ಕುಶಾಲನಗರ: ಪಟ್ಟಣ ಸೇರಿದಂತೆ ವಿವಿಧೆಡೆ ದೇವಾಲಯ ಹಾಗೂ ಸಂಘಸಂಸ್ಥೆಗಳು ಗೌರಿ ಹಾಗೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ವಿಜೃಂಭಣೆಯ ಗಣೇಶೋತ್ಸವ ಆಚರಿಸಲಾಯಿತು.
ಇಲ್ಲಿನ ರಥಬೀದಿಯ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ 101 ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಬೈಚನಹಳ್ಳಿ, ಗಂಧದಕೋಟೆ, ಮಾದಪಟ್ಟಣ, ಹೌಸಿಂಗ್ ಬೋರ್ಡ್, ಗುಂಡೂರಾವ್ ಬಡಾವಣೆ ಸೇರಿದಂತೆ ವಿವಿಧೆಡೆ ಮೂರ್ತಿಗಳನ್ನು ಸ್ಥಾಪಿಸಿ ಪೂಜೆ ಸಲ್ಲಿಸಿದರು.
ಪಟ್ಟಣದ ಗಣಪತಿ ದೇವಾಲಯದಲ್ಲೂ ಕೂಡ ವಿಶೇಷ ಪೂಜೆ ನಡೆಯಿತು. ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು.
ಕೂಡಿಗೆ ಡೇರಿ ಆಡಳಿತ ಮಂಡಳಿ, ಅಧಿಕಾರಿ ವರ್ಗದವರು ಪ್ರತಿವರ್ಷದಂತೆ ಡೇರಿ ಸಭಾಂಗಣದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದರು.
ವಿದ್ಯಾ ಗಣಪತಿ ಸೇವಾ ಸಮಿತಿ, ಹಾಗೂ ದಂಡಿನಮ್ಮ ಮತ್ತು ಬಸವೇಶ್ವರ ದೇವಸ್ಥಾನ ಸಮಿತಿ, ಯಂಗ್ ಸ್ಟಾರ್ ಅಸೋಸಿಯೇಷನ್ ವತಿಯಿಂದ 17ನೇ ವರ್ಷದ ಅದ್ದೂರಿ ಗೌರಿ ಗಣೇಶೋತ್ಸವ ಆಚರಣೆಯನ್ನು ಕೂಡಿಗೆ ಸರ್ಕಲ್ ಗಣಪತಿ ಸಭಾಂಗಣದಲ್ಲಿ ನಡೆಯಿತು. ವಿಶೇಷ ಪೂಜೆ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. 5 ದಿನಗಳ ಕಾಲ ವಿವಿಧ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.