ಗೋಣಿಕೊಪ್ಪಲು: ಪ್ರಥಮ ಬಾರಿಗೆ ಆಯೋಜನೆ ಮಾಡಿದ್ದ ಮಲ್ಲಮಾಡ ಕುಟುಂಬದ ಕೊಡವ ಕೌಟುಂಬಿಕ ವಾಲಿಬಾಲ್ ಟೂರ್ನಿಯ ಪ್ರಶಸ್ತಿಯನ್ನು ಮಂಡುವಂಡ ತಂಡ ಪಡೆದುಕೊಂಡಿತು. ಮುಂಡಚಾಡಿರ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.
ಬೆಕ್ಕೆಸೊಡ್ಲೂರಿನ ಶಾರದಾ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಮಲ್ಲಮಾಡ ಕಪ್ ವಾಲಿಬಾಲ್ ಟೂರ್ನಿಯ ಫೈನಲ್ ರೋಚಕ ಪಂದ್ಯದಲ್ಲಿ ಉತ್ತಮವಾಗಿ ಆಡಿದ ಮಂಡುವಂಡ ತಂಡ ಮುಂಡಚಾಡಿರ ತಂಡವನ್ನು (2–1 ಸೆಟ್ನಿಂದ) ಮಣಿಸಿ ಅರ್ಹ ಗೆಲುವು ದಾಖಲಿಸಿತು. ಅಮ್ಮಂಡ ತಂಡ ಮೂರನೇ ಸ್ಥಾನ ಪಡೆದರೆ, ಮಲ್ಲಂಗಡ ತಂಡ ನಾಲ್ಕನೇ ಸ್ಥಾನದ ಗಳಿಸಿತು.
ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ₹ 40 ಸಾವಿರ ನಗದು ಬಹುಮಾನ ನೀಡಲಾಯಿತು. ರನ್ನರ್ಸ್ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ₹ 30 ಸಾವಿರ, 3ನೇ ಸ್ಥಾನ ಪಡೆದುಕೊಂಡ ತಂಡಕ್ಕೆ ₹ 20, ಸಾವಿರ 4ನೇ ಸ್ಥಾನ ಪಡೆದ ತಂಡಕ್ಕೆ ₹ 10 ಸಾವಿರ ನಗದು ಬಹುಮಾನ ನೀಡಲಾಯಿತು.
ಟೂರ್ನಿಯಲ್ಲಿ ಒಟ್ಟು 56 ಕೊಡವ ಕೌಟುಂಬಿಕ ತಂಡಗಳು ಭಾಗವಹಿಸಿದ್ದವು.
ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಗೋಣಿಕೊಪ್ಪಲು ಲೋಪಮುದ್ರಾ ಮೆಡಿಕಲ್ ಸೆಂಟರ್ ಮುಖ್ಯ ವೈದ್ಯಾಧಿಕಾರಿ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ ಮಾತನಾಡಿ, ‘ಆರೋಗ್ಯವಂತರಾಗಲು ಕ್ರೀಡೆ ಸಹಕಾರಿ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ಎಲ್ಲ ಕುಟುಂಬಗಳು ಒಂದಲ್ಲ ಒಂದು ಕ್ರೀಡೆ ಆಯೋಜಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.
ಗೋಣಿಕೊಪ್ಪಲು ಕಾವೇರಿ ಕಾಲೇಜು ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿದರು. ಮಲ್ಲಮಾಡ ಕುಟುಂಬದ ಅಧ್ಯಕ್ಷ ಪ್ರಭು ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಚಿರಿಯಪಂಡ ಕುಟುಂಬದ ಉಮೇಶ್, ರಾಕೇಶ್, ರಾಜ ನಂಜಪ್ಪ, ಪಟ್ಟು ಸೋಮಯ್ಯ, ಕುಂಡಿಯೊಳಂಡ ದಿನೇಶ್, ಟ್ರೋಫಿ ದಾನಿಗಳಾದ ಮಲ್ಲಮಾಡ ಪ್ರಕಾಶ್, ಮಾಚಿಮಾಡ ಚೆಣ್ಣಮ್ಮ, ಪೋರಿ ಮಂಡ ದೇವಿಕ, ಮಲ್ಲಮಾಡ ಉಷಾ ಹಾಜರಿದ್ದರು.
ಧ್ವಜ ಸ್ವೀಕರಿಸಿದ ಚಿರಿಯಪಂಡ ಕುಟುಂಬ: ಮುಂದಿನ ವರ್ಷ ಪೊನ್ನಂಪೇಟೆಯಲ್ಲಿ ಚಿರಿಯಪಂಡ ಕುಟುಂಬ ಎರಡನೇ ವರ್ಷದ ಕೊಡವ ಕೌಟುಂಬಿಕ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋಬಾಲ್ ಟೂರ್ನಿಯನ್ನು ಆಯೋಜಿಸುತ್ತಿದೆ. ಈ ಸಂಬಂಧ ಮಲ್ಲಮಾಡ ಕುಟುಂಬದಿಂದ ಚಿರಿಯಪಂಡ ಕುಟುಂಬದ ಪ್ರಮುಖರು ಧ್ವಜ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.