ಮಡಿಕೇರಿ: ಅಣಬೆ ಪುಡಿ, ಸಿರಿಧಾನ್ಯ ಮತ್ತು ಮೊಳಕೆ ಕಾಳಿನ ಪಾಸ್ತಾ, ಸ್ವಂತ ಬ್ರಾಂಡ್ನ ಕಾಫಿಪುಡಿ, ಮೀನಿನ ವಿವಿಧ ಖಾದ್ಯಗಳು, ಅಣಬೆ ಉಪ್ಪಿನಕಾಯಿ, ಅಣಬೆ ರಸಂ ಪುಡಿ ಹೀಗೆ ಅನೇಕ ಬಗೆಯ ಹೊಸ ಹೊಸ ಖಾದ್ಯಗಳ ಪ್ರದರ್ಶನ ಸೇರಿದ್ದ ನೂರಾರು ಮಂದಿಯನ್ನು ಸೆಳೆಯಿತು. ಆಹಾರ ಮೌಲ್ಯವರ್ಧಿತ ಈ ಉತ್ಪನ್ನಗಳನ್ನು ಕಂಡು ಅಧಿಕಾರಿಗಳೂ ಚಕಿತರಾದರು. ಕಿರು ಉದ್ಯಮಿಗಳು ತಮ್ಮ ತಮ್ಮ ಮೌಲ್ಯವರ್ಧಿತ ಉತ್ಪನ್ನಗಳ ವಿಶೇಷತೆಗಳನ್ನು ವಿವರಿಸಿ ಗಮನ ಸೆಳೆದರು.
ಇಂತಹದ್ದೊಂದು ಅಪರೂಪದ ದೃಶ್ಯಗಳು ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ(ಪಿಎಂಎಫ್ಎಂಇ) ಯೋಜನೆ ಕುರಿತ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಕಂಡು ಬಂತು.
ಸುಮಾರು 250 ಮಂದಿ ಇದರಲ್ಲಿ ಭಾಗವಹಿಸಿದ್ದರು. 30 ಮಂದಿ ಈ ಯೋಜನೆಯಡಿ ಕಿರು ಉದ್ಯಮಿಯಾಗಲು ನೋಂದಣಿ ಮಾಡಿಕೊಂಡರು. ಜೇನು ಹಾಗೂ ಅರಣ್ಯದ ಕಿರು ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಆಸಕ್ತಿವುಳ್ಳ 15 ಮಂದಿ ಬುಡಕಟ್ಟು ಮಂದಿಯೂ ಇದರಲ್ಲಿ ಭಾಗಿಯಾಗಿದ್ದು ವಿಶೇಷ ಎನಿಸಿತ್ತು. ಜೊತೆಗೆ, ವಿವಿಧ ಕಾಲೇಜುಗಳ 15ಕ್ಕೂ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ವೀಕ್ಷಿಸಿದರು.
ಮನೆಯಲ್ಲೇ ಸ್ವ ಉದ್ಯೋಗ ಆರಂಭಿಸಬಹುದು; ಜಿಲ್ಲಾಧಿಕಾರಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ‘ಕೇಂದ್ರ ಸರ್ಕಾರದ ‘ಆತ್ಮ ನಿರ್ಭರ ಭಾರತ’ ಅಭಿಯಾನದಡಿಯ ಪ್ರಧಾನಮಂತ್ರಿಯವರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್ಎಂಇ) ಯೋಜನೆಯಡಿ ಮನೆಯಲ್ಲಿಯೇ ಸ್ವ ಉದ್ಯೋಗ ಕೈಗೊಳ್ಳಬಹುದಾದ ಎಲ್ಲ ಅವಕಾಶಗಳಿವೆ’ ಎಂದು ಹೇಳಿದರು.
ಈ ಯೋಜನೆಯಡಿ ಕಿರು ಆಹಾರ ಸಂಸ್ಕರಣಾ ಉದ್ಯಮಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಹಾಯಧನ ದೊರೆಯಲಿದ್ದು, ಒಟ್ಟಾರೆ ಶೇ 50ರಷ್ಟು ಸಹಾಯಧನ ಸಿಗಲಿದೆ. ಈ ಅವಕಾಶ ಬಳಸಿಕೊಂಡು ಸ್ವಉದ್ಯೋಗ ಕೈಗೊಳ್ಳುವತ್ತ ಗಮನಹರಿಸಬೇಕು ಎಂದು ತಿಳಿಸಿದರು.
ಸ್ಥಳೀಯ ಉತ್ಪನ್ನಗಳನ್ನು ಬಳಸಿಕೊಂಡು ಕಿರು ಆಹಾರ ಸಂಸ್ಕರಣೆಯನ್ನು ಮಾಡಬಹುದಾಗಿದೆ. ಆ ನಿಟ್ಟಿನಲ್ಲಿ ತಮಗೆ ಯಾವುದು ಅನುಕೂಲ ಅದನ್ನು ಕೈಗೊಂಡು ಯಶಸ್ಸು ಸಾಧಿಸುವತ್ತ ಮುನ್ನಡೆಯಬೇಕು ಎಂದು ಅವರು ವಿವರಿಸಿದರು.
‘ಇಲ್ಲಿ ಏರ್ಪಡಿಸಲಾಗಿರುವ ವಸ್ತು ಪ್ರದರ್ಶನದಲ್ಲಿ ಬೇಕರಿ, ಕಾಫಿ, ಅಣಬೆ, ಸಾಂಬಾರ, ಸಿರಿಧಾನ್ಯ, ಚಪಾತಿ ಹೀಗೆ ವಿವಿಧ ರೀತಿಯ ಆಹಾರ ಸಂಸ್ಕರಣೆ ಬ್ರಾಂಡೆಂಡ್ ಆಗಿದ್ದು, ಗಮನ ಸೆಳೆಯುತ್ತಿದೆ ಎಂದು ಶ್ಲಾಘಿಸಿದ ಅವರು, ‘ಇವುಗಳಿಗೆ ದೇಶದಾದ್ಯಂತ ಮಾರುಕಟ್ಟೆ ಸೌಲಭ್ಯ ದೊರೆಯಬೇಕು’ ಎಂದು ಅವರು ಹೇಳಿದರು.
ಸಿಎಫ್ಟಿಆರ್ಐನ ಹಿರಿಯ ತಾಂತ್ರಿಕ ಅಧಿಕಾರಿ ಡಾ.ರಾಘವೇಂದ್ರ ಜಿಲ್ಲೆಯಲ್ಲಿ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಅವಕಾಶಗಳ ಕುರಿತು ಮಾತನಾಡಿದರು.
ಯೋಜನೆಯ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು ಹಾಗೂ ಸಾಲಸೌಲಭ್ಯದ ಚೆಕ್ ಅನ್ನು ವಿತರಿಸಲಾಯಿತು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ನ ಸಹಾಯಕ ಮಹಾ ಪ್ರಬಂಧಕ ರಮೇಶ್ ಬಾಬು, ಸಿರಿಧಾನ್ಯಗಳ ಉತ್ಪನ್ನಗಳ ಕುರಿತು, ಅರ್ಚನಾ ಕೆ.ಎಂ., ನಮಿತಾ ಅಯ್ಯಪ್ಪ, ಸಾಂಬಾರ ಪದಾರ್ಥಗಳ ಕುರಿತು ದೇವಯ್ಯ ಪಿ.ವಿ., ಸಂಪನ್ಮೂಲ ವ್ಯಕ್ತಿಗಳಾದ ಕೆ.ಜಿ.ನೀರಜಾ, ಕುಮುದ ಜಯಪ್ರಶಾಂತ್ ಅವರು ಮಾತನಾಡಿದರು.
ಕೃಷಿಕರಾದ ಕೋಡಿ ಪೊನ್ನಪ್ಪ, ನಾಪಂಡ ರ್ಯಾಲಿ ಮಾದಯ್ಯ, ಕೃಷಿ ಇಲಾಖೆ ಉಪ ನಿರ್ದೇಶಕರಾದ ಡಾ.ಡಿ.ಎಸ್.ಸೋಮಶೇಖರ್, ಸಹಾಯಕ ನಿರ್ದೇಶಕ ಡಿ.ಪರಮೇಶ್, ಉಪಯೋಜನಾ ನಿರ್ದೇಶಕಿ ಮೈತ್ರಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಿಕ್ಕಿರಿದು ಜನರು ಸೇರಿದ್ದರು
ಶೇ 50ರಷ್ಟು ಸಹಾಯಧನ: ಶಿವಪ್ರಕಾಶ್
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಪ್ರಕಾಶ್ ಮಾತನಾಡಿ ‘ಕೊಡಗು ಜಿಲ್ಲೆಯಲ್ಲಿ ಕಾಫಿ ಕಾಳುಮೆಣಸು ಏಲಕ್ಕಿ ಕೋಕೋ ಅಡಿಕೆ ಜೇನು ಭತ್ತ ಹೀಗೆ ಹಲವು ರೀತಿಯ ಕಿರು ಆಹಾರ ಸಂಸ್ಕರಣೆ ಉದ್ಯಮಕ್ಕೆ ಅವಕಾಶಗಳಿವೆ. ಸರ್ಕಾರದಿಂದ ಶೇ 50ರಷ್ಟು ಸಹಾಯಧನ ದೊರೆಯಲಿದ್ದು ಗರಿಷ್ಠ ₹15 ಲಕ್ಷದವರೆಗೆ ಸಹಾಯಧನ ದೊರೆಯಲಿದೆ. ಹೊಸ ಆಹಾರ ಸಂಸ್ಕರಣಾ ಉದ್ಯಮ ಪ್ರಾರಂಭಿಸಲು ಮತ್ತು ಚಾಲ್ತಿಯಲ್ಲಿರುವ ಉದ್ಯಮಗಳನ್ನು ವಿಸ್ತರಿಸಲು ಅವಕಾಶವಿದೆ’ ಎಂದು ತಿಳಿಸಿದರು. ಈ ಯೋಜನೆಯಡಿ ಹಿಟ್ಟಿನ ಗಿರಿಣಿ ಎಣ್ಣೆ ಗಾಣಗಳು ಬೇಕರಿ ಉತ್ಪನ್ನಗಳ ತಯಾರಿಕೆ ಬಾಳೆಕಾಯಿ ಉತ್ಪನ್ನ ಅರಿಸಿನ ಸಂಸ್ಕರಣ ತೆಂಗಿನ ಕಾಯಿ ಉತ್ಪನ್ನ ತಯಾರಿಕೆ ಹಪ್ಪಳ ಸಂಡಿಗೆ ಉಪ್ಪಿನಕಾಯಿ ತಯಾರಿಕೆ ಚಪಾತಿ ಕಾಫಿ ಪುಡಿ ಮಸಾಲ ಪದಾರ್ಥ ಚಾಕೋಲೇಟ್ ಜೇನು ಸಂಸ್ಕರಣಾ ಘಟಕ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಿಗೆ ಅವಕಾಶವಿದೆ. ಜಿಐ ಟ್ಯಾಗ್ ಹೊಂದಲೂ ಪ್ರಯತ್ನಿಸಬಹುದು ಎಂದರು.
₹15.20 ಕೋಟಿ ಸಾಲ ಮಂಜೂರು: ಬಿ.ಎಸ್.ಚಂದ್ರಶೇಖರ್
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಮಾತನಾಡಿ. ‘ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ಯಮದಡಿ ಜಿಲ್ಲೆಯಲ್ಲಿ 160 ಅರ್ಜಿಗಳು ಸಲ್ಲಿಕೆಯಾಗಿದ್ದು 7 ಅರ್ಜಿಗಳು ಮಾತ್ರ ತಿರಸ್ಕೃತಗೊಂಡಿವೆ. ಜಿಲ್ಲೆಯಲ್ಲಿ ಸುಮಾರು ₹ 18.13 ಕೋಟಿಯಷ್ಟು ಯೋಜನಾ ಗುರಿಯಲ್ಲಿ ₹ 15.20 ಕೋಟಿ ಸಾಲ ಸೌಲಭ್ಯಕ್ಕೆ ಮಂಜೂರಾತಿ ದೊರೆತಿದೆ. ಒಟ್ಟು 89 ಉದ್ದಿಮೆದಾರರು ಸಾಲ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಆಯವ್ಯಯ ಭಾಷಣದಲ್ಲಿ 5 ಸಾವಿರ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸುವ ಘೋಷಣೆ ಮಾಡಿ ಈ ಉದ್ದೇಶಕ್ಕಾಗಿ ₹ 206 ಕೋಟಿ ಅನುದಾನವನ್ನು ಒದಗಿಸಿದ್ದಾರೆ. ಅದರಂತೆ ಕೊಡಗು ಜಿಲ್ಲೆಗೆ 75 ಉದ್ದಿಮೆಗಳ ಸ್ಥಾಪನೆಯ ಗುರಿ ನಿಗದಿಪಡಿಸಲಾಗಿದೆ. ಪ್ರಸಕ್ತ ಹಣಕಾಸಿನ ವರ್ಷವು ಯೋಜನೆಯ ಅನುಷ್ಠಾನದ ಕೊನೆಯ ವರ್ಷವಾಗಿದ್ದು ಈ ಯೋಜನೆಯ ಪ್ರಯೋಜನವನ್ನು ಜಿಲ್ಲೆಯಲ್ಲಿ ಹೆಚ್ಚಿನ ಫಲಾನುಭವಿಗಳು ಪಡೆದುಕೊಳ್ಳಬೇಕು’ ಎಂದರು.
ಕಿರು ಆಹಾರ ಸಂಸ್ಕರಣಾ ಉದ್ಯಮ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಹಲವು ರೀತಿಯಲ್ಲಿ ಈ ಯೋಜನೆಯಡಿ ಸಹಾಯಧನ ಪಡೆಯಬಹುದು.ಗಂಗಾಧಕರ ನಾಯಕ, ಲೀಡ್ ಬ್ಯಾಂಕ್ ವ್ಯವಸ್ಥಾಪಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.