ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಮುಂಗಾರು ಬಿರುಸಾಗಿದೆ. ಮೇ ತಿಂಗಳಿಂದ ಆರಂಭವಾಗಿರುವ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಜನಸಾಮಾನ್ಯರು ಮಳೆಯಿಂದ ಹೈರಣಾಗಿದ್ದಾರೆ. ಭಾನುವಾರವೂ ಬಿರುಸಾಗಿ ಗಾಳಿ ಬೀಸಿದ್ದು, ನಗರ ಸೇರಿದಂತೆ ಹಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ.
ಮತ್ತಷ್ಟು ಹೆಚ್ಚು ಭಾರಿ ಮಳೆ ಬೀಳುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ ಕೊಡಗು ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ. ಇದರ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು, ‘ಕೊಡಗು ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಇದ್ದು, ಗಾಳಿ ಸಹಿತ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಆ. 18ರಂದು ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.
ಮಡಿಕೇರಿ ನಗರದಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿದ್ದ ಮಳೆ ಭಾನುವಾರವೂ ನಿಲ್ಲಲಿಲ್ಲ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಜೋರಾಗಿ ಬೀಸುತ್ತಿದ್ದ ಗಾಳಿಯು ಕೊಡೆ ಹಿಡಿದು ರಸ್ತೆಯಲ್ಲಿ ನಡೆಯದಂತೆ ಮಾಡಿತು. ಹೆಚ್ಚಿದ ಶೀತಗಾಳಿಯಿಂದ ಜನರು ನಡುಗಿದರು.
ಮತ್ತೊಂದೆಡೆ, ದಿನವಿಡೀ ದಟ್ಟ ಮೋಡಗಳು ನಗರವನ್ನು ಆವರಿಸಿತ್ತು. ಹೀಗಾಗಿ, ಮಧ್ಯಾಹ್ನವಾದರೂ ಸಂಜೆಯಂತೆ ವಾತಾರಣ ಇತ್ತು. ಹಲವೆಡೆ ದಟ್ಟ ಮಂಜು ಆವರಿಸಿತ್ತು.
ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಭಾಗದಲ್ಲಿ ಶನಿವಾರ ಭಾರಿ ಮಳೆ ಸುರಿದಿದ್ದು, 10 ಸೆಂ.ಮೀ ನಷ್ಟು ಮಳೆ ಶನಿವಾರ ರಾತ್ರಿಯವರೆಗೆ ದಾಖಲಾಗಿತ್ತು.
ಉಳಿದಂತೆ, ಬಿ.ಶೆಟ್ಟಿಗೇರಿ, ಚೆಂಬು, ಮದೆ, ಪೆರಾಜೆಯಲ್ಲಿ ತಲಾ 6 ಹಾಗೂ ಕುಟ್ಟದಲ್ಲಿ 5 ಸೆಂ.ಮೀನಷ್ಟು ಸುರಿದಿತ್ತು.
ಮಡಿಕೇರಿ ತಾಲ್ಲೂಕಿನ ಸಂಪಾಜೆ ಹೋಬಳಿ ಹೆರವನಾಡು ಗ್ರಾಮದ ಕೇಟೋಳಿ ಮೋಹನ್ ರಾಜ್ ಎಂಬುವವರ ಕೊಟ್ಟಿಗೆ ಮೇಲೆ ವಿದ್ಯುತ್ ಕಂಬ ಬಿದ್ದು ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ.
ವಿರಾಜಪೇಟೆ: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮಳೆಯ ಆರ್ಭಟ ಹೆಚ್ಚಿತ್ತು. ಶನಿವಾರ ಮಧ್ಯಾಹ್ನದ ನಂತರ ಬಿರುಸುಗೊಂಡ ಮಳೆಯು ರಾತ್ರಿಯಿಡಿ ಧಾರಾಕಾರವಾಗಿ ಸುರಿಯಿತು. ಭಾನುವಾರವೂ ಮುಂದುವರಿದ ಮಳೆಯು ದಿನವಿಡಿ ಆರ್ಭಟಿಸಿತ್ತು. ಪಟ್ಟಣವಲ್ಲದೆ ಸುತ್ತಮುತ್ತಲಿನ ಗ್ರಾಮಗಳಾದ ಹೆಗ್ಗಳ ಬೇಟೋಳಿ ಆರ್ಜಿ ಬಿಟ್ಟಂಗಾಲ ಕಾಕೋಟುಪರಂಬು ಕದನೂರು ಕೆದಮುಳ್ಳೂರು ಸೇರಿ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಬಿರುಸಿನ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.