ಸೋಮವಾರಪೇಟೆ: ಮೂರು ದಿನಗಳಿಂದ ಬಿಡದೆ ಸುರಿದ ಮುಂಗಾರು ಮಳೆ ಸೋಮವಾರ ಕಡಿಮೆಯಾದರೂ, ಮಳೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಕುಡಿಯುವ ನೀರು ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದೆ.
ಹಲವೆಡೆ ಭತ್ತದ ಗದ್ದೆಯಲ್ಲಿ ನೀರು ನಿಂತಿದ್ದರಿಂದ ಸಸಿ ಮಡಿಗಳಿಗೆ ಹಾನಿಯಗಿದೆ. ಶಾಂತಳ್ಳಿ ಭಾಗದಲ್ಲಿ ಬಿಡದೆ ಸುರಿದ ಮಳೆಯಿಚಿದಾಗಿ ಹಲವಾರು ಮರಳು ರಸ್ತೆಗೆ ಅಡ್ಡ ಬಿದ್ದಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಅರಣ್ಯ, ಅಗ್ನಿಶಾಮಕ ಹಾಗೂ ಸೆಸ್ಕ್ ಇಲಾಖೆಯ ಸಿಬ್ಬಂದಿ ಹಗಲಿರುಳು ಕೆಲಸ ಮಾಡಿ ಸಮಸ್ಯೆ ಪರಿಹರಿಸಿದರು.
ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಒಂದು ವಾರದಿಂದ ಜನರು ಪರದಾಡುತ್ತಿದ್ದಾರೆ.
ಸೋಮವಾರಪೇಟೆಯಿಂದ ಸಕಲೇಶಪುರಕ್ಕೆ ತೆರಳುವ ಮಾರ್ಗದ ಆಲೆಕಟ್ಟೆ ಬಳಿ ರಸ್ತೆಗೆ ತಡೆಗೋಡೆ ನಿರ್ಮಿಸುತ್ತಿದ್ದು, ಕುಸಿಯುವ ಭೀತಿ ಎದುರಾಗಿದೆ. ಸ್ಥಳಕ್ಕೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಮಾಹಿತಿ ಪಡೆದರು. ದುದ್ಗಲ್ಲು ಗ್ರಾಮದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ನೂತನ ವಿದ್ಯುತ್ ಮಾರ್ಗ ಎಳೆಯುತ್ತಿದ್ದು, ಸ್ಥಳಕ್ಕೆ ಶಾಸಕರು ತೆರಳಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.