ADVERTISEMENT

ಸರ್ಕಾರ ರೈತರ ಪರ: ಪ್ರತಾಪ್ ಸಿಂಹ

ಸುಂಟಿಕೊಪ್ಪದಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 16:52 IST
Last Updated 2 ಮಾರ್ಚ್ 2021, 16:52 IST
ಸುಂಟಿಕೊಪ್ಪ ನಾಡಕಚೇರಿಯ ಹಿಂಭಾಗದಲ್ಲಿರುವ ಹೋಬಳಿ ಕೃಷಿ ಸಂಪರ್ಕ ಕೇಂದ್ರದ ಉದ್ಘಾಟನೆಯನ್ನು ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮುದಾ ಧರ್ಮಪ್ಪ ನೆರವೇರಿಸಿದರು
ಸುಂಟಿಕೊಪ್ಪ ನಾಡಕಚೇರಿಯ ಹಿಂಭಾಗದಲ್ಲಿರುವ ಹೋಬಳಿ ಕೃಷಿ ಸಂಪರ್ಕ ಕೇಂದ್ರದ ಉದ್ಘಾಟನೆಯನ್ನು ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮುದಾ ಧರ್ಮಪ್ಪ ನೆರವೇರಿಸಿದರು   

ಸುಂಟಿಕೊಪ್ಪ: ‘ಕೇಂದ್ರ ಸರ್ಕಾರವು ಜನರ ಮತ್ತು ರೈತರ ಪರವಾಗಿದ್ದು, ರೈತರಿಗೆ ವಾರ್ಷಿಕವಾಗಿ ₹6 ಸಾವಿರ ನೀಡುವ ಮೂಲಕ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ. ಅಲ್ಲದೇ ರಾಜ್ಯದಲ್ಲಿ ಹೆಚ್ಚಿನ ಅನುದಾನ ಕೇಂದ್ರ ಸರ್ಕಾರದಿಂದಲೇ ಬಂದಿದೆ’ ಎಂದು ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.

ಇಲ್ಲಿನ ನಾಡಕಚೇರಿಯ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೈತ ಸಂಪರ್ಕ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

‘ಈಗಾಗಲೇ ಕೇಂದ್ರ ಸರ್ಕಾರದಿಂದ ಪ್ರತಿ ಮನೆಮನೆಗೂ 3 ನೀರಿನ ನಲ್ಲಿಗಳನ್ನು ಅಳವಡಿಸಲು ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅಲ್ಲದೇ 9 ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್ ಅನ್ನು ವಿತರಿಸಲಾಗಿದೆ.ಎಲ್‌ಇಡಿ ಬಲ್ಬ್‌ಗಳ ವಿತರಣೆ ಮಾಡಲಾಗಿದೆಯಲ್ಲದೇ, 14 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪ್ರತಿವರ್ಷ ₹6 ಸಾವಿರ ನೀಡುವಲ್ಲಿ ಯಶಸ್ವಿಯಾಗಿದೆ’ ಎಂದರು.

ADVERTISEMENT

ರಾಜ್ಯ ಸರ್ಕಾರವು ’ಒಂದು ಜಿಲ್ಲೆ ಒಂದು ಉತ್ಪಾದನೆ’ ಎಂಬ ಯೋಜನೆಯಡಿಯಲ್ಲಿ ಕೊಡಗಿಗೆ ಕಾಫಿ ಉತ್ಪಾಧನೆಯ ಅವಕಾಶವನ್ನು ನೀಡಿದ್ದು, ಇಲ್ಲಿಯ ರೈತರಿಗೆ ಉತ್ಪಾದನಾ ಶೀಲತೆ ಇಲ್ಲದಿರುವುದರಿಂದ ಹೊರರಾಜ್ಯ ಮತ್ತು ಹೊರಜಿಲ್ಲೆಯವರು ಇಲ್ಲಿಯ ಕಾಫಿಯನ್ನು ಖರೀದಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಕೊಡಗಿನ ಜನರಿಗೆ ತೊಂದರೆಯಾಗದಂತೆ ಕಾಫಿಯಲ್ಲಿ ಯಾವುದೇ ರೀತಿಯ ಉತ್ಪಾದನೆ ಮಾಡಿದಲ್ಲಿ ಸರ್ಕಾರದಿಂದ ಶೇ.35ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಪ್ರತಾಪ್ ಸಿಂಹ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಅವರು, ‘ಈ ರೈತ ಸಂಪರ್ಕ ಕೇಂದ್ರವು ₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಕೊಡಗಿನಲ್ಲಿ 7 ರೈತ ಸಂಪರ್ಕ ಕೇಂದ್ರಗಳು ಪ್ರಾರಂಭಗೊಂಡಿದ್ದು, ರೈತರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ. ರೈತರು ಯಂತ್ರೋಪಕರಣಗಳನ್ನು ಖರೀದಿ ಮಾಡುವಾಗ ಬಹಳಷ್ಟು ಸಬ್ಸಿಡಿಗಳು ಸಹ ದೊರಕುತ್ತಿದೆ. ಅಲ್ಲದೇ, ಕೃಷಿ ರೈತರಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು‘ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಕೆ.ಪಿ.ಚಂದ್ರಕಲಾ, ಕುಮುದಾ ಧರ್ಮಪ್ಪ, ಪಿ.ಎಂ.ಲತೀಫ್,ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಓಡಿಯಪ್ಪನ ವಿಮಲಾವತಿ, ಬಲ್ಲಾರಂಡ ಮಣಿ ಉತ್ತಪ್ಪ, ಹೆ.ಚ್.ಡಿ.ಮಣಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಶಬಾನ ಎಂ.ಶೇಕ್ ಸೇರಿದಂತೆ ಇತರರು ಇದ್ದರು.

ಕೃಷಿ ಅಧಿಕಾರಿ ಮನಸ್ವಿ ನಿರೂಪಿಸಿ, ವಂದಿಸಿದರೆ, ಸಹಾಯಕ ಕೃಷಿ ಅಧಿಕಾರಿ ಬೋಪಯ್ಯ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.