ADVERTISEMENT

ಮಡಿಕೇರಿಯ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆದ ವಿಜೃಂಭಣೆಯ ಕರಗೋತ್ಸವ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 14:34 IST
Last Updated 26 ಸೆಪ್ಟೆಂಬರ್ 2022, 14:34 IST
   

ಮಡಿಕೇರಿ: ‘ಮಂಜಿನ ನಗರಿ’ ಮಡಿಕೇರಿಯ ದಸರಾ ಮಹೋತ್ಸವಕ್ಕೆ ಸೋಮವಾರ ವಿಜೃಂಭಣೆಯ ಕರಗೋತ್ಸವ ಮುನ್ನುಡಿ ಬರೆಯಿತು.

ಪಡುವಣದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಇಲ್ಲಿನ ಪಂಪಿನ ಕೆರೆಯ ಆವರಣದಲ್ಲಿ ನಗರದ ನಾಲ್ಕು ಶಕ್ತಿ ದೇವತೆಗಳಾದ ಕಂಚಿ ಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮನ ಕರಗೋತ್ಸವದ ನಗರ ಪ್ರದಕ್ಷಿಣೆಗೆ ಹೊರಟವು. ಮಹದೇವಪೇಟೆಯ ಮೂಲಕ ಪೇಟೆ ಶ್ರೀರಾಮಮಂದಿರ ತಲುಪಿದ ನಾಲ್ಕು ಕರಗಗಳಿಗೆ ದಾರಿಯುದ್ದಕ್ಕೂ ಜನರು ಪೂಜೆ ಸಲ್ಲಿಸಿದರು.

ಹಲವು ಬಗೆಯ ಕಲಾತಂಡಗಳೂ ಮೆರವಣಿಗೆಯಲ್ಲಿ ಭಾಗಿಯಾದವು. ಮಂಗಳವಾದ್ಯಗಳ ನಿನಾದಕ್ಕೆ ಕರಗಧಾರಿಗಳು ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಎಂ.ಪಿ.ಅಪ್ಪಚ್ಚುರಂಜನ್ ಅವರು ಕರಗೋತ್ಸವಕ್ಕೆ ಚಾಲನೆ ನೀಡಿದರು. ಗೋಣಿಕೊಪ್ಪಲಿನಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ದಸರಾ ಉತ್ಸವ ಆರಂಭಗೊಂಡಿದೆ.

ADVERTISEMENT

ಕರಗೋತ್ಸವದ ಮೂಲಕ ಆರಂಭವಾದ ಮಡಿಕೇರಿ ದಸರಾ ಅ. 5ರವರೆಗೂ ನಿತ್ಯ ಹಲವು ಬಗೆಯ ಕಾರ್ಯಕ್ರಮಗಳ ಮೂಲಕ ಪ್ರವಾಸಿಗರನ್ನು ಸೆಳೆಯಲಿದೆ.

ಸೆ. 27ರಿಂದ 29ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸೆ. 30ರಂದು ಮಹಿಳಾ ದಸರೆ, ಅ. 1ರಂದು ಯುವ ಕಲೋತ್ಸವ, ಅ. 2ರಂದು ಜನಪದ ದಸರೆ, 3ರಂದು ಮಕ್ಕಳ ದಸರೆ, 5ರಂದು ದಶಮಂಟಪಗಳ ಶೋಭಾಯಾತ್ರೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.