ADVERTISEMENT

ಮಡಿಕೇರಿ ನಗರಸಭೆ ಚುನಾವಣೆ ದಿಢೀರ್ ರದ್ದು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 10:03 IST
Last Updated 11 ಅಕ್ಟೋಬರ್ 2021, 10:03 IST
   

ಮಡಿಕೇರಿ: ಇಲ್ಲಿನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಮಧ್ಯಾಹ್ನ ನಿಗದಿಯಾಗಿದ್ದ ಚುನಾವಣೆಯನ್ನು ಚುನಾವಣಾಧಿಕಾರಿ ದಿಢೀರ್ ರದ್ದುಗೊಳಿಸಿದರು.

ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರಿಗೆ ಚುನಾವಣೆಯ ನೋಟಿಸ್ ತಲುಪದ ಕಾರಣಕ್ಕೆ ಚುನಾವಣೆಯನ್ನು ಮುಂದೂಡಿ, ಆದೇಶಿಸಿದರು.

ಇದರಿಂದ ಬಿಜೆಪಿ ಸದಸ್ಯರು ಚುನಾವಣಾ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದರು. ಅಧಿಕಾರಿಗಳ

ADVERTISEMENT

ನಿರ್ಲಕ್ಷ್ಯದಿಂದ ಚುನಾವಣೆ ಪ್ರಕ್ರಿಯೆ ರದ್ದಾಗಿದೆ‌. ಚುನಾವಣೆಗೋಸ್ಕರ ಶಾಸಕರು ಹಾಗೂ ಸಂಸದರು ಆಗಮಿಸಿದ್ದಾರೆ. ನಾಮಪತ್ರ ಸಲ್ಲಿಕೆ ವೇಳೆಯೇ ಮಾಹಿತಿ ನೀಡಬಹುದಿತ್ತು ಎಂದು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಹೇಳಿದರು. ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ರಾಕೇಶ್ ನಾಮಪತ್ರ ಸಲ್ಲಿಸಿದ್ದರು.

ಎಸ್‌ಡಿಪಿಐನಿಂದ ಅಧ್ಯಕ್ಷ ಸ್ಥಾನಕ್ಕೆ ಮೇರಿ ವೇಗಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನೀಮಾ ಅರ್ಷದ್ ಅವರು ನಾಮಪತ್ರ ಸಲ್ಲಿಸಿದ್ದರು.

ಮಡಿಕೇರಿ ನಗರಸಭೆಯಲ್ಲಿ ಬಿಜೆಪಿಯ 16, ಕಾಂಗ್ರೆಸ್‌ನ 1, ಎಸ್‌ಡಿಪಿಐ‌ನ 5 ಹಾಗೂ ಜೆಡಿಎಸ್‌ 1 ಸದಸ್ಯರಿದ್ದಾರೆ.

ಅನಿತಾ ಹಾಗೂ ಸವಿತಾ ಅವರು ನಾಮಪತ್ರ ಸಲ್ಲಿಕೆ ವೇಳೆ ಗೆಲುವಿನ ಸಂಕೇತ ತೋರಿಸಿ ಸಂಭ್ರಮಿಸಿದರು. ಮಧ್ಯಾಹ್ನದ ವೇಳೆಗೆ ಸಂಭ್ರಮ ಮಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.