
ಪ್ರಜಾವಾಣಿ ವಾರ್ತೆ
ಸೋಮವಾರಪೇಟೆ ಸಮೀಪದ ಬೇಳೂರು ಬಾಣೆ ರಸ್ತೆಬದಿಯಲ್ಲಿರುವ ಕಾಫಿ ಕೆಫೆಯಲ್ಲಿ ಭಾನುವಾರ ಮಧ್ಯಾಹ್ನ ಅಗ್ನಿ ಅವಘಡ ಉಂಟಾಗಿದ್ದು, ಅಗ್ನಿಶಾಮಕ ಠಾಣಾ ಸಿಬ್ಬಂದಿ ಬೆಂಕಿ ನಂದಿಸಿದರು
ಸೋಮವಾರಪೇಟೆ: ಇಲ್ಲಿಗೆ ಸಮೀಪದ ಬೇಳೂರು ಬಾಣೆ ರಸ್ತೆ ಬದಿಯಲ್ಲಿರುವ ಕಾಫಿ ಕೆಫೆಯಲ್ಲಿ ಭಾನುವಾರ ಮಧ್ಯಾಹ್ನ ಅಗ್ನಿ ಆಕಸ್ಮಿಕ ಅವಘಡ ಉಂಟಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಹಾನಿ ತಪ್ಪಿದೆ.
ಕೆಫೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಬಾಗಿಲನ್ನು ಮುಚ್ಚಿ ಹೊರ ಬಂದ ಕೆಲವೇ ನಿಮಿಷಗಳಲ್ಲಿ ಒಳಭಾಗದಲ್ಲಿ ದಟ್ಟ ಹೊಗೆ ಉಂಟಾಗಿದೆ. ಸ್ಥಳೀಯರು ಕೆಫೆಯ ಕಿಟಕಿ ಮತ್ತು ಎಕ್ಸಿಟ್ ಫ್ಯಾನ್ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಿದರು. ಇದರೊಂದಿಗೆ ಅಗ್ನಿಶಾಮಕ ಠಾಣೆಗೆ ವಿಷಯ ತಿಳಿಸಿದ ಮೇರೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ ನೀರು ಸಿಂಪಡಿಸಿ, ಸಂಪೂರ್ಣವಾಗಿ ನಂದಿಸಿದರು.
ಘಟನೆಯಿಂದ ಕೆಫೆಯ ಒಳಭಾಗದಲ್ಲಿರುವ ವಿದ್ಯುತ್ ಉಪಕರಣಗಳು, ಅಡುಗೆ ಕೋಣೆಯ ಸಾಮಗ್ರಿಗಳು, ಬಾಯ್ಲರ್ಗಳು ಸಂಪೂರ್ಣ ಸುಟ್ಟುಹೋಗಿದ್ದು, ಮಾಲೀಕರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.