ಸೋಮವಾರಪೇಟೆ: ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಭಾರಿ ಮಳೆಯಾಯಿತು.
ಬೆಳಿಗ್ಗೆಯಿಂದಲೂ ಬಿಸಿಲಿನ ವಾತಾವರಣ ಇದ್ದು, ಮಧ್ಯಾಹ್ನದ ನಂತರ ಏಕಾಏಕಿ ಪ್ರಾರಂಭವಾದ ಒಂದು ಗಂಟೆಗೂ ಹೆಚ್ಚಿನ ಸಮಯ ಸುರಿಯಿತು. ರಸ್ತೆಯ ಮೇಲೆ ನೀರಿನ ಹರಿವು ಹೆಚ್ಚಾಗಿದ್ದರೆ, ಪಟ್ಟಣದ ಕೆಲವು ಚರಂಡಿಗಳು ತುಂಬಿ ಹರಿಯುತ್ತಿದ್ದದ್ದು ಕಂಡುಬಂದಿತು. ಭಾರಿ ಮಳೆಗೆ ಜನರು ಪರದಾಡಿದರು.
ಇಂದಿಗೂ ಪಟ್ಟಣದಲ್ಲಿ ಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿಕೊಳ್ಳದ ಕಾರಣ ಸಮಸ್ಯೆಯಾಗಿದೆ. ಇಲ್ಲಿನ ತಾಲ್ಲೂಕು ಕಚೇರಿ ಎದುರು ಮಳೆ ನೀರು ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದಿರುವುದರಿಂದ ಭಾರಿ ಮಳೆಗೆ ತಾಲ್ಲೂಕು ಕಚೇರಿ ಎದುರು ಕೆರೆಯಾಂತಾಗಿತ್ತು.
ಆಲೆಕಟ್ಟೆ ರಸ್ತೆಯ ಚಂಗಪ್ಪ ಎಂಬುವವರ ಮನೆಯಲ್ಲಿ ಬಾಡಿಗೆ ಇರುವ ನಿಂಗರಾಜು ಎಂಬುವವರ ಮನೆಗೆ ಮಳೆಯ ನೀರು ನುಗ್ಗಿ ಹಾನಿಯಾಗಿದೆ. ಇಲ್ಲಿನ ಚರಂಡಿ ವ್ಯವಸ್ಥೆ ಸರಿ ಇಲ್ಲದ ಕಾರಣ ಭಾರಿ ಮಳೆಯಿಂದ ಪಟ್ಟಣದಿಂದ ಈ ಭಾಗದಲ್ಲಿ ಹರಿಯುವ ನೀರು ಮನೆಗೆ ನುಗ್ಗಿರುವುದಾಗಿ ದೂರಿದ್ದಾರೆ. ಮಳೆಯ ನೀರಿನಿಂದ ಮನೆಯೊಳಗೆ ಇರಿಸಿದ್ದ ದಿನಸಿ ಸಾಮಾಗ್ರಿಗಳು ಸೇರಿದಂತೆ ನಷ್ಟವಾಗಿದೆ ಎಂದು ಮನೆಯ ನಿವಾಸಿ ನಿಂಗರಾಜು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.