ADVERTISEMENT

ಕೊಡಗು | ಕೆಲವೆಡೆಯಷ್ಟೇ ಹೂ ಮಳೆಯ ಸಂತಸ: ಹಲವೆಡೆ ಕಾಡಿದೆ ನಿರಾಶೆ

ಸಿ.ಎಸ್.ಸುರೇಶ್
Published 21 ಮಾರ್ಚ್ 2025, 5:13 IST
Last Updated 21 ಮಾರ್ಚ್ 2025, 5:13 IST
ನಾಪೋಕ್ಲು ಸಮೀಪದ ಚೋನಕೆರೆ ಗ್ರಾಮದಲ್ಲಿ ಮಳೆಯಿಂದಾಗಿ ಹೂಗಳು ಅರಳಿ ಕಂಗೊಳಿಸುತ್ತಿರುವ ಕಾಫಿತೋಟ.
ನಾಪೋಕ್ಲು ಸಮೀಪದ ಚೋನಕೆರೆ ಗ್ರಾಮದಲ್ಲಿ ಮಳೆಯಿಂದಾಗಿ ಹೂಗಳು ಅರಳಿ ಕಂಗೊಳಿಸುತ್ತಿರುವ ಕಾಫಿತೋಟ.   

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೂಮಳೆ ಕಾಣದಾಗುತ್ತಿದೆ. ಹಿಂದೆ, ಬೇಸಿಗೆಯ ಹೊಸ್ತಿಲಲ್ಲೇ ಭರ್ಜರಿ ಮಳೆಯಾಗಿ ಕಾಫಿ ಹೂಗಳೆಲ್ಲ ಅರಳಿ, ಕೊಡಗಿನ ಸೌಂದರ್ಯವನ್ನೇ ಇಮ್ಮಡಿಸುತ್ತಿತ್ತು. ಬೆಳೆಗಾರರಿಗೂ ಸಮಾಧಾನ ತರಿಸುತ್ತಿತ್ತು. ಇತ್ತೀಚಿಗೆ ಬೇಸಿಗೆ ಆರಂಭದ ದಿನಗಳು ಹೆಚ್ಚಾಗಿ ಚಳಿಗಾಲವನ್ನೇ ನುಂಗಿ ಹಾಕುತ್ತಿವೆ. ಬೆಳೆಗಾರರು ಆತಂಕದ ದಿನಗಳಲ್ಲೇ ಇರುವಂತಾಗಿದೆ.

ಕಳೆದ ವರ್ಷವೂ ಬೇಸಿಗೆಯಲ್ಲಿ ಸಕಾಲಕ್ಕೆ ಮಳೆಯಾಗಿರಲಿಲ್ಲ. ಹೂಮಳೆ ಬರುವ ಹೊತ್ತಿಗೆ ದಿನಗಳು ಉರುಳಿದ್ದವು. ಈ ವರ್ಷವೂ ಮಾರ್ಚ್ ಕೊನೆಗೊಳ್ಳುತ್ತಿದ್ದರೂ ಬಹುಭಾಗಕ್ಕೆ ಮಳೆಯಾಗಿಲ್ಲ.

ಇತ್ತೀಚೆಗೆ ನಾಪೋಕ್ಲು ಹೋಬಳಿಯ ಕೆಲವೆಡೆ ಮಳೆಯಾಗಿದ್ದು, ನಾಪೋಕ್ಲು-ಭಾಗಮಂಡಲ ರಸ್ತೆಯಲ್ಲಿ ಕಾಫಿ ಹೂಗಳ ಘಮ ಹರಡಿದೆ. ಎಲ್ಲೆಡೆ ಶ್ವೇತ ವೈಭವದಿಂದ ಕಂಗೊಳಿಸುತ್ತಿರುವ ಹೂಗಳು ಬೆಳೆಗಾರರಲ್ಲಿ ಮಂದಹಾಸ ಮೂಡಿಸಿದೆ. ತೋಟಗಳಲ್ಲಿ ಶ್ವೇತ ಹೂಗಳ ರಾಶಿ ಮಲ್ಲಿಗೆ ರಾಶಿಯಂತೆ ಹರಡಿದೆ. ಸತತವಾಗಿ ಸುರಿದ ಆಲಿಕಲ್ಲು ಮಳೆಯಿಂದ ವಾತಾವರಣ ತಂಪಾಗಿದೆ.

ADVERTISEMENT

ಬಲ್ಲತ್ತನಾಡು, ನಾಲ್ಕುನಾಡು ವ್ಯಾಪ್ತಿಯ ಹಲವು ಗ್ರಾಮಗಳ ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ. ಇಳುವರಿ ಮೇಲೆ ತೀವ್ರ ಪರಿಣಾಮ ಬೀರುವ ಮಳೆಯಿಂದಾಗಿ ಕಕ್ಕಬ್ಬೆ, ಕುಂಜಿಲ, ಚೋನಕೆರೆ, ನೆಲಜಿ, ಬಲ್ಲಮಾವಟಿ, ಪೇರೂರು ಸೇರಿದಂತೆ ಹಲವು ಗ್ರಾಮಗಳ ಬೆಳೆಗಾರರ ಶ್ರಮ, ಹಣ ಉಳಿತಾಯವಾಗಿದೆ.

ತುಂತುರು ನೀರಾವರಿ ಸ್ಥಗಿತಗೊಂಡಿದ್ದು, ‌ಡೀಸೆಲ್ ಪಂಪ್‌ಗಳ ಸದ್ದಡಗಿದೆ. ಇದೆಲ್ಲಾ ಕೆಲವೆಡೆ ಮಾತ್ರ. ಮಳೆ ಇಲ್ಲದೇ ಹಲವೆಡೆ ಬೆಳೆಗಾರರಿಗೆ ನಿರಾಶೆ ಕಾಡಿದೆ. ಮೊಗ್ಗುಗಳು ಮಳೆಗಾಗಿ ಕಾತರಿಸುತ್ತಿವೆ. ಗಿಡಗಳು ಸೊರಗಿ ಮೊಗ್ಗುಗಳು ಕರಟಿವೆ. ‘ಇಳುವರಿ ಹೋಗಲಿ, ಕಾಫಿಯ ಗಿಡಗಳು ಉಳಿದರೆ ಸಾಕು’ ಎಂದು ಬೆಳೆಗಾರರು ಚಿಂತಿತರಾಗಿದ್ದಾರೆ. ಕೃತಕವಾಗಿ ಹಾಯಿಸಲು ನೀರಿಲ್ಲದೆ ಮಳೆಯನ್ನೇ ಅವಲಂಬಿಸಬೇಕಾಗಿದೆ.

‘ಮಾರ್ಚ್‌ನಲ್ಲಿ ಮೊದಲ ಮಳೆಯಾಗುವುದು ವಾಡಿಕೆ. ಕಾಫಿ ಹೂವು ಅರಳಿಸಲು ಇದು ಸಹಕಾರಿ. ಇತ್ತೀಚೆಗೆ ಹೂಮಳೆ ಸರಿಯಾಗಿ ಆಗುತ್ತಿಲ್ಲ. ತಾಪಮಾನವು ಏರಿದ್ದು, ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಬೆಳೆಗಾರರು.

ಕಳೆದ ವರ್ಷದ ಹೆಚ್ಚಿನ ತಾಪಮಾನದಿಂದಾಗಿ ಈ ವರ್ಷ ಇಳುವರಿ ಕಡಿಮೆಯಾಗಿದೆ. ಮುಂದಿನ ವರ್ಷ ಉತ್ತಮ ಬೆಳೆ ತೆಗೆಯುವ ನಿರೀಕ್ಷೆ ಬೆಳೆಗಾರರದ್ದು. ಅದಕ್ಕೆ ಈಗ ಅರಳುವ ಹೂಗಳೇ ದಿಕ್ಸೂಚಿ.

ಮಳೆ ತಡವಾದಷ್ಟೂ ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಮೂರ್ನಾಡು ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಮಳೆಯಾಗಿಲ್ಲ. ಬಲಮುರಿ, ಹಾಕತ್ತೂರು, ಮುತ್ತಾರುಮುಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆಗಾರರು ನೀರಿನ ಮೂಲಗಳಿಂದ ಕೃತಕವಾಗಿ ನೀರು ಹಾಯಿಸುವ ಕಾರ್ಯದಲ್ಲಿ ಮಗ್ನರಾಗಿರುವುದು ಕಂಡು ಬರುತ್ತಿದೆ.

ಮಡಿಕೇರಿ ತಾಲೂಕಿನ ಹಾಕತ್ತೂರು ಗ್ರಾಮದಲ್ಲಿ ಕಾಫಿ ತೋಟಗಳಿಗೆ ಕೃತಕವಾಗಿ ನೀರು ಹಾಯಿಸುತ್ತಿರುವ ದೃಶ್ಯ ಗುರುವಾರ ಕಂಡುಬಂತು.
ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಬಿಸಿಲಿನ ತಾಪಕ್ಕೆ ಸೊರಗಿದ ಕಾಫಿ ಗಿಡಗಳು.
ನಾಪೋಕ್ಲುವಿನಲ್ಲಿ ಮಳೆಗಾಗಿ ಹಂಬಲಿಸಿರುವ ಕಾಫಿ ತೋಟ

ದಟ್ಟವಾದ ಮೋಡಗಳು ಬಂದರೂ ಮಳೆ ಇಲ್ಲ

‘ಮುಂದಿನ ವರ್ಷದ ಇಳುವರಿಗಾಗಿ ಮೊಗ್ಗುಗಳು ಸಿದ್ಧವಾಗಿವೆ. ಮಳೆಗಾಗಿ ಕಾತರಿಸುತ್ತಿದ್ದೇವೆ.  ನೀರಿನ ಮೂರ ಉಳ್ಳವರು ಕೆರೆಯಿಂದ ತೋಡುಗಳಿಂದ ಹೊಳೆಗಳಿಂದ ನೀರು ಹಾಯಿಸಿ ಹೂ ಅಳಿಸುವ ಪ್ರಯತ್ನ ಪಡುತ್ತಿದ್ದಾರೆ. ಉರಿಬಿಸಿಲಿನ ತಾಪದ ಪ್ರಮಾಣ ಏರುತ್ತಿದ್ದು ನೀರಿನ ಮೂಲಗಳು ಬತ್ತಿ ಹೋಗುತ್ತಿವೆ. ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಮಳೆಗಾಗಿ ಕಾಯುತ್ತಿದ್ದಾರೆ. ಅಲ್ಲಲ್ಲಿ ದಟ್ಟನೆಯ ಮೋಡಗಳು ಆವರಿಸುವ ದೃಶ್ಯಗಳು ಕಂಡುಬಂದರೂ ಮಳೆಯಾಗಿಲ್ಲ’ ಎಂದು ಕಗ್ಗೋಡ್ಲು ಗ್ರಾಮದ ಬೆಳೆಗಾರ ಜಗತ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.