
ಸೋಮವಾರಪೇಟೆ: ತಾಲ್ಲೂಕಿನ ನವದುರ್ಗಾ ಪರಮೇಶ್ವರಿ ದೇವಾಲಯ ಸಮಿತಿಯಿಂದ ಜಾತ್ರೋತ್ಸವ ಅಂಗವಾಗಿ ಆಯೋಜಿಸಲಾದ ಮುಕ್ತ ಫುಟ್ಬಾಲ್ ಟೂರ್ನಿಯಲ್ಲಿ ಬೀಟಿಕಟ್ಟೆ ನೀಲ್ ಶಾಂತ್ ಬಾಯ್ಸ್ ಹಾಗೂ ಮಹಿಳೆಯರ ಥ್ರೋಬಾಲ್ ಟೂರ್ನಿಯಲ್ಲಿ ಅಗ್ನಿ ನೇತ್ರ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಮುಕ್ತ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯ ರೋಚಕವಾಗಿ ನಡೆಯಿತು. ಬೀಟಿಕಟ್ಟೆ ನೀಲ್ ಶಾಂತ್ ಬಾಯ್ಸ್ ತಂಡ 2-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿ ಪ್ರಶಸ್ತಿ, ₹1,11,111 ನಗದನ್ನು ತನ್ನದಾಗಿಸಿಕೊಂಡಿತು. ಆರಂಭದಿಂದಲೇ ದಿಟ್ಟ ಆಟ ಪ್ರದರ್ಶಿಸಿದ ವಿಜೇತ ತಂಡ ಎದುರಾಳಿ ತಂಡಕ್ಕೆ ಅವಕಾಶ ನೀಡದೆ ಉತ್ತಮ ಸಂಯೋಜಿತ ಆಟವಾಡಿ ಜಯಭೇರಿ ಬಾರಿಸಿತು. ಗೌಡಳ್ಳಿ ಫುಟ್ಬಾಲ್ ಕ್ಲಬ್ ತಂಡ ದ್ವಿತೀಯ ಸ್ಥಾನದೊಂದಿಗೆ ಪ್ರಶಸ್ತಿ ಹಾಗೂ ₹55,555 ಪಡೆಯಿತು.
ಮಹಿಳೆಯರ ಥ್ರೋಬಾಲ್ ಟೂರ್ನಿಯಲ್ಲಿ ಅಗ್ನಿ ನೇತ್ರ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನಗಳಿಸಿ ಪ್ರಶಸ್ತಿಯೊಂದಿಗೆ ₹22,222 ನಗದು ಮತ್ತು ದುರ್ಗಾಂಬಾ ಫ್ರೆಂಡ್ಸ್ ತಂಡ ದ್ವಿತೀಯ ಸ್ಥಾನದೊಂದಿಗೆ ಪ್ರಶಸ್ತಿ ಮತ್ತು ₹11,111 ನಗದು ಪಡೆಯಿತು.
ಈಚೆಗೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕೊಡಗು ಜಿಲ್ಲೆಯ ಯುವಕರ ರಕ್ತದಲ್ಲೇ ಕ್ರೀಡೆ ಬೆರೆತಿದೆ. ಕ್ರೀಡೆ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಬೆಳೆಸುವುದಲ್ಲದೆ, ಶಿಸ್ತು ಮತ್ತು ಸಹಕಾರ ಮನೋಭಾವ ವೃದ್ಧಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತ ಸಂಘದ ಉಪಾಧ್ಯಕ್ಷ ಜಿ.ಎಂ.ಹೂವಯ್ಯ, ಕ್ರೀಡಾಪಟು ಬಿ.ಎಸ್.ಅನೀಸ್, ದೇವಾಲಯ ಸಮಿತಿ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲ ಕೃಷ್ಣ, ದೇವಾಲಯ ಸಮಿತಿ ಅಧ್ಯಕ್ಷ ಬಿ.ಪಿ.ಮೊಗಪ್ಪ, ಕ್ರೀಡಾ ಸಮಿತಿ ಅಧ್ಯಕ್ಷ ಎಸ್.ಬಿ.ಗುರುಪ್ರಸಾದ್, ಪ್ರಮುಖರಾದ ಎಸ್.ಬಿ.ಭರತ್ ಕುಮಾರ್, ಎಚ್.ಆರ್.ಸುರೇಶ್, ಪಿ.ಕೆ.ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.