ADVERTISEMENT

ಹಾಡಿ ಮಂದಿಗೆ ದಿಮ್ಮಿಯೇ ಆಸರೆ!

ಜೆ.ಸೋಮಣ್ಣ
Published 8 ಜೂನ್ 2019, 5:07 IST
Last Updated 8 ಜೂನ್ 2019, 5:07 IST
ಪೊನ್ನಂಪೇಟೆ ಸಮೀಪದ ಕುಂದ ಬಸವೇಶ್ವರ ಗಿರಿಜನ ಹಾಡಿ ನಿವಾಸಿಗಳು ಮಳೆಗಾಲದಲ್ಲಿ ನದಿ ದಾಟಲು ಹಾಕಿಕೊಂಡಿರುವ ಮರದ ದಿಮ್ಮಿ 
ಪೊನ್ನಂಪೇಟೆ ಸಮೀಪದ ಕುಂದ ಬಸವೇಶ್ವರ ಗಿರಿಜನ ಹಾಡಿ ನಿವಾಸಿಗಳು ಮಳೆಗಾಲದಲ್ಲಿ ನದಿ ದಾಟಲು ಹಾಕಿಕೊಂಡಿರುವ ಮರದ ದಿಮ್ಮಿ    

ಗೋಣಿಕೊಪ್ಪಲು: ಕಳೆದ ವರ್ಷ ಸಂಭವಿಸಿದ್ದ ಭೀಕರ ಜಲಪ್ರಳಯದ ಆತಂಕ ಕೊಡಗಿನ ಜನತೆಯನ್ನು ಇನ್ನೂ ಕಾಡುತ್ತಿದೆ. ಇದರ ಜೊತೆಗೆ, ಜಿಲ್ಲೆಯ ಕೆಲವು ಹಾಡಿಗಳಿಗೆ ಸಂಪರ್ಕ ಬೆಸೆಯುವ ತೊರೆ, ತೋಡುಗಳಿಗೆ ಇಂದಿಗೂ ಸೇತುವೆಯೇ ಇಲ್ಲ!

ಸೇತುವೆಯಿಲ್ಲದ ಕಡೆ ಜನರೇ ಮರದ ದಿಮ್ಮಿ ಹಾಕಿಕೊಂಡು ಸೇತುವೆ ನಿರ್ಮಿಸಿಕೊಂಡಿದ್ದರೆ, ಕೆಲವರು ಮರದ ದಿಮ್ಮಿ ಹಾಕಿ ಅದರ ಮೇಲೆ ತಂತಿ ಕಟ್ಟಿಕೊಂಡು ‘ಸರ್ಕಸ್‌’ ನಡೆಸುತ್ತಾರೆ.

ಬಾಳೆಲೆ ಸಮೀಪದ ತಟ್ಟೆಕೆರೆ ಹಾಡಿಯ ಮಧ್ಯದಲ್ಲಿ, ನಾಗರಹೊಳೆ ಅರಣ್ಯದ ದೊಡ್ಡದೊಂದು ತೋಡು ಹರಿದು ಹೋಗುತ್ತಿದೆ. ಮಳೆಗಾಲದಲ್ಲಿ ಬಹಳಷ್ಟು ನೀರು ಮೊರೆಯುತ್ತಾ ಮುನ್ನುಗ್ಗುತ್ತದೆ. ಇಂತಹ ಸಂದರ್ಭದಲ್ಲಿ ಇಲ್ಲಿನ ಜನರು ತಾವೇ ನಿರ್ಮಿಸಿಕೊಂಡಿರುವ ಮರದ ದಿಮ್ಮಿಯ ಸೇತುವೆ ಮೇಲೆ ಜೀವವನ್ನೇ ಪಣಕಿಟ್ಟು ದಾಟುತ್ತಾರೆ.

ADVERTISEMENT

ದೊಡ್ಡವರಿಲ್ಲದ ವೇಳೆಯಲ್ಲಿ ಮಕ್ಕಳೇ ಮರದ ಸೇತುವೆ ದಾಟುತ್ತಾರೆ. ಇದು ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ.

ಅದೇ ಸಮಸ್ಯೆ: ಪೊನ್ನಂಪೇಟೆ ಸಮೀಪದ ಕುಂದ ಬಸವೇಶ್ವರ ಗಿರಿಜನ ಹಾಡಿಯದ್ದು ಇದೇ ಸಮಸ್ಯೆ. ಇಲ್ಲಿಯೂ ದೊಡ್ಡದಾದ ತೋಡು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ.

ಇದಕ್ಕೆ ನೆಲಮಟ್ಟದಲ್ಲಿಯೇ ಸೇತುವೆ ನಿರ್ಮಿಸಲಾಗಿದೆ. ಮಳೆಗಾಲ ದಲ್ಲಿ ಸೇತುವೆ ಮೇಲೆಯೇ ನೀರು ಹರಿಯುತ್ತದೆ. ಕಾಂಕ್ರೀಟ್‌ನಿಂದ ನಿರ್ಮಿಸಿದ್ದ ಸೇತುವೆಯ ಒಂದುಬದಿ ಕುಸಿದು ಬಿದ್ದಿದೆ. ಇದಕ್ಕೆ ಕಲ್ಲು ಹಾಕಿ ಮಣ್ಣು ತುಂಬಿಸಲಾಗಿದೆ. ತೋಡಿನಲ್ಲಿ ನೀರು ಅತಿಯಾದರೆ ಮತ್ತೆ ಇದು ಕೊಚ್ಚಿಹೋಗುವ ಸಾಧ್ಯತೆಯಿದೆ ಎಂಬ ಆತಂಕ ಹಾಡಿಯ ವೈ.ಎಂ.ತಿಮ್ಮ ಅವರದ್ದು.

‘ಸೇತುವೆಯನ್ನು ಕನಿಷ್ಠ 6 ಅಡಿ ಎತ್ತರಕ್ಕೆ ಏರಿಸಬೇಕಿತ್ತು. ಆಗ ಎಷ್ಟು ಮಳೆ ಸುರಿದರೂ ತೊಂದರೆ ಆಗುತ್ತಿರಲಿಲ್ಲ. ಇದನ್ನು ಬಿಟ್ಟು ನೆಲಮಟ್ಟದಲ್ಲಿಯೇ ಕಾಂಕ್ರೀಟ್‌ ಹಾಕಿ ರಸ್ತೆಯಂತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.