ADVERTISEMENT

ಕೊಡಗು: ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ; ಭರವಸೆ

ಚೆಟ್ಟಿಮಾನಿ ಅಂಗನವಾಡಿಯಲ್ಲಿ ಎಲ್‌ಕೆಜಿ ಪ್ರಾರಂಭೋತ್ಸವದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:34 IST
Last Updated 2 ಜುಲೈ 2025, 6:34 IST
ಮಡಿಕೇರಿ ಸಮೀಪದ ಚೆಟ್ಟಿಮಾನಿ ಅಂಗನವಾಡಿಯಲ್ಲಿ ಮಂಗಳವಾರ ಎಲ್‌ಕೆಜಿ ಪ್ರಾರಂಭೋತ್ಸವ ನಡೆಯಿತು
ಮಡಿಕೇರಿ ಸಮೀಪದ ಚೆಟ್ಟಿಮಾನಿ ಅಂಗನವಾಡಿಯಲ್ಲಿ ಮಂಗಳವಾರ ಎಲ್‌ಕೆಜಿ ಪ್ರಾರಂಭೋತ್ಸವ ನಡೆಯಿತು   

ಮಡಿಕೇರಿ: ‘ಅಂಗನವಾಡಿ ಪ್ರಾರಂಭವಾಗಿ 50 ವರ್ಷ ತುಂಬಿದ ಸವಿನೆನಪಿಗಾಗಿ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಾರಂಭವಾಗುತ್ತಿದೆ. ಮಡಿಕೇರಿ ತಾಲ್ಲೂಕಿನ 10 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಥಮ ಹಂತದಲ್ಲಿ ಪ್ರಾರಂಭವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿಯನ್ನು ಪ್ರಾರಂಭಿಸಲಾಗುವುದು’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ ತಿಳಿಸಿದರು.

ಇಲ್ಲಿನ ಚೆಟ್ಟಿಮಾನಿ ಅಂಗನವಾಡಿಯಲ್ಲಿ ಮಂಗಳವಾರ ನಡೆದ ಎಲ್‌ಕೆಜಿ ಪ್ರಾರಂಭೋತ್ಸವ ಹಾಗೂ ಸಿಂಗತೂರು ಅಂಗನವಾಡಿ ಕಾರ್ಯಕರ್ತೆ ರಾಧಾ, ನವೋದಯ ಅಂಗನವಾಡಿ ಸಹಾಯಕಿ ಜಾನಕಿ, ಕೊಚ್ಚಿ ಅಂಗನವಾಡಿ ಸಹಾಯಕಿ ರೋಸಮ್ಮ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ‘ಎಲ್‌ಕೆಜಿಯನ್ನು ಅಂಗನವಾಡಿಯಲ್ಲಿ ಪ್ರಾರಂಭಿಸುತ್ತಿರುವುದು ಇಲಾಖೆಯ ಅತ್ಯುತ್ತಮ ಯೋಜನೆಯಲ್ಲಿ ಒಂದಾಗಿದೆ. ಆಂಗ್ಲ ಭಾಷೆ ಶಿಕ್ಷಣವನ್ನು ಅಂಗನವಾಡಿಯಲ್ಲಿ ಎಲ್‌ಕೆಜಿ ಮೂಲಕ ಬಡ ಮಕ್ಕಳಿಗೆ ಒದಗಿಸುವುದರಿಂದ ಮಕ್ಕಳ ಭವಿಷ್ಯ ಮತ್ತಷ್ಟು ಉತ್ತಮ ಪಡಿಸಲು ಸಹಕಾರಿ ಆಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಈಚೆಗೆ ಪೂರ್ವಭಾವಿ ಸಭೆಯಲ್ಲಿ ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಸದಸ್ಯರಾದ ಹ್ಯಾರಿಸ್ ಮತ್ತು ಫಲಾನುಭವಿಗಳೊಂದಿಗೆ ಪ್ರಾರಂಭೋತ್ಸವ ಕಾರ್ಯಕ್ರಮದ ಬಗ್ಗೆ ಚರ್ಚಿಸಿ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದರು. ಅದರಂತೆ ಈ ದಿನ ಗ್ರಾಮ ಪಂಚಾಯತಿ ವತಿಯಿಂದ ಸಮವಸ್ತ್ರ, ಅಶ್ವಿನಿ ಯೋಗಿನಿ ಅವರಿಂದ ಮಕ್ಕಳಿಗೆ ಚೇರ್, ಕೇದಂಬಾಡಿ ಯಮುನಾ ಕುಸುಮಾ ಅವರಿಂದ ಮಕ್ಕಳಿಗೆ ಸ್ವೆಟರ್ ಮತ್ತು ಕ್ಯಾಪ್, ಕೆದಂಬಾಡಿ ವರದರಾಜ ಅವರಿಂದ ಟೇಬಲ್, ಕೆದಂಬಾಡಿ ರುಕ್ಮಿಣಿ, ಪೂಣಚ್ಚ, ಭವಿತ್, ಹೇಮಲತಾ, ನಯನಾ ಅವರಿಂದ ಆಟಿಕೆಗಳಿಗಾಗಿ ಹಣ ಸಹಾಯ, ಕೆದಂಬಾಡಿ ರುಕ್ಮಿಣಿ ನಂಜಪ್ಪ ಅವರಿಂದ ಚೇರ್ ಮತ್ತು ಆಟಿಕೆಗಳನ್ನು ಕೊಡುಗೆಯಾಗಿ ಪಡೆಯಲಾಗಿದ್ದು, ಅವರಿಗೆ ಧನ್ಯವಾದ ಅರ್ಪಿಸಲಾಗುವುದು ಎಂದರು.

ಮಾದರಿಯಾಗಿ ಎಲ್‌ಕೆಜಿ ಕೇಂದ್ರವನ್ನಾಗಿ ಚೆಟ್ಟಿಮಾನಿ ಅಂಗನವಾಡಿಯನ್ನು ಪರಿವರ್ತಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಸುಶೀ, ಹಾಗೂ ಯೋಗಿತಾ ಶ್ರಮಿಸಿದ್ದು ಅವರಿಗೆ ಅಭಿನಂದನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಹ್ಯಾರಿಸ್ ಮಾತನಾಡಿ, ‘ಯಾವುದೇ ಯೋಜನೆಗಳನ್ನು ಇಲಾಖೆ ತಂದರೂ, ನಮ್ಮ ಗ್ರಾಮ ಪಂಚಾಯತಿಯ ಅಂಗನವಾಡಿ ಕಾರ್ಯಕರ್ತೆಯರು ಬಹಳ ಶಿಸ್ತಿನಿಂದ ಯೋಜನೆಯ ಯಶಸ್ವಿಗೆ ಶ್ರಮಿಸುತಿದ್ದಾರೆ’ ಎಂದು ಹರ್ಷ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಮಾತನಾಡಿ, ‘ಪೂರ್ವಭಾವಿ ಸಭೆಯಲ್ಲಿ ಹೆಚ್ಚುವರಿ ಕೊಠಡಿಯ ಬೇಡಿಕೆಯನ್ನು ಸಲ್ಲಿಸಿದ್ದು ಅದನ್ನು ನೆರವೇರಿಸುವುದಾಗಿ ಭರವಸೆ ನೀಡಿದರು.

ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಹೇಮಲತಾ, ಅಂಗನವಾಡಿ ಸಹಾಯಕಿ ವಾಸಂತಿ, ಕೋಡಿಮಟ್ಟೆ ಅಂಗನವಾಡಿ ಕಾರ್ಯಕರ್ತೆ ಮಾಲತಿ, ಚೆಟ್ಟಿಮಾನಿ ಅಂಗನವಾಡಿ ಕಾರ್ಯಕರ್ತೆ ಸುಶಿ, ಪದಕಲ್ಲು ಅಂಗನವಾಡಿ ಕಾರ್ಯಕರ್ತೆ ಯೋಗಿತಾ ಭಾಗಮಂಡಲ ವೃತ್ತದ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.