ಮಡಿಕೇರಿ: ಆದಿಮಸಂಜಾತ ಏಕ-ಜನಾಂಗೀಯ ಕೊಡವರ ಪವಿತ್ರ ಜಲದೇವತೆ ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯನ್ನು ‘ಕೊಡವರ ಪವಿತ್ರ ಯಾತ್ರಾಸ್ಥಳ’ ಎಂದು ಗುರುತಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ (ಸಿಎನ್ಸಿ) ಒತ್ತಾಯಿಸಿದೆ.
ಆದಿಮಸಂಜಾತ ಏಕ-ಜನಾಂಗೀಯ ಕೊಡವರು, ‘ಆನಿಮಿಸ್ಟಿಕ್’ ನಂಬಿಕೆಯುಳ್ಳವರಾಗಿದ್ದು, ಅವರ ಎಲ್ಲಾ ಜಾನಪದ ಆಚರಣೆಗಳು ಪವಿತ್ರ ಜಲದೇವತೆ ಹಾಗೂ ಜೀವನಾಡಿ ಕಾವೇರಿ ನದಿಯ ಸುತ್ತ ಸುತ್ತುತ್ತವೆ. ಆದ್ದರಿಂದ ಸರ್ಕಾರ ಜೆರುಸಲೆಮ್ನಲ್ಲಿರುವ ಯಹೂದಿಗಳ ದೇವಾಲಯ ಮೌಂಟ್ ಮೊರಿಯಾದ ಮಾದರಿಯಲ್ಲಿ ತಲಕಾವೇರಿಯನ್ನು ಕೊಡವರ ಪವಿತ್ರ ತೀರ್ಥಯಾತ್ರಾ ಸ್ಥಳವೆಂದು ಗುರುತಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಕೇಂದ್ರ ಗೃಹಮಂತ್ರಿಗಳು, ಮುಖ್ಯಮಂತ್ರಿಗಳು ಹಾಗೂ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಗಳಿಗೆ ಜ್ಞಾಪನಾ ಪತ್ರ ರವಾನಿಸಲಾಗಿದೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಆದಿಮಸಂಜಾತ ಕೊಡವರು ಅ.17 ರಂದು ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಮತ್ತು ಆಚರಿಸಲು ಸಜ್ಜಾಗಿದ್ದಾರೆ. ಆನಿಮಿಸ್ಟಿಕ್ ನಂಬಿಕೆಯುಳ್ಳ ಆದಿಮಸಂಜಾತ ಕೊಡವರು ಪವಿತ್ರ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿಎನ್ಸಿ ಸಂಘಟನೆ ಕೊಡವರ ಮಹತ್ವದ ಆಧ್ಯಾತ್ಮಿಕ ಮತ್ತು ಕಾನೂನುಬದ್ಧ ಆಕಾಂಕ್ಷೆಗಳನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮುಂದೆ ಮಂಡಿಸುತ್ತಿದೆ ಎಂದು ಹೇಳಿದ್ದಾರೆ.
ಕಾವೇರಿ ನದಿಗೆ ‘ಕಾನೂನುಬದ್ಧ ವ್ಯಕ್ತಿ ಸ್ಥಾನಮಾನ’ ನೀಡಬೇಕು ಎಂದು ಒತ್ತಾಯಿಸಿರುವ ಅವರು, ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಎನ್ಸಿ 2018ರಲ್ಲಿ ತಲಕಾವೇರಿಯಿಂದ ಪೂಂಪುಹಾರ್ ವರೆಗೆ ಆಧ್ಯಾತ್ಮಿಕ ಯಾತ್ರೆಯನ್ನು ಕೈಗೊಂಡಿತ್ತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.