ADVERTISEMENT

ಮಡಿಕೇರಿ | ಲಂಚ ಪ್ರಕರಣ: ಉಪನೋಂದಣಾಧಿಕಾರಿ ಸೌಮ್ಯಲತಾ ಪರಾರಿ, ಮಧ್ಯವರ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 14:22 IST
Last Updated 20 ಮಾರ್ಚ್ 2024, 14:22 IST
   

ಮಡಿಕೇರಿ: ವ್ಯಕ್ತಿಯೊಬ್ಬರಿಂದ ಖಾತೆ ವರ್ಗಾವಣೆಗೆ ₹50 ಸಾವಿರ ಲಂಚ ಪಡೆಯುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಹರಿದತ್ತ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬುಧವಾರ ಇಲ್ಲಿ ಬಂಧಿಸಿದ್ದಾರೆ. ಪ್ರಕರಣದ ಆರೋಪಿ ಉಪನೋಂದಣಾಧಿಕಾರಿ ಸೌಮ್ಯಲತಾ ಪರಾರಿಯಾಗಿದ್ದಾರೆ.

ತಾಲ್ಲೂಕಿನ ಕೋರಂಗಾಲದ ವ್ಯಕ್ತಿಯೊಬ್ಬರಿಗೆ ಸೇರಿದ್ದ ಪಿತ್ರಾರ್ಜಿತ ಆಸ್ತಿಯ ಖಾತೆಯನ್ನು ಅವರ ಸೋದರಿ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಉಪನೋಂದಣಾಧಿಕಾರಿ ಸೌಮ್ಯಲತಾ ₹50 ಸಾವಿರ ಲಂಚ ಕೇಳಿದ್ದರು. ಈ ಹಣವನ್ನು ಮಧ್ಯವರ್ತಿ ಹರಿದತ್ತ ಎಂಬಾತನಿಗೆ ನೀಡಬೇಕು ಎಂದೂ ತಿಳಿಸಿದ್ದರು. ವ್ಯಕ್ತಿಯು ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಲೋಕಾಯುಕ್ತ ಪೊಲೀಸರ ಸೂಚನೆ ಮೇರೆಗೆ ವ್ಯಕ್ತಿಯು ಲಂಚದ ಹಣ ₹50 ಸಾವಿರವನ್ನು ಇಲ್ಲಿನ ಚೇನ್‌ ಗೇಟ್ ಬಳಿ ಇರುವ ಮಧ್ಯವರ್ತಿ ಹರಿದತ್ತ ಅವರ ಕಚೇರಿಯಲ್ಲಿ ಅಲ್ಲಿನ ಸಿಬ್ಬಂದಿಗೆ ನೀಡಿದರು. ಕೂಡಲೇ ಹರಿದತ್ತ ಅವರನ್ನು ಬಂಧಿಸಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ತಮ್ಮ ಕಚೇರಿಯಿಂದ ಸೌಮ್ಯಲತಾ ಪ‍ರಾರಿಯಾದರು. ಅವರಿಗಾಗಿ ಹುಡುಕಾಟ ನಡೆದಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೈಸೂರು ಲೋಕಾಯುಕ್ತ ಪೊಲೀಸ್ ಎಸ್.ಪಿ. ಸಜಿತ್ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್ ಮತ್ತು ರೂಪಶ್ರೀ ಕಾರ್ಯಾಚರಣೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.