ADVERTISEMENT

ಹಾರಂಗಿ ಜಲಾಶಯ ಭರ್ತಿಗೆ ಕೇವಲ 8 ಅಡಿ ಬಾಕಿ: ಪ್ರವಾಹದ ಮುನ್ನೆಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 6:20 IST
Last Updated 3 ಜೂನ್ 2025, 6:20 IST
   

ಮಡಿಕೇರಿ: ಹಾರಂಗಿ ಜಲಾಶಯ ಭರ್ತಿಗೆ ಇನ್ನು ಕೇವಲ 8 ಅಡಿಗಳಷ್ಟೇ ಬಾಕಿ ಉಳಿದಿದೆ. ಈ ನಡುವೆ ಮಡಿಕೇರಿ ಸೇರಿದಂತೆ ಕೊಡಗು ಜಿಲ್ಲೆಯ ಇತರೆಡೆ ಮಳೆ ಮುಂದುವರಿದಿದೆ. ಹೀಗಾಗಿ, ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುವುದು ಎಂದು ಕಾವೇರಿ ನೀರಾವರಿ ನಿಗಮ ಮಂಗಳವಾರ ಪ್ರವಾಹದ ಮುನ್ನೆಚ್ಚರಿಕೆ ನೀಡಿದೆ.

ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ತಿಳಿಸಿದೆ. ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಶೀಘ್ರದಲ್ಲೇ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟವನ್ನು ತಲುಪುವುದರಿಂದ ಯಾವುದೇ ಕ್ಷಣದಲ್ಲಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸಲಾಗುವುದು. ಹಾಗಾಗಿ, ನದಿ ದಂಡೆಯಲ್ಲಿ ವಾಸಿಸುತ್ತಿರುವವರು ಮುಂಜಾಗ್ರತೆ ವಹಿಸಬೇಕು ಎಂದು ನಿಗಮದ ಪ್ರಕಟಣೆ ತಿಳಿಸಿದೆ.

ಹಾರಂಗಿ ಜಲಾಶಯದ ಮಟ್ಟ ಮಂಗಳವಾರ 2851.13 ಅಡಿಗೆ ಏರಿಕೆಯಾಗಿದ್ದು, ಭರ್ತಿಯಾಗಲು 8 ಅಡಿಗಳಷ್ಟೇ ಉಳಿದಿದೆ. (ಗರಿಷ್ಠ ಮಟ್ಟ 2,859 ಅಡಿ) ಸದ್ಯ, 1,541 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ.

ADVERTISEMENT

ಮಡಿಕೇರಿ ನಗರದಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.