ADVERTISEMENT

ವಿರಾಜಪೇಟೆ ಕ್ಷೇತ್ರ: ವನ್ಯಜೀವಿ– ಮಾನವ ಸಂಘರ್ಷ ತಪ್ಪಿಸಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2023, 16:25 IST
Last Updated 9 ಏಪ್ರಿಲ್ 2023, 16:25 IST
ಗೋಣಿಕೊಪ್ಪಲು ಬಸ್‌ನಿಲ್ದಾಣದ ಸ್ಥಿತಿ ಹೀಗಿದೆ
ಗೋಣಿಕೊಪ್ಪಲು ಬಸ್‌ನಿಲ್ದಾಣದ ಸ್ಥಿತಿ ಹೀಗಿದೆ   

ಮಡಿಕೇರಿ: ಕೊಡಗು ಜಿಲ್ಲೆಯ ಗಡಿಭಾಗದ ಕ್ಷೇತ್ರವಾದ ವಿರಾಜಪೇಟೆ 1957ರಿಂದಲೂ ಅಸ್ತಿತ್ವದಲ್ಲಿದ್ದು, 14 ವಿಧಾನಸಭಾ ಚುನಾವಣೆಗಳನ್ನು ಕಂಡಿದೆ. 8 ಬಾರಿ ಕಾಂಗ್ರೆಸ್ ಶಾಸಕರು, 6 ಬಾರಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದಾರೆ. ಅಗಾಧವಾದ ಸಮಸ್ಯೆಗಳೇ ತುಂಬಿದ್ದ ಕ್ಷೇತ್ರದಲ್ಲಿ ಆಯ್ಕೆಯಾದವರೆಲ್ಲ ತಮ್ಮ ತಮ್ಮ ಕೈಲಾದ ಮಟ್ಟಿಗೆ ಸಮಸ್ಯೆಗಳನ್ನು ಈಡೇರಿಸಲು ಪ್ರಯತ್ನಿಸಿದ್ದಾರೆ. ಆದರೆ, ಇಂದಿಗೂ ಅನೇಕ ಜ್ವಲಂತ ಸಮಸ್ಯೆಗಳು ಕ್ಷೇತ್ರವನ್ನು ಕಾಡುತ್ತಿವೆ.

ನಾಗರಹೊಳೆ ಸೇರಿದಂತೆ ಕ್ಷೇತ್ರದ ಬಹುಭಾಗ ಅರಣ್ಯದಿಂದಲೇ ಕೂಡಿದೆ. ಇಲ್ಲಿ ವನ್ಯಜೀವಿ – ಮಾನವ ಸಂಘರ್ಷದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಕಾಡಿನಿಂದ ಒಕ್ಕಲೆಬ್ಬಿಸಲಾದ ಆದಿವಾಸಿಗಳ ಸಮಸ್ಯೆ ಜೀವಂತವಾಗಿದೆ.

ಹದಗೆಟ್ಟ ರಸ್ತೆಗಳು ವಾಹನ ಸವಾರರ ಜೀವವಿಂಡುತ್ತಿವೆ. ಪ್ರವಾಸಿ ಸ್ಥಳಗಳು ಮೂಲಸೌಕರ್ಯಗಳ ಕೊರತೆಯಿಂದ ಕಳಾಹೀನವಾಗಿವೆ. ಕಾಫಿ ಬೆಳೆಗಾರರು ಸೇರಿದಂತೆ ರೈತಾಪಿ ವರ್ಗ ಹವಾಮಾನ ವೈಪರೀತ್ಯದಿಂದ ಬಸವಳಿದಿದ್ದಾರೆ. ಇವೆಲ್ಲವೂ ಕ್ಷೇತ್ರದಲ್ಲಿರುವ ಕೆಲವು ಸಮಸ್ಯೆಗಳು ಮಾತ್ರ.

ADVERTISEMENT

ನಿವೇಶನ ರಹಿತರಿಗೆ ಸೂರು

ಸಿದ್ದಾಪುರ: ವಿರಾಜ‍ಪೇಟೆ ಹಾಗೂ ಸಿದ್ದಾಪುರ ಭಾಗದಲ್ಲಿ 2019ರ ಕಾವೇರಿ ನದಿ ಪ್ರವಾಹದಲ್ಲಿ ಮನೆ ಕಳೆದುಕೊಂಡ ನೂರಕ್ಕೂ ಅಧಿಕ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸಲು ಕ್ರಮ ಕೈಗೊಳ್ಳಬೇಕಿದೆ. ಗುಹ್ಯ, ಕರಡಿಗೋಡು ಭಾಗದ ಸಂತ್ರಸ್ತರು ಪ್ರಸ್ತುತ ಪ್ಲಾಸ್ಟಿಕ್ ಹೊದಿಕೆಯ ಶೆಡ್‌ಗಳಲ್ಲಿ ವಾಸವಾಗಿದ್ದು, ಶಾಶ್ವತ ನಿವೇಶನಕ್ಕಾಗಿ ಹೋರಾಟವನ್ನೂ ನಡೆಸಿದ್ದಾರೆ.

ಕೆದಮಳ್ಳುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡ್‌ನಲ್ಲಿ 53 ಕುಟುಂಬ ತಾತ್ಕಾಲಿಕ ಶೆಡ್‌ನಲ್ಲಿ ವಾಸವಾಗಿದ್ದು, ಶಾಶ್ವತ ಸೂರು ಕಲ್ಪಿಸಲು ಹೋರಾಟ ನಡೆಸುತ್ತಿದ್ದಾರೆ. ಬಾಳುಗೋಡು ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಕುಟುಂಬ ನಿವೇಶನಕ್ಕಾಗಿ ಹೋರಾಟ ಕೈಗೊಂಡಿದ್ದು, ಬಿ.ಶೆಟ್ಟಿಗೇರಿ 32 ಕುಟುಂಬಗಳು ನಿವೇಶನಕ್ಕಾಗಿ ಹೋರಾಟ ಕೈಗೊಂಡಿದ್ದಾರೆ. ಮಲೆತಿರಿಕೆ, ಅಯ್ಯಪ್ಪ ಬೆಟ್ಟ, ಅರಸುನಗರ ಮಳೆಯ ಸಂದರ್ಭ ಮನೆ ಹಾನಿಯಾಗಿದ್ದು, ಪ್ರಸ್ತುತ ಅಪಾಯದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಲ್ಲಿನ ನಿವಾಸಿಗಳಿಗೆ ಸೂಕ್ತ ನಿವೇಶನ ನೀಡಿ, ಸ್ಥಳಾಂತರ ಮಾಡಬೇಕಿದೆ. ಇದಲ್ಲದೇ ತಾಲ್ಲೂಕಿನ ಲೈನ್ ಮನೆಯಲ್ಲಿ ವಾಸವಾಗಿರುವ ಆದಿವಾಸಿಗಳಿಗೆ ನಿವೇಶನ‌ ನೀಡಬೇಕೆಂಬ ಕೂಗು ಕೇಳಿಬಂದಿದೆ.

ವಿರಾಜಪೇಟೆ ಮಗ್ಗುಲದ ವಿ‌ನಾಯಕ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಿತಿಮೀರಿದ್ದು, ಆ ಭಾಗದಲ್ಲಿ ನೀರಿನ ಟ್ಯಾಂಕ್ ನಿರ್ಮಾಣ ಮಾಡಬೇಕಿದೆ. ತೋರ ಭಾಗದಲ್ಲಿ 2019 ರಲ್ಲಿ ಭೂಕುಸಿತ ಸಂಭವಿಸಿದ ಜಾಗದಲ್ಲಿ ರಸ್ತೆ ಡಾಂಬರೀಕರಣ, ತಡೆಗೋಡೆ ನಿರ್ಮಾಣ ಆಗಬೇಕಿದೆ. ಮಾಕುಟ್ಟ ಚೆಕ್ ಪೋಸ್ಟ್ ಆಧುನಿಕರಣ ಮಾಡಬೇಕಾಗಿದ್ದು, ಪೊಲೀಸ್ ವಸತಿಗೃಹ ನಿರ್ಮಾಣದ ಅಗತ್ಯವಾಗಿದೆ. ಹಾತ್ತೂರು ಗದ್ದಮನೆ ರಸ್ತೆ ಡಾಂಬರೀಕರಣ ಆಗಬೇಕಿದೆ.

ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ವೈದ್ಯರ ಕೊರತೆ ಇದ್ದು, ವೈದ್ಯರ ನೇಮಕ ಮಾಡಬೇಕಿದೆ. ಇದಲ್ಲದೇ ತಾಲ್ಲೂಕು ವ್ಯಾಪ್ತಿಯಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ಡಾಂಬರೀಕರಣ, ವಿಸ್ತರಣೆ
ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.