ಗೋಣಿಕೊಪ್ಪಲು: ಪೊನ್ನಂಪೇಟೆಯಲ್ಲಿ ಜಬ್ಬೂಮಿ ಚಾರಿ ಟಬಲ್ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಕೊಡವ ಯುವ ಮೇಳವನ್ನು 2026 ಏಪ್ರಿಲ್ 12ಕ್ಕೆ ಪೊನ್ನಂಪೇಟೆಯಲ್ಲಿ ನಡೆಸಲು ಭಾನುವಾರ ಹೊದ್ದೂರುವಿನ ಟ್ವಿನ್ ರಿವರ್ ರಿಟ್ರೀಟ್ ನಲ್ಲಿ ನಡೆದ ಸಭೆಯಲ್ಲಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಜಬ್ಬೂಮಿ ಸಂಚಾಲಕ ರಾಜೀವ್ ಬೋಪಯ್ಯ ಮಾತನಾಡಿ, 2023ರಲ್ಲಿ ಮಡಿಕೇರಿಯಲ್ಲಿ ಪ್ರಥಮ ಕೊಡವ ಯುವ ಮೇಳವನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಇದೀಗ ಎರಡನೇ ಕೊಡವ ಯುವ ಮೇಳವನ್ನು ಪೊನ್ನಂಪೇಟೆಯಲ್ಲಿ ನಡೆಸಿ, ಕೊಡವ ಜನಾಂಗದ ಸುಮಾರು 10 ಸಾವಿರ ಯುವ ಪೀಳಿಗೆಯನ್ನು ಸೇರಿಸಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದೆ. ಸಮಾವೇಶಕ್ಕೂ ಮೊದಲು ಗೋಣಿಕೊಪ್ಪಲಿನಿಂದ ಪೊನ್ನಂಪೇಟೆವರೆಗೆ ಸುಮಾರು 5 ಕಿ.ಮೀ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಮುಖ್ಯವಾಗಿ ಯುವ ಪೀಳಿಗೆಯನ್ನು ಒಟ್ಟುಗೂಡಿಸುವ, ಕೊಡವ ಜನಾಂಗದ ಆಚಾರ, ವಿಚಾರ, ಸಂಸ್ಕೃತಿ, ನೆಲದ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಕೊಡಗಿನ ನೆಲದೊಂದಿಗೆ ಕೊಡವರಿಗೆ ಇರುವ ಅವಿನಾಭಾವ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ ಯುವಮೇಳ ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ತಿಳಿವಳಿಕೆ, ಮಕ್ಕಳಲ್ಲಿ ತಂದೆ ತಾಯಿ, ಕುಟುಂಬದ ಪ್ರಯೋಜನದ ಬಗ್ಗೆ ಅರಿವು ಮೂಡಿಸುವುದು ಸೇರಿ ಹಲವು ಪ್ರಮುಖ ನಿರ್ಣಯಗಳನ್ನು ಸಮಾವೇಶದಲ್ಲಿ ಕೈಗೊಳ್ಳಲಾಗುದು ಎಂದು ಹೇಳಿದರು.
ಜಬ್ಬೂಮಿ ಸಹ ಸಂಚಾಲಕರು ಅಚ್ಚಾಂಡಿರ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಜಮ್ಮಡ ಗಣೇಶ್ ಅಯ್ಯಣ್ಣ,ಮಲ್ಲಮಾಡ ಪ್ರಭು ಪೂಣಚ್ಚ ಮಚ್ಚಾಮಾಡ ಅನೀಶ್ ಮಾದಪ್ಪ, ಮಾಳೇಟಿರ ಶ್ರೀನಿವಾಸ್, ಚೈಯ್ಯಂಡ ಸತ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.