶಾಲನಗರ: ಪಟ್ಟಣದ ಐತಿಹಾಸಿಕ ಗಣಪತಿ ಬ್ರಹ್ಮ ರಥೋತ್ಸವವು ಶುಕ್ರವಾರ ಸರಳವಾಗಿ ಜರುಗಿತು.

ವಾರ್ಷಿಕ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು.

ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ಅರ್ಚಕರಾದ ರಾಘವೇಂದ್ರ ಆಚಾರ್, ಕೃಷ್ಣಮೂರ್ತಿ, ಸುಬ್ರಹ್ಮಣ್ಯ, ಸುಬ್ಬ ರಾಮು ಹಾಗೂ ವಿವಿಧ ದೇವಸ್ಥಾನಗಳ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ಕಡಿಮೆ ಸಂಖ್ಯೆಯ ಭಕ್ತರು ಪಾಲ್ಗೊಂಡು ರಥವನ್ನು ಎಳೆದರು.

ADVERTISEMENT

ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಗಣಪತಿ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ರಥಕ್ಕೆ ಭಗವಧ್ವಜ, ವಿವಿಧ ಬಗೆಯ ಪುಷ್ಪಗಳಿಂದ ಅಲಂಕಾರ ಮಾಡಿ ಬೆಳಿಗ್ಗೆ 8.15ಕ್ಕೆ ಸರಿಯಾಗಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ನಂತರ ರಥಬಲಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗಣಪತಿ ದೇವಸ್ಥಾನದಿಂದ ರಥಬೀದಿಯ ಮೂಲಕ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ರಥ ಎಳೆದು ಭಕ್ತಿ ಮೆರೆದರು.

400 ವರ್ಷಗಳ ಇತಿಹಾಸ ಹೊಂದಿರುವ ಗಣಪತಿ ದೇವರ ವಾರ್ಷಿಕ ಉತ್ಸವಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ಸೇರುತ್ತಿದ್ದರು. ಆದರೆ, ಕೋವಿಡ್ ಕಾರಣದಿಂದ ಜಿಲ್ಲಾಡಳಿತದ ಅನುಮತಿ ಇಲ್ಲದೆ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಮಾರ್ಗದರ್ಶನದಂತೆ 50 ಮಂದಿ ಮಾತ್ರ ಮಾಸ್ಕ್ ಧರಿಸಿ ರಥವನ್ನು ಎಳೆಯಲು ದೇವಾಲಯ ಆಡಳಿತ ಮಂಡಳಿ ಯೋಜನೆ ರೂಪಿಸಿತ್ತು.

ಮೆರವಣಿಗೆ ಆರಂಭಗೊಂಡ ಬಳಿಕ ಹರಕೆ ಹೊತ್ತ ಭಕ್ತಾದಿಗಳು ಈಡುಗಾಯಿ ಒಡೆಯುವ ದೃಶ್ಯ ಕಂಡುಬಂದಿತು.

ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸರಾವ್ ಮತ್ತು ಖಜಾಂಚಿ ಎಂ.ಕೆ.ದಿನೇಶ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.

ಶಾಸಕರ ಭೇಟಿ: ಶಾಸಕ ಎಂ.ಪಿ.ಅಪ್ಪಚ್ಚು ರಂಜನ್,ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಸ್. ಚಂದ್ರಮೌಳಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜೈವರ್ಧನ್ ಸೇರಿದಂತೆ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಗಣಪತಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.

ಗೋಪುರ ದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ರದ್ದು: ಕೋವಿಡ್ ಕಾರಣದಿಂದ ರಥೋತ್ಸವದ ಅಂಗವಾಗಿ ಗುಂಡೂರಾವ್ ಬಡಾವಣೆಯಲ್ಲಿ ನಡೆಯಬೇಕಾಗಿದ್ದ 100ನೇ ಗೋಪುರ ದರ್ಶನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.