ಮಡಿಕೇರಿ: ಕಳೆದ ಕೆಲ ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಜಿಲ್ಲೆಯಲ್ಲಿ ಚುರುಕುಗೊಳ್ಳಲಾರಂಭಿಸಿದೆ. ಇಡೀ ಜಿಲ್ಲೆಯನ್ನು ಆವರಿಸಿದಂತೆ ಬೀಳುತ್ತಿದ್ದ ಮಳೆ ಈಗ ಚದುರಿದಂತೆ ಬಿರುಸಾಗಿಯೇ ಸುರಿಯಲು ಆರಂಭಿಸಿದೆ.
ಭಾನುವಾರ ಒಂದೇ ದಿನ ಭಾಗಮಂಡಲ ವ್ಯಾಪ್ತಿಯಲ್ಲಿ 8 ಸೆಂ.ಮೀನಷ್ಟು ಹಾಗೂ ಚೆಂಬು ಗ್ರಾಮದಲ್ಲಿ 7 ಸೆಂ.ಮೀ ಮಳೆ ಸುರಿದಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ. ಮುಂದಿನ ಕೆಲ ದಿನಗಳ ಕಾಲ ಜಿಲ್ಲೆಯ ಕೆಲವೆಡೆ ಭಾರಿ ಮಳೆ ಸುರಿಯುವ ಮುನ್ಸೂಚನೆ ಇರುವುದರಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್)ವನ್ನು ಮಡಿಕೇರಿಯಲ್ಲಿ ಸನ್ನದ್ಧವಾಗಿದೆ.
ಭಾಗಮಂಡಲದ ವ್ಯಾಪ್ತಿಯಲ್ಲಿ ಸುರಿದ ಮಳೆಗೆ ಭಾಗಮಂಡಲ– ಕರಿಕೆ ರಸ್ತೆಯಲ್ಲಿ 11 ಕಡೆ ಮಣ್ಣು ಕುಸಿದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಜಿಲ್ಲಾ ವಿಪತ್ತು ನಿರ್ವಹಣಾ ತಂಡ ಹಾಗೂ ಅರಣ್ಯ ಇಲಾಖೆಯ ತಂಡವು ದಿನವಿಡೀ ಇಲ್ಲಿ ಮಣ್ಣು ತೆರವು ಕಾರ್ಯದಲ್ಲಿ ತೊಡಗಿತ್ತು.
ಜಿಲ್ಲೆಯಲ್ಲಿ ಹಲವು ಮರಗಳ ಧರೆಗುರುಳಿದವು. ಇದರಿಂದ 25 ವಿದ್ಯುತ್ ಕಂಬಗಳು ಮುರಿದು ಬಿದ್ದು ಅಲ್ಲಲ್ಲಿ ವಿದ್ಯುತ್ ವ್ಯತ್ಯಯಗೊಂಡಿತು.
ಅರೆಕಲ್ಲು ಗುಡ್ಡದ ಮೇಲೆ ಒಮ್ಮಿಂದೊಮ್ಮೆಗೆ ಭಾರಿ ಮಳೆ ಸುರಿದಿದ್ದರಿಂದ ಸಂಪಾಜೆ ಗ್ರಾಮದ ಡೆಮ್ಮಲೆ ಜನಾರ್ದನ್ ಅವರ ಮನೆಗೆ ಹೊಳೆ ನೀರು ಗೃಹೋಪಯೋಗಿ ವಸ್ತುಗಳು ಹಾನಿಯಾದವು. ಮನೆಯಲ್ಲಿದ್ದ ಇಬ್ಬರನ್ನು ಸುರಕ್ಷಿತ ಸ್ಥಳದಲ್ಲಿರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.