
ಗೋಣಿಕೊಪ್ಪಲು: ‘ಸರ್ವರಿಗೂ ಒಳಿತನ್ನು ಬಯಸುವ ಹಿಂದೂ ಧರ್ಮ ಶ್ರೇಷ್ಠವಾದುದು. ಪ್ರತಿಯೊಬ್ಬರು ಈ ಧರ್ಮದ ತತ್ವವನ್ನು ಪಾಲನೆ ಮಾಡಬೇಕು’ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರಾದಾಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮೀಜಿ ಹೇಳಿದರು.
ಪೊನ್ನಂಪೇಟೆಯಲ್ಲಿ ನಡೆದ ಹಿಂದೂಸಮಾಜೋತ್ಸವದಲ್ಲಿ ಮಾತನಾಡಿದ ಅವರು, ‘ಸ್ವಾಮಿ ವಿವೇಕಾನಂದರ ಮೂಲಕ ಜಗತ್ತಿನ ಗಮನ ಸೆಳೆದ ಹಿಂದೂ ಧರ್ಮ ಎಲ್ಲರನ್ನೂ ಗೌರವಿಸುವ ಮತ್ತು ಪ್ರೀತಿಸುವ ಗುಣ ಹೊಂದಿದೆ. ಇದನ್ನು ಮತ್ತಷ್ಟು ಉತ್ತಮವಾಗಿ ಬೆಳೆಸುವ ಕೆಲಸವಾಗಬೇಕು’ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಪ್ರಮುಖ್ ಸೂರಜ್ ಮಾತನಾಡಿ, ‘ರಾಮಾಯಣ ಮತ್ತು ಮಹಾಭಾರತ ಕಾಲದಿಂದಲೂ ಪ್ರಚುರದಲ್ಲಿದ್ದ ಹಂದು ಧರ್ಮ ಇಂದು ಹೆಚ್ಚು ಪ್ರವರ್ಧನಮಾನಕ್ಕೆ ಬಂದಿದೆ. ಇದಕ್ಕೆ ಕಾರಣ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ವಿವೇಕಾನಂದರು ಕಟ್ಟಿದ ಭದ್ರ ಅಡಿಪಾಯದ ಮೇಲೆ ಹಿಂದು ಧರ್ಮವನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
ಶಿಕ್ಷಕಿ ಅಂಬಿ ಕಾರ್ಯಪ್ಪ ಮಾತನಾಡಿ, ‘ಸನಾತನ ಧರ್ಮವಾದ ಹಿಂದು ಧರ್ಮ ಮಹಿಳೆಯನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆ. ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿಯೂ ಸಮಾನವಾದ ಅವಕಾಶ ನೀಡಿ ಅವರನ್ನು ಮೇಲೆ ತರಲು ಯತ್ನಿಸುತ್ತಿದೆ’ ಎಂದು ಹೇಳಿದರು.
ಕಲಶ ಹೊತ್ತ ಮಹಿಳೆಯರು, ರಾಮ, ಸೀತೆ. ಲಕ್ಷ್ಮಣ, ಕೃಷ್ಣ, ವಿವೇಕಾನಂದ, ಕಿತ್ತೂರು ರಾಣಿ ಚನ್ನಮ್ಮ, ಸುಭಾಶ್ ಚಂದ್ರಭೋಸ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ವೇಷತೊಟ್ಟ ವೇಷಧಾರಿಗಳು ಮೆರವಣಿಗೆಯಲ್ಲಿ ಗಮನ ಸೆಳೆದರು.
ವೀರಗಾಸೆ, ಕೊಡವ ವಾಲಗ, ಸುವೃತ ನಾಟ್ಯಾಲಯ ವಿದ್ಯಾರ್ಥಿಗಳಿಂದ ಭಜನಾ ಕುಣಿತ ಶೋಭಾಯಾತ್ರೆಗೆ ಶೋಭೆ ತಂದಿತು.
ಪೊನ್ನಂಪೇಟೆ ಬಸವೇಶ್ವ ದೇವಸ್ಥಾನದ ಅಧ್ಯಕ್ಷ ರುದ್ರಪ್ಪ, ಹಿಂದು ಸಮಾಜ ಸಂಗಮ ಸಮಿತಿ ಅಧ್ಯಕ್ಷ ರಾಜಾ ನಂಜಪ್ಪ, ಪೊನ್ನಂಪೇಟೆ ಪಟ್ಟಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿರಿಯಪಂಡ ಉತ್ತಪ್ಪ, ಸಾಯಿಶಂಕರ ವಿದ್ಯಾಸಂಸ್ಥೆ ಅಧ್ಯಕ್ಷ ಝರು ಗಣಪತಿ, ರೇಖಾ ಶ್ರೀಧರ್, ಶೀಲಾ ಬೋಪಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.