ಮಡಿಕೇರಿ: ಕೊಡಗು ಜಿಲ್ಲೆಯ ಸಿದ್ದಾಪುರ ಭಾಗದಲ್ಲಿ ಜನವಸತಿ ಪ್ರದೇಶಗಳತ್ತ ಪದೇ ಪದೇ ದಾಳಿ ನಡೆಸುತ್ತಿದ್ದ ‘ದಕ್ಷ’ ಎಂಬ ಹೆಸರಿನ ಗಂಡಾನೆಯನ್ನು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದರು.
30 ವರ್ಷದ ಈ ಆನೆ ಸೆರೆಗೆ ಮಂಗಳವಾರದಿಂದ ಒಟ್ಟು 8 ಸಾಕಾನೆಗಳ ನೆರವಿನಿಂದ ನೂರಕ್ಕೂ ಅಧಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು.
ಎಮ್ಮೆಗುಂಡಿ ಬಳಿ ಪತ್ತೆಯಾದ ಈ ಆನೆಯ ಬೆನ್ನತ್ತಿದ ಸಿಬ್ಬಂದಿ 5 ಕಿ.ಮೀ ದೂರದವರೆಗೂ ಸಾಗಿ, ಮಾಲ್ದಾರೆ ಅರಣ್ಯ ಪ್ರದೇಶದ ಗಡಿಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದಿದ್ದಾರೆ. ಸಮೀಪದ ಕೆರೆಯೊಂದರಲ್ಲಿ ಒರಗಿದ ಈ ಆನೆಗೆ ರೇಡಿಯೊ ಕಾಲರ್ ಅಳವಡಿಸಲಾಗಿದೆ. ಅಲ್ಲಿಂದ 80 ಕಿ.ಮೀ. ದೂರದ ನಾಗರಹೊಳೆಯ ಬಿಸಿಲವಾಡಿ ಕೆರೆಯ ಸಮೀಪ ಇದನ್ನು ಬಿಡಲಾಗುವುದು ಎಂದು ಡಿಸಿಎಫ್ ಜಗನ್ನಾಥ್ ತಿಳಿಸಿದರು.
‘ಸಾಕಾನೆ ಶಿಬಿರಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಿರುವುದರಿಂದ ಈ ಕಾಡಾನೆಯನ್ನು ಮತ್ತೆ ಕಾಡಿಗೆ ಬಿಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಸಿದ್ದಾಪುರ ಭಾಗದಲ್ಲಿ ಉಪಟಳ ನೀಡುತ್ತಿರುವ ‘ಆಕಾಂಕ್ಷಾ’ ಮತ್ತು ‘ಮೀರಾ’ ಎಂಬ ಕಾಡಾನೆಗಳಿಗೂ ರೇಡಿಯೊ ಕಾಲರ್ ಅಳವಡಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.