ಮಡಿಕೇರಿ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರು ಮಂಗಳವಾರ ಇಲ್ಲಿನ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ಮನವಿ ಪತ್ರವನ್ನು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರಿಗೆ ಸಲ್ಲಿಸಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚೇತನ್, ‘2017ರ ಅವೈಜ್ಞಾನಿಕ ‘ವೃಂದ ಮತ್ತು ನೇಮಕಾತಿ’ ನಿಯಮಗಳಿಗೆ ಸೂಕ್ತ ತಿದ್ದಪಡಿ ಮಾಡಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘2017ರಲ್ಲಿ ಹೊಸ ನಿಯಮಗಳನ್ನು ತಂದು ಅದನ್ನು ಪೂರ್ವಾನ್ವಯಗೊಳಿಸಲಾಗಿದೆ. ಇದರಿಂದ ನಾವು 1–5ನೇ ತರಗತಿಗೆ ಮಾತ್ರವೇ ಪಾಠ ಮಾಡಲು ಸೀಮಿತರಾಗಿದ್ದೇವೆ. ನಾವು ನಮ್ಮ ಸ್ವಾಭಿಮಾನಕ್ಕಾಗಿ ಹೋರಾಟ ಮಾಡುತ್ತಿದ್ದೇವೆ’ ಎಂದರು.
ಸಮಿತಿಯೊಂದನ್ನು ರಚಿಸಿ 30 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ 2024ರ ಸೆಪ್ಟೆಂಬರ್ನಲ್ಲೇ ಸಿಎಂ ಮತ್ತು ಶಿಕ್ಷಣ ಇಲಾಖೆ ಸಚಿವರು ತಿಳಿಸಿದ್ದರು. ಆದರೆ, ಸಮಸ್ಯೆ ಈ ವರೆಗೆ ಬಗೆಹರಿದಿಲ್ಲ. ಹಾಗಾಗಿ, ಹೋರಾಟ ಅನಿವಾರ್ಯ ಎಂದು ಹೇಳಿದರು.
ಇಂದು ಜಿಲ್ಲಾ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಬಳಿಕ ಸೆ.3ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯ ಮಟ್ಟದ ಬೃಹತ್ ಹೋರಾಟ ನಡೆಸಲಾಗುವುದು. ನಂತರ, ಬೇಡಿಕೆ ಈಡೇರುವವರೆಗೂ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಂಘದ ಮುಖಂಡರಾದ ಎಚ್.ಎನ್.ಮಂಜುನಾಥ್ ಮಾತನಾಡಿ, ‘ಈಗ ಪ್ರಾಥಮಿಕ ಶಾಲೆ ಶಿಕ್ಷಕರ ಮೇಲೆ ಎಷ್ಟು ಕೆಲಸದ ಒತ್ತಡ ಇದೆ ಎಂದರೆ ಪಾಠ ಬಿಟ್ಟು ಸರ್ಕಾರ ನೀಡಿದ ಉಳಿದ ಕೆಲಸ ಮಾಡುವಂತಾಗಿದೆ. ಶೀಘ್ರವೇ ಈ ಕೆಲಸಗಳನ್ನು ಮಾಡಲು ನೌಕರರನ್ನು ನೇಮಕಾತಿ ಮಾಡಿಕೊಳ್ಳಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಕೆ.ಎಸ್.ಪ್ರಸನ್ನಕುಮಾರ್ ಮಾತನಾಡಿ, ‘ನಾವು ಈಗ ನಿತ್ಯವೂ 4 ಆ್ಯಪ್ನಲ್ಲಿ ಅಪ್ಡೇಟ್ ಮಾಡಬೇಕಿದೆ. ತರಕಾರಿ, ಮೊಟ್ಟೆ ದರ ಹೆಚ್ಚಳವಾದರೂ ನಮ್ಮ ಹಣವನ್ನೇ ಹಾಕಬೇಕಿದೆ. ದಿನೇ ದಿನೇ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಅದಕ್ಕೂ ನಮ್ಮನ್ನೇ ಹೊಣೆಗಾರರನ್ನಾಗಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ಈ.ಸುರೇಂದ್ರ, ಟಿ.ಕೆ.ಬಸವರಾಜು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.