
ಮಡಿಕೇರಿ: ಇಲ್ಲಿನ ಗಾಂಧಿ ಭವನದಲ್ಲಿ ಮಂಗಳವಾರ ಆರಂಭವಾದ 2 ದಿನಗಳ ಕಾಲದ ಜಿಲ್ಲಾಮಟ್ಟದ ‘ಕಲಾ ಪ್ರತಿಭೋತ್ಸವ’ದಲ್ಲಿ ಬರೋಬರಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿಯಾಗಿ, ಸಂಭ್ರಮಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೊದಲ ದಿನ ಬಾಲಪ್ರತಿಭೆ ಮತ್ತು ಕಿಶೋರ ಪ್ರತಿಭೆ ವಿಭಾಗದ ಸ್ಪರ್ಧೆಗಳು ನಡೆದವು. ಅವುಗಳಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲೇ ಅತ್ಯಂತ ಹೆಚ್ಚು ಸುಮಾರು 200 ಮಕ್ಕಳು ಭಾಗವಹಿಸಿದ್ದು ವಿಶೇಷ ಎನಿಸಿತ್ತು.
ಇದರೊಂದಿಗೆ ಭರತನಾಟ್ಯ ವಿಭಾಗದಲ್ಲೂ 75ಕ್ಕೂ ಅಧಿಕ ಮಕ್ಕಳು ಭಾಗವಹಿಸಿದ್ದರು. ಶಾಸ್ತ್ರೀಯ ನೃತ್ಯ, ಜನಪದ ಗೀತೆ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ವಿಭಾಗಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ‘ಕಲಾ ಪ್ರತಿಭೋತ್ಸವ ನಡೆಯುತ್ತಿರುವುದು ಕೇವಲ ಮನರಂಜನೆಗಾಗಿ ಮಾತ್ರ ಅಲ್ಲ. ಬದಲಿಗೆ, ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರ ಕಲಾ ನೈಪುಣ್ಯ ವೃದ್ಧಿಗೊಳಿಸಲು ಈ ಕಲಾ ಪ್ರತಿಭೋತ್ಸವ ನಡೆಸಲಾಗುತ್ತಿದೆ’ ಎಂದರು.
ಕಲೆಯಲ್ಲಿ ಮಕ್ಕಳು ತೊಡಗುವುದರಿಂದ ಮಕ್ಕಳ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ಸಮಾಜದ ವಿಜ್ಞಾನ, ತಂತ್ರಜ್ಞಾನ, ಕ್ರೀಡೆ ಮುಂತಾದವುದರ ಬೆಳವಣಿಗೆಗೆ ಇದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.
‘ಸೋಲು ಅಥವಾ ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವುದು ಮತ್ತು ಧೈರ್ಯದಿಂದ ಪ್ರದರ್ಶಿಸುವುದು ಅತ್ಯಂತ ಮುಖ್ಯ’ ಎಂದೂ ಅವರು ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಿದಾನಂದ ಕುಮಾರ್ ಮಾತನಾಡಿ, ‘ಕೊಡಗು ಜಿಲ್ಲೆಯ ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಈ ವೇದಿಕೆಯು ಉತ್ತಮ ಅವಕಾಶವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಇಲಾಖೆಯ ಕೆ.ಆರ್.ಬಿಂದು ಮಾತನಾಡಿ, ‘ಯಾವುದೇ ಪ್ರತಿಭಾ ಸ್ಪರ್ಧೆಗಳಲ್ಲಿಯೂ ಗೆದ್ದರೆ ಪ್ರಶಸ್ತಿ ಹಾಗೂ ಸೋತರೆ ಅನುಭವ ಸಿಗುತ್ತದೆ ಎಂಬ ಮನಸ್ಥಿತಿಯೊಂದಿಗೆ ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ಬಿ.ಸಿ.ಶಂಕರಯ್ಯ, ಅನಿತಾ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.
ನ. 5ರಂದೂ ಗಾಂಧಿ ಭವನದಲ್ಲಿ ಕಲಾ ಪ್ರತಿಭೋತ್ಸವ ಮುಂದುವರಿಯಲಿದೆ. ಯುವ ಪ್ರತಿಭೆ ಮತ್ತು ಸಮೂಹ ಸ್ಪರ್ಧೆ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ.
ಗುರಿ ಇಟ್ಟುಕೊಂಡರೆ ಜೀವನದಲ್ಲಿ ಮುಂದೆ ಸಾಗಲು ಸಾಧ್ಯ. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ..– ಬಿ.ಜಿ.ಅನಂತಶಯನ, ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ
ವಿದ್ಯಾರ್ಥಿಗಳು ಪ್ರತಿಭಾ ಉತ್ಸವಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಮಹತ್ವ.– ಮುನೀರ್ ಅಹಮ್ಮದ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.