
ನಾಪೋಕ್ಲು: ಕೊಡಗಿನ ಕುಲದೇವತೆ ಕಾವೇರಿ ಎಂಬ ಕೃತಿಯನ್ನು ಮಂಗಳೂರಿನ ಕೊಡವ ಸಮಾಜದ ಉಪಾಧ್ಯಕ್ಷೆ ಬೊಳ್ಳಿಯಾಂಡ ಕೃತಿ ಸೋಮಯ್ಯ ಮಂಗಳೂರು ನಗರದ ಪತ್ರಿಕಾ ಭವನದಲ್ಲಿ ಲೋಕಾರ್ಪಣೆ ಮಾಡಿದರು.
ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಬೊಳ್ಳಿಯಾಂಡ ಕೃತಿ ಸೋಮಯ್ಯ, ಕಾವೇರಿ ಮಾತೆಯ ಆದಿಯನ್ನು ವಿವರಣೆ ಮತ್ತು ವರ್ಣಚಿತ್ರದ ಮೂಲಕ ಬಿ.ಕೆ. ಗಣೇಶ್ ರೈ ಅವರು ಕಟ್ಟಿಕೊಟ್ಟಿದ್ದಾರೆ. ಕಾವೇರಿ ಮಾತೆಯ ಪುರಾಣ ಕಥೆಗಳ ಪರಿಚಯ ಕೆಲವರಿಗೆ ಇರುವುದಿಲ್ಲ. ಈ ಕೃತಿಯ ಓದುಗರ ಮೂಲಕ ಕಥೆಯ ಸಾಕ್ಷಾತ್ಕಾರವಾಗಲಿದೆ ಎಂದರು.
ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದ್ದು, ಅಮೃತ ಪ್ರಕಾಶ ಪತ್ರಿಕೆಯ ಸರಣಿ ಕೃತಿ 45ನೇಯ ಕೃತಿ ಕೊಡಗಿನ ಚಿತ್ರಶಿಲ್ಪ ಕಲಾವಿದ ಬಿ.ಕೆ ಗಣೇಶ್ ರೈ ಅವರ ಸಾಹಿತ್ಯ ಮತ್ತು ಡಿಜಿಟಲ್ ಗ್ರಾಫಿಕ್ಸ್ನ ಪರಿಕಲ್ಪನೆ ಮತ್ತು ವಿನ್ಯಾಸದಲ್ಲಿ ಮೂಡಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಗೌಡ ಮಾವಜಿ ಮಾತನಾಡಿ, ಕೃತಿಯು ಕನ್ನಡ, ಇಂಗ್ಲಿಷ್, ಅರೆ ಭಾಷೆ ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬಂದಿದೆ. ಕಾವೇರಿ ಮಾತೆಯ ಪುರಾಣವನ್ನು ತಿಳಿಸುವ ಈ ಕೃತಿಯು ಕನ್ನಡ, ಇಂಗ್ಲಿಷ್, ಅರೆ ಭಾಷೆ, ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿದೆ. ಕಾವೇರಿ ಮಾತೆಯ ಪುರಾಣ ತಿಳಿಸುವ ಈ ಕೃತಿಯು ಕಾವೇರಿ ಮಾತೆಯ ಮಹಿಮೆಯನ್ನು ಸಾರಿದೆ. ಇದು ಸಂಗ್ರಹ ಯೋಗ್ಯ ಕೃತಿಯಾಗಿದೆ ಎಂದರು.
ಕೃತಿಯ ಲೇಖಕ ಮತ್ತು ವಿನ್ಯಾಸಗಾರ ಅಮೃತ ಪ್ರಕಾಶ ಪತ್ರಿಕೆಯ ಉಪಸಂಪಾದಕ ಬಿ.ಕೆ. ಗಣೇಶ್ ರೈ, ಅಮೃತ ಪ್ರಕಾಶ ಪತ್ರಿಕೆ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಉಪಸ್ಥಿತರಿದ್ದರು. ನಮ್ಮ ಕುಡ್ಲ ವಾಹಿನಿಯ ವಾರ್ತಾವಾಚಕಿ ಡಾ.ಪ್ರಿಯ ಹರೀಶ್ ನಿರೂಪಿಸಿ, ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.