ಮಡಿಕೇರಿ: ‘ಸ್ನಾತಕೋತ್ತರ ಪದವಿಗೆ ತೆರಳುವಾಗ ವಿದ್ಯಾರ್ಥಿಗಳು ಕೋರ್ಸ್ ಆಯ್ಕೆಯಲ್ಲಿ ಕಾಳಜಿ ವಹಿಸಬೇಕು’ ಎಂದು ಹಿರಿಯ ವಕೀಲ ಬಿ.ಬಿ. ಮಾದಪ್ಪ ಕಿವಿಮಾತು ಹೇಳಿದರು.
ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ‘ಕ್ಯಾಂಪಸ್ ನೋಡಬನ್ನಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಎಲ್ಲ ವಿದ್ಯಾಸಂಸ್ಥೆಗಳಲ್ಲೂ ಒಂದೇ ಮಾದರಿಯ ಕೋರ್ಸ್ಗಳು ಇರುತ್ತವೆ. ಆದರೆ, ಗುಣಮಟ್ಟ ಹಾಗೂ ಭವಿಷ್ಯದ ದೃಷ್ಟಿಯಿಂದ ಕೋರ್ಸ್ ಆಯ್ಕೆ ಮಾಡಿಕೊಳ್ಳುವತ್ತ ಗಮನ ಹರಿಸಬೇಕು’ ಎಂದು ಎಚ್ಚರಿಸಿದರು. ‘ಈ ಕಾಲೇಜು ಇಷ್ಟೊಂದು ಎತ್ತರಕ್ಕೆ ಬೆಳೆಯಲು ವಿದ್ಯಾರ್ಥಿಗಳ ಪರಿಶ್ರಮವೇ ಕಾರಣ; ಕಾಲೇಜಿಗೆ ದೊರೆತ ಗ್ರೇಡ್ ಸಹ ಸಾಕ್ಷಿಯಾಗಿದೆ. ಉತ್ತಮ ಸಂಸ್ಥೆಯನ್ನು ಆರಿಸಿಕೊಂಡರೆ ಪೋಷಕರ ಮನಸ್ಸಿಗೂ ಸಮಾಧಾನ ಉಂಟಾಗುತ್ತದೆ’ ಎಂದು ಹೇಳಿದರು.
ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಟಿ.ಡಿ. ತಿಮ್ಮಯ್ಯ ಮಾತನಾಡಿ, ‘ಕಾಲೇಜು ಕ್ಯಾಂಪಸ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡ ನಂತರವೇ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬೇಕು. ಆಯಾ ಕೋರ್ಸ್ಗಳ ಬಗ್ಗೆ ಸಂಬಂಧಪಟ್ಟ ವಿಭಾಗಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು’ ಎಂದು ಸಲಹೆ ಮಾಡಿದರು.
‘ಸ್ನಾತಕೋತ್ತರ ಪದವಿಯ 6 ಕೋರ್ಸುಗಳಿವೆ. ಇವುಗಳ ಬಗ್ಗೆ ಆಯಾ ವಿಭಾಗಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರ ಜತೆಗೆ ಸಮಾಲೋಚನೆ ನಡೆಸಬಹುದು’ ಎಂದು ಗ್ರಂಥಪಾಲಕಿ ವಿಜಯಲತಾ ಹೇಳಿದರು. ಕಾಲೇಜಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಎಲ್ಲಾ ರೀತಿಯ ಪುಸ್ತಕಗಳಿವೆ. ಜಿಮ್ನಾಸ್ಟಿಕ್, ಕ್ರೀಡೆ ಮತ್ತಿತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬಹುದು. ಉಚಿತ ಇಂಟರ್ನೆಟ್ ಸೇವೆಯಿದೆ. ಕ್ಯಾಂಟೀನ್ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.