ಮಡಿಕೇರಿ: ‘ನಾವು ಕೋಳಿ, ಹಂದಿ ಸಾಕಿಕೊಂಡು ಕಡುಕಷ್ಟದ ಜೀವನ ನಡೆಸುತ್ತಿದ್ದೇವೆ. ನಮ್ಮಗಿನ್ನೇನೂ ಬೇಡ. ನಮ್ಮ 5 ಕುಟುಂಬವರಿಗೆ ಮನೆಯ ಕೊಟ್ಟರೆ ಸಾಕು’ ಎಂದು ರತ್ನಮ್ಮ ಶಾಸಕ ಡಾ.ಮಂತರ್ಗೌಡ ಅವರಿಗೆ ಕೈಮುಗಿದು ಕಣ್ಣೀರು ಹಾಕಿದರು.
ಇಲ್ಲಿನ ರೆಡ್ಕ್ರಾಸ್ ಭವನದ ಕಾಳಜಿ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿದ ಶಾಸಕ ಡಾ.ಮಂತರ್ಗೌಡ ಅವರು ಸಂತ್ರಸ್ತರ ಅಹವಾಲು ಆಲಿಸಿ ಭರವಸೆ ನೀಡಿದರು.
‘ಇಂತಹ ಕುಟುಂಬಗಳನ್ನು ಸಂತ್ರಸ್ತ ಕುಟುಂಬಗಳ ಮನೆ ಪಟ್ಟಿಯಿಂದ ಏಕೆ ಕೈಬಿಡಲಾಗಿದೆ ಎಂದು ತಿಳಿಯುತ್ತಿಲ್ಲ. ಆದ್ದರಿಂದ ಮರು ಪರಿಶೀಲಿಸಿ ಮನೆ ನೀಡಲು ಕ್ರಮವಹಿಸಬೇಕು. ಈಗಾಗಲೇ 2018 ಮತ್ತು 2019ರಲ್ಲಿ ಸಂತ್ರಸ್ತರಿಗೆ ಮನೆ ನೀಡಿರುವ ಜಾಗದಲ್ಲಿ ಮನೆ ಖಾಲಿ ಇದ್ದಲ್ಲಿ, ಮನೆ ಒದಗಿಸುವ ಸಂಬಂಧ ಪರಿಶೀಲಿಸಿ ಕ್ರಮವಹಿಸಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಹಾಗೂ ತಹಶೀಲ್ದಾರ್ ಶೀಧರ್ ಅವರಿಗೆ ಸಲಹೆ ನೀಡಿದರು.
ಸಂತ್ರಸ್ತರಿಗೆ ಧೈರ್ಯ ಹೇಳಿದ ಮಂತರ್ಗೌಡ, ‘ನಿಮ್ಮ ಅಳಲು ನಮಗೆ ಸಂಕಟ ತರುತ್ತದೆ. ಆದ್ದರಿಂದ ಮನೆ ಒದಗಿಸಲು ಪ್ರಯತ್ನಿಸಲಾಗುವುದು. ಸದ್ಯ ಮುನ್ನೆಚ್ಚರ ವಹಿಸಬೇಕಿರುವುದರಿಂದ ಕಾಳಜಿ ಕೇಂದ್ರದಲ್ಲಿ ಇರುವಂತೆ ಕೋರಿದರು. ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮುನ್ನೆಚ್ಚರ ವಹಿಸುವುದು ಅತ್ಯಗತ್ಯವಾಗಿದೆ’ ಎಂದರು.
ತಡೆಗೋಡೆ ಬಿರುಕು ಬಿಟ್ಟಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾದಲ್ಲಿ ತೊಂದರೆಗೆ ಸಿಲುಕಬೇಕಾಗುತ್ತದೆ. ಆದ್ದರಿಂದ ತಾತ್ಕಾಲಿಕವಾಗಿ ಕಾಳಜಿ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದರು.
‘ಮಾನವೀಯ ದೃಷ್ಟಿಯಿಂದ ಪ್ರತಿಯೊಬ್ಬರ ಜೀವ ರಕ್ಷಣೆ ಮಾಡುವುದು ಆದ್ಯ ಕರ್ತವ್ಯವಾಗಿದೆ. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕಾಳಜಿ ಕೇಂದ್ರದಲ್ಲಿ ಇರುವಂತೆ ಮನವಿ ಮಾಡಿದರು. ಬದಲಿ ಜಾಗ, ನಿವೇಶನ, ಮನೆ ನೀಡಿದಲ್ಲಿ ಈಗಿರುವ ಜಾಗವನ್ನು ಬಿಡಬೇಕು’ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.
ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಅಡುಗೆಗೆ ಬೇಕಾದ ಸಾಮಗ್ರಿಗಳು, ಬೆಡ್ಶೀಟ್, ಟಾರ್ಪಲ್ ಹಾಗೂ ಕೊಡೆ ಮತ್ತಿತರ ಒಳಗೊಂಡ ಕಿಟ್ ಅನ್ನು ಅವರು ವಿತರಿಸಲಾಯಿತು.
ಮಂತರ್ಗೌಡ ಅವರೇ ಸಂತ್ರಸ್ತರಿಗೆ ಊಟ ಬಡಿಸಿದರು. ನಂತರ ಶಾಸಕರು, ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸೇರಿದಂತೆ ಎಲ್ಲರೂ ಸಂತ್ರಸ್ತರ ಜತೆ ಊಟ ಸವಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮಂತರ್ ಗೌಡ, ‘ಈಗಾಗಲೇ ಹಂಚಿಕೆ ಮಾಡಲಾಗಿರುವ ಮನೆಗಳನ್ನು ಮರು ಪರಿಶೀಲಿಸಬೇಕು. ಜೊತೆಗೆ ಇನ್ಪೋಸಿಸ್ ಸಂಸ್ಥೆಯ ಮನೆ ಸಹ ಬಳಸಿಕೊಳ್ಳಬೇಕು. ಇಂತಹ ಸಂತ್ರಸ್ತರಿಗೆ ಕೂಡಲೇ ಮನೆ ಒದಗಿಸಬೇಕು’ ಎಂದು ಹೇಳಿದರು.
‘ಹೆಚ್ಚಿನ ಮಳೆಯಿಂದ ತೊಂದರೆಗೆ ಸಿಲುಕಿರುವವರು ಹತ್ತಿರದ ಗ್ರಾಮ ಪಂಚಾಯಿತಿ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗಬೇಕು’ ಎಂದು ಮನವಿ ಮಾಡಿದರು.
ಪೌರಾಯುಕ್ತ ಎಚ್.ಆರ್.ರಮೇಶ್, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಉಪ ಸಭಾಪತಿ ಎಚ್.ಟಿ. ಅನಿಲ್, ಕಾರ್ಯದರ್ಶಿ ಧನಂಜಯ, ರೆಡ್ಕ್ರಾಸ್ ಸಂಸ್ಥೆಯ ಉತ್ತಯ್ಯ, ತೆನ್ನಿರಾ ಮೈನಾ, ಮುಖಂಡರಾದ ಜಗದೀಶ್, ಪ್ರಕಾಶ್ ಆಚಾರ್ಯ, ಪ್ರಭು ರೈ, ಮುದ್ದುರಾಜ್, ಸದಾಮುದ್ದಪ್ಪ, ಮೀನಾಜ್, ರವಿಗೌಡ, ನಗರಸಭೆ ಎಂಜಿನಿಯರ್ಗಳಾದ ಸತೀಶ್, ಹೇಮಂತ್ ಕುಮಾರ್, ತಾಹಿರ್ ಭಾಗವಹಿಸಿದ್ದರು.
ಮಂಗಳೂರು ರಸ್ತೆಗೆ ಕಟ್ಟಿರುವ ತಡೆಗೋಡೆ ಬಿರುಕು ಬಿಟ್ಟಿರುವುದರಿಂದ ಅಲ್ಲಿ ವಾಸವಿದ್ದ 5 ಕುಟುಂಬಗಳನ್ನು ಇಲ್ಲಿನ ರೆಡ್ಕ್ರಾಸ್ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಬಿರುಕು ಬಿಟ್ಟಿರುವ ತಡೆಗೋಡೆ ವೀಕ್ಷಿಸಿದ ಶಾಸಕ
ಮಡಿಕೇರಿ: ನಗರ ಸಮೀಪದ ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಬಿರುಕು ಬಿಟ್ಟಿರುವ ತಡೆಗೋಡೆಯನ್ನು ಶಾಸಕ ಡಾ.ಮಂತರ್ ಗೌಡ ಅವರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು. ಬಿರುಕು ಬಿಟ್ಟಿರುವ ತಡೆಗೋಡೆ ಕುಸಿದು ಬಿದ್ದರೆ ಇಡೀ ಹೆದ್ದಾರಿಯೇ ಬಂದ್ ಆಗಲಿದೆ. ಆದ್ದರಿಂದ ತಜ್ಞ ಎಂಜಿನಿಯರ್ಗಳನ್ನು ಕರೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಹೆದ್ದಾರಿ ವಿಭಾಗದ ಎಂಜಿನಿಯರ್ಗಳಿಗೆ ಸೂಚಿಸಿದರು. ಈ ಬಾರಿ ಮೇ ತಿಂಗಳಿನಿಂದಲೇ ದೊಡ್ಡ ಮಳೆ ಆರಂಭವಾಯಿತು. ನವೆಂಬರ್ವರೆಗೂ ಮಳೆ ಇರುವ ಸಾಧ್ಯತೆ ಇದೆ. ಆದ್ದರಿಂದ ಹೆದ್ದಾರಿ ಸುರಕ್ಷತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಸೂಚಿಸಿದರು. ತಹಶೀಲ್ದಾರ್ ಶ್ರೀಧರ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಗಿರೀಶ್ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಪೌರಾಯುಕ್ತ ರಮೇಶ್ ಭಾಗವಹಿಸಿದ್ದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯು ಪ್ರಾಕೃತಿಕ ವಿಕೋಪ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿವಿಧ ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಸ್ಪಂದಿಸುತ್ತಾ ಬಂದಿದೆ–ಬಿ.ಕೆ.ರವೀಂದ್ರ ರೈ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸಭಾಪತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.