
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಡಿಕೇರಿಯ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಯೋಗಿ ನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಮಡಿಕೇರಿ: ಬಲಿಜ ಸಮಾಜದವರಿಗೆ ಶಿಕ್ಷಣಕ್ಕೆ ಹಿಂದುಳಿದ ವರ್ಗ 2ಎ ಮೀಸಲಾತಿ. ಆದರೆ, ಉದ್ಯೋಗಕ್ಕೆ ಹಿಂದುಳಿದ ವರ್ಗ 3ಎ ಮೀಸಲಾತು. ಉದ್ಯೋಗಕ್ಕೂ 2ಎ ಮೀಸಲಾಯಿತಿ ನೀಡಬೇಕು ಎಂದು ಯೋಗಿ ನಾರೇಯಣ ಬಲಿಜ ಸಂಘದ ಜಿಲ್ಲಾಧ್ಯಕ್ಷ ಟಿ.ಜಿ.ಗಣೇಶ್ ನಾಯ್ಡು ಒತ್ತಾಯಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಯೋಗಿ ನಾರೇಯಣ ಯತೀಂದ್ರದ ಜಯಂತಿ(ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತೀ ಸಮಾಜದಲ್ಲಿಯೂ ಸಹ ಶ್ರೀಮಂತರು ಮತ್ತು ಬಡವರು ಇದ್ದಾರೆ. ಆದರೆ, ಕಡು ಬಡವರಿಗೆ ಉದ್ಯೋಗ ದೊರೆಯುತ್ತಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸಬೇಕು ಎಂದು ಅವರು ಹೇಳಿದರು.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಬಲಿಜ ಸಮಾಜದ ವಿದ್ಯಾರ್ಥಿಗಳು ಹಿಂದುಳಿದ ವರ್ಗ 2ಎ ನಲ್ಲಿ ಮೀಸಲಾತಿ ಪಡೆದು ಶಿಕ್ಷಣ ಪಡೆಯುತ್ತಾರೆ. ಆದರೆ, ಉದ್ಯೋಗ ಪಡೆಯಬೇಕಾದರೆ ಅವರು ಹಿಂದುಳಿದ ವರ್ಗ 3ಎ ನಲ್ಲಿ
ಪಡೆಯಬೇಕಿದೆ. ಇದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ವಿದ್ಯಾರ್ಥಿಗಳ ಉದ್ಯೋಗದ ಅನುಕೂಲಕ್ಕಾಗಿ 2ಎ ಹಿಂದುಳಿದ ವರ್ಗದ ಮೀಸಲಾತಿಯನ್ನೇ ನೀಡಬೇಕು ಎಂದು ಒತ್ತಾಯಿಸಿದರು.
ಕೈವಾರ ತಾತಯ್ಯ ಅವರ ಜೀವನ, ಆಚಾರ-ವಿಚಾರಗಳು, ಸಂಸ್ಕೃತಿ, ಸಮಾಜಕ್ಕೆ ನೀಡಿರುವ ಕೊಡುಗೆಯನ್ನು ಸದಾ ಸ್ಮರಿಸಬೇಕು ಎಂದು ಅವರು ತಿಳಿಸಿದರು.
ದಾರ್ಶನಿಕರಾಗಿದ್ದ ಕೈವಾರ ತಾತಯ್ಯ ಅವರು 1726ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ಜನಿಸಿದ್ದಾರೆ. ದಾಸರ ಪದಗಳು, ಕೀರ್ತನೆಗಳ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶವನ್ನು ಸಾರಿದ್ದಾರೆ. ಬಡವರು, ಅನಾಥರು ಇತರರಿಗಾಗಿ ಶ್ರಮಿಸಿದ್ದಾರೆ ಎಂದು ಅವರು ನುಡಿದರು.
ಬಲಿಜ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಟಿ.ಕೆ.ಮೀನಾಕ್ಷಿ ಕೇಶವ ಮಾತನಾಡಿ, ‘ಕೈವಾರ ತಾತಯ್ಯ ಅವರು ನಾಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರ ಸಮಾಜಮುಖಿ ಚಿಂತನೆಗಳು, ಆಲೋಚನೆಗಳು ದೂರದೃಷ್ಟಿ ಹೊಂದಿದ್ದವು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ, ಮುಖಂಡರಾದ ಎಚ್.ಎಲ್.ದಿವಾಕರ, ಕಂದಾ ದೇವಯ್ಯ ಉದಯ್ ಕುಮಾರ್, ಹೇಮಲತಾ, ಶ್ಯಾಮಲಾ, ನವೀನ, ಸಮಂತ್, ಯಶವಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.
ಕೈವಾರ ತಾತಯ್ಯ ಅವರ ಭಾವಚಿತ್ರಕ್ಕೆ ಪುಷ್ಪನಮನ
ಯೋಗಿ ನಾರೇಯಣ ಯತೀಂದ್ರರ ತತ್ವಾದರ್ಶ ಪಾಲಿಸಲು ಕರೆ
ಹಲವು ಮುಖಂಡರು ಭಾಗಿ
ರಥೋತ್ಸವ ಹಮ್ಮಿಕೊಳ್ಳಿ; ಪ್ರತಿ ಗ್ರಾಮದಲ್ಲೂ ಆಚರಿಸಿ– ಸಲಹೆ
ಕೊಡಗು ಬಲಿಜ ಸಮಾಜದ ಅಧ್ಯಕ್ಷ ಟಿ.ಎಲ್.ಶ್ರೀನಿವಾಸ್ ಮಾತನಾಡಿ, ‘ಕೊಡಗು ಜಿಲ್ಲೆಯಲ್ಲಿ ಬಲಿಜ ಸಮಾಜದ 8 ರಿಂದ 10 ಸಾವಿರ ಜನಸಂಖ್ಯೆ ಇದ್ದು, ಕೈವಾರ ತಾತಯ್ಯ ಅವರ ಜಯಂತಿ ಸಂದರ್ಭದಲ್ಲಿ ರಥೋತ್ಸವ ಹಮ್ಮಿಕೊಳ್ಳುವ ಅಗತ್ಯ ಇದೆ’ ಎಂದು ಹೇಳಿದರು.
ಜಿಲ್ಲೆಯ ಪ್ರತೀ ಗ್ರಾಮಗಳಲ್ಲಿ ಕೈವಾರ ತಾತಯ್ಯ ಅವರ ಜಯಂತಿಯನ್ನು ಆಚರಿಸಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.