ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ಮಕ್ಕಳ ದಸರೆಯಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು
ಪ್ರಜಾವಾಣಿ ಚಿತ್ರ/ರಂಗಸ್ವಾಮಿ
ಮಡಿಕೇರಿ: ಇಲ್ಲಿನ ಗಾಂಧಿ ಮೈದಾನವು ಮಂಗಳವಾರ ಮಕ್ಕಳಿಂದ ತುಂಬಿ ತುಳುಕಿತು. ಕಾಲಿಡಲೂ ಜಾಗವಿಲ್ಲದಂತಹ ಸ್ಥಿತಿ ಮೈದಾನದಲ್ಲಿತ್ತು. ಎಲ್ಲಿ ನೋಡಿದರಲ್ಲಿ ಮಕ್ಕಳೇ ಕಂಡು ಬಂದರು. ಮಡಿಕೇರಿ ದಸರೆಯ 9ನೇ ದಿನ ಸಂಪೂರ್ಣ ಮಕ್ಕಳಮಯವಾಗಿತ್ತು.
ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಇಲ್ಲಿ ನಡೆದ 12ನೇ ವರ್ಷದ ಮಕ್ಕಳ ದಸರೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದು ವಿಶೇಷ ಎನಿಸಿತ್ತು. ಮಾತ್ರವಲ್ಲ, ತಮ್ಮ ತಮ್ಮ ವ್ಯಾಪಾರ ಚಾತುರ್ಯವನ್ನು ತೋರ್ಪಡಿಸಿ ಗಮನ ಸೆಳೆದರು.
ಅಬ್ಬರ ಸಂಗೀತ ಇಲ್ಲ, ತಳ್ಳಾಟ ನೂಕಾಟ ಇಲ್ಲದೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿರಮ್ಮಳರಾಗಿ ಮಕ್ಕಳ ದಸರೆಯಲ್ಲಿ ಭಾಗಿಯಾದರು.
ಒಟ್ಟು 105 ಮಕ್ಕಳ ಅಂಗಡಿಗಳು, ಸಂತೆಯಲ್ಲಿ 80ಕ್ಕೂ ಅಧಿಕ ಮಕ್ಕಳು, ಛದ್ಮವೇಷ ಸ್ಪರ್ಧೆಯಲ್ಲಿ 67 ಮಕ್ಕಳು, ಕ್ಲೇ ಮಾಡೆಲಿಂಗ್ನಲ್ಲಿ 15 ಮಕ್ಕಳೂ ಭಾಗವಹಿಸಿದ್ದರು. ಒಟ್ಟು 18 ಮಕ್ಕಳ ಮಂಟಪಗಳು ಪ್ರದರ್ಶನದಲ್ಲಿ ಭಾಗವಹಿಸಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯಿತು.
ಒಂದೆಡೆ ಮಕ್ಕಳ ಸಂತೆ, ಮತ್ತೊಂದೆಡೆ ಮಕ್ಕಳ ಅಂಗಡಿ, ಮೊಗದಂದು ಕಡೆ ಮಕ್ಕಳೇ ರಚಿಸಿದ ಮಂಟಪಗಳು, ಒಂದೇ ಎರಡೇ, ನೂರಾರು ನೋಟಗಳು ಕಣ್ಣಿಗೆ ಸೆರೆಯಾದವು. ಗಾಂಧಿ ಮೈದಾನಕ್ಕೆ ಬಂದವರಿಗೆ ಒಂದಿನಿತೂ ಬೇಸರವಾಗದ ಹಾಗೆ ಏಕಕಾಲದಲ್ಲೇ ಹಲವು ಬಗೆಯ ಕಾರ್ಯಕ್ರಮಗಳು ನಡೆದು, ನೋಡುಗರಿಗೆ ರಸದೌತಣವನ್ನೇ ಉಣಬಡಿಸಿದವು.
ಮನೆಯಂಗಳದಲ್ಲಿ ಬೆಳೆದ ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಹಣ್ಣುಗಳು, ಗಿಡಗಳು, ಬಳ್ಳಿಗಳು, ಕಾಯಿ, ಎಲೆ, ಚಿಗುರು ಹೀಗೆ ನಾನಾ ಬಗೆಯ ವಸ್ತುಗಳ ಮಾರಾಟದಲ್ಲಿ ಮಕ್ಕಳು ಲಘುಬಗೆಯಿಂದ ತೊಡಗಿದ್ದರು.
ಪಾನೀಪೂರಿ, ಚುರುಮುರಿ, ತಂಪುಪಾನೀಯಗಳು, ವಿವಿಧ ಬಗೆಯ ಹೋಳಿಗೆಗಳು, ಸಿಹಿ ತಿನಿಸುಗಳು ಸೇರಿದಂತೆ ವೈವಿಧ್ಯಮಯವಾದ ಖಾದ್ಯಗಳನ್ನಿರಿಸಿಕೊಂಡ ಮಕ್ಕಳು ಬಂದವರಿಗೆ ರುಚಿಕರವಾದ ತನಿಸುಗಳನ್ನು ನೀಡಿ ಶಹಬ್ಬಾಸ್ ಪಡೆದರು. ಮಕ್ಕಳಿಂದಲೇ ತಯಾರಾದ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದರು.
ಮಕ್ಕಳು ರೂಪಿಸಿದ್ದ 18 ಮಂಟಪಗಳು ನೋಡುಗರನ್ನು ಸೋಜಿಗಕ್ಕೆ ದೂಡಿದವು. ಯಾವುದೇ ಅಬ್ಬರದ ಡಿ.ಜೆ ಇಲ್ಲದೇ ಮಾದರಿ ಎನಿಸಿದರು. ಭವ್ಯವಾದ ಕಲಾಕೃತಿಗಳನ್ನು ಸೃಜಿಸಿ, ಕಥೆಗೆ ತಕ್ಕಂತೆ ಕಲಾಕೃತಿಗಳನ್ನು ಚಲಿಸಿ ತಮ್ಮ ಮಂಟಪಗಳು ದಸರಾ ದಶಮಂಟಪಗಳಿಗೆ ಏನೂ ಕಡಿಮೆ ಇಲ್ಲ ಎಂಬಂತೆ ಪ್ರದರ್ಶಿಸಿದ್ದನ್ನು ನೋಡಿ ಸಾರ್ವಜನಿಕರು ಅಚ್ಚರಿಪಟ್ಟರು.
ಇನ್ನು ವೇದಿಕೆಯ ಮೇಲೆ 67 ಮಕ್ಕಳು ವಿವಿಧ ಬಗೆಯ ವೇಷಭೂಷಣ ತೊಟ್ಟ ಹೃನ್ಮನಗಳನ್ನು ತಣಿಸಿದರು. ಕಿಂಚಿತ್ತೂ ಬೇಸರವಾಗದ ಆಗದ ಹಾಗೆ ಮಕ್ಕಳ ದಸರೆ ಯಶಸ್ವಿಯಾಯಿತು.
ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ಕಾರ್ಯದರ್ಶಿ ಬಿ.ಕೆ.ಕಾರ್ಯಪ್ಪ, ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್, ಡಾ.ಜಿ.ಡಿ.ಚೇತನ್, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಮುಡಾ ಸದಸ್ಯೆ ಮೀನಾಜ್ ಪ್ರವೀಣ್, ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಬಹುಮಾನಗಳನ್ನು ವಿತರಿಸಿದರು.
ನಾನು ಚಕ್ಕೊತ್ತಾ ಸೀಬೆಕಾಯಿಶುಂಠಿ ತಂದಿರುವೆ. ಮಕ್ಕಳ ಸಂತೆ ತುಂಬಾ ಖುಷಿ ನೀಡಿತುಯಾನಾ ಕೇಂದ್ರೀಯ ವಿದ್ಯಾಲಯ.
ಮಕ್ಕಳ ದಸರೆಗೆ ಬಂದು ಖುಷಿಯಾಯಿತು. ನಾನು ತಂದ ಅನೇಕ ವಸ್ತುಗಳು ಮಾರಾಟವಾದವುಆಶಿತಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಾಳಿಬೀಡು.
ಸಂತ ಜೋಸೆಫರ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಮೌಲ್ಯ ಸೇರಿದಂತೆ ಹಲವು ಮಕ್ಕಳು ತಾವೇ ರಚಿಸಿದ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಿದ್ದರು. ಇವುಗಳಲ್ಲಿ ಸುಮಾರು 2 ಸಾವಿರ ಬೆಲೆಯ ಚಿತ್ರಗಳೂ ಅಲ್ಲಿದ್ದವು. ಮೌಲ್ಯ ಅವರು ಬಂದ ಮಕ್ಕಳಿಗೆ ಟ್ಯಾಟೊ ಮಾದರಿಯಲ್ಲಿ ಅವರ ಕೈಯ ಮೇಲೆ ಚಿತ್ರ ಬಿಡಿಸಿ ಗಮನ ಸೆಳೆದಳು. ವಿರಾಜಪೇಟೆಯ ಎಸ್ಎಂಎಸ್ ಶಾಲೆಯ ಚೆಂಗಪ್ಪ ಸ್ಮರಣ್ ಅವರು ಸೇರಿದಂತೆ ಹಲವು ಮಕ್ಕಳು ವಿವಿಧ ಬಗೆಯ ಮೀನುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದರು. ಇದು ಸಹ ಸಾರ್ವಜನಿಕರನ್ನು ಸೂಜಿಗಲ್ಲಿನಂತೆ ಸೆಳೆಯಿತು. ಜೊತೆಗೆ ವಿಭಿನ್ನ ಕಾರ್ಯತಂತ್ರಗಳನ್ನು ಮಕ್ಕಳ ಉಪಯೋಗಿಸಿದರು.
ಮಕ್ಕಳೇ ಭವಿಷ್ಯ ಮಕ್ಕಳೇ ನಮ್ಮ ಶಕ್ತಿ. ಮಕ್ಕಳಿಗೆ ನಮ್ಮ ಸಂಸ್ಕೃತಿ ಪರಿಚಯಿಸುವ ಇಂತಹ ಕ್ರಿಯಾತ್ಮಕ ಚಟುವಟಿಕೆ ಮಕ್ಕಳ ದಸರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಬಂದಿದ್ದು ವಿಶೇಷ.ವೆಂಕಟ್ ರಾಜಾ ಕೊಡಗು ಜಿಲ್ಲಾಧಿಕಾರಿ
ಮಕ್ಕಳ ದಸರೆಗೆ ಅಂದು ನಗರಸಭೆ ಅಧ್ಯಕ್ಷೆಯಾಗಿದ್ದ ಜುಲೇಕಾಬಿ ಅವಕಾಶ ಮಾಡಿಕೊಟ್ಟರು. ನಂತರದ ಹಾಗೂ ಈಗಿನ ಅಧ್ಯಕ್ಷರೆಲ್ಲ ಸಹಕಾರ ನೀಡಿದ್ದಾರೆ.ಎಚ್.ಟಿ.ಅನಿಲ್ ಮಕ್ಕಳ ದಸರೆಯ ಸಂಚಾಲಕ
ಸಮಾಜಮುಖಿ ಕಾರ್ಯಗಳಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಮಕ್ಕಳ ದಸರೆ ಯಶಸ್ವಿಯಾಗಿದೆ.ರತ್ನಾಕರ ರೈ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ
ಮುಂದಿನ ದಿನಗಳಲ್ಲಿ ಮಕ್ಕಳ ದಸರೆಗೆ ಈ ಮೈದಾನ ಸಾಕಾಗುವುದಿಲ್ಲ ಎಂದು ಅನ್ನಿಸುತ್ತದೆ. ಮಕ್ಕಳ ಮೇಲೆ ಒತ್ತಡ ಹೇರದೇ ಅವರಲ್ಲಿರುವ ಪ್ರತಿಭೆ ಹೊರಹೊಮ್ಮಲು ಅವಕಾಶ ನೀಡಿಬಿ.ಕೆ.ಅರುಣ್ಕುಮಾರ್ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.